ಹಸಿರು ಹಾವು



ಅದು ಬಹಳ ಸರಳವಾಗಿತ್ತು
ನನಗೆ ಗೊತ್ತಿರಲಿಲ್ಲ
ನಾವು ಕದಲಿಸದೆ ಹೋದರೆ
ತಿಂಗಳುಗಟ್ಟಲೆ ಅದು ಹಾಗೇ ಅಲ್ಲೇ
ಇರುತ್ತೆ ಅಂತ
ಹಸಿರು ಹಾವು
ಮೇಲೆ ಬಿದ್ದರೂ ಏನೂ ಮಾಡುವುದಿಲ್ಲವಂತೆ

ದಿಗಿಲಾಗಿತ್ತು
ಕಾಯುವುದರಲ್ಲಲ್ಲ
ಕೊಲ್ಲುವುದರಲ್ಲಲ್ಲ
ಹಾಗೆ ಬಿಟ್ಟರೆ
ಹಸಿರುಹಾವು
ನಿಜ
ಆದರೂ ಭಯ

ಅದನ್ನು
ಹಾಗೆ ದಿಟ್ಟಿಸಿದ್ದರಲ್ಲಿ
ಏನೂ ವಿಶೇಷವಿರಲಿಲ್ಲ
ಹಸಿರು ಹಾವು
ಹಸಿರಾಗಿತ್ತು ಅಷ್ಟೆ

ಗರುಡಗಂಬದ ಕತೆಗಳು


ನನ್ನ ತಾತ ಕಡೇ ದಿನಗಳಲ್ಲಿ ಬಾಳ ಹಲುಬುತ್ತಿದ್ದ
ಗರುಡಗಂಬ ಗರ್ಡಗಂಬ ಗರ್ಡಗಂಬ ಅಂತ
ಚಂದಾ ಪಡೀಲಿಕ್ಕೆ ರಸೀದಿಗಳನ್ನೂ ಮುದ್ರಿಸಿದ್ದ
ಅದ್ಯಾಕೋ ಗರುಡಗಂಬಾನ ಪ್ರತಿಷ್ಟಾಪಿಸಲಿಕ್ಕೆ ಆಗಿರಲೇ ಇಲ್ಲ.

ತಾತ ಹೋದ ನಂತರ
ನನ್ನ ಗಣಿತದ ಲೆಕ್ಕಾಚಾರದ ಅಭ್ಯಾಸಕ್ಕೆ
ಈ ರಸೀದಿ ಪುಸ್ತಕಗಳನ್ನುಪಯೋಗಿಸಿದ್ದೆ
ಪ್ರಥಮ ದರ್ಜೆಯಲ್ಲಿ ಪಾಸಾಗಿ
ಸೈದ್ಧಾಂತಿಕ ಭೌತಶಾಸ್ತ್ರಜ್ಞನಾದೆ

ನನ್ನ ತಾತ ಕಟ್ಟಿದ ಮನೆಯನ್ನ
ನವೀಕರಣಕ್ಕೊಳಪಡಿಸಹೊರಟಾಗ
ನನ್ನ ಹಳೆಯ ಪುಸ್ತಕಗಳ ಜೊತೇಲಿ
ಈ ರಸೀದಿ ಪುಸ್ತಕಗಳೂ ಸಿಕ್ಕವು

ಇತ್ತೀಚೆಗೊಮ್ಮೆ ಆಕಸ್ಮಿಕವಾಗಿ
ಊರ ಹೊಲದಲ್ಲಿ ಗರುಡಗಂಬವೊಂದು ಸಿಕ್ಕಿತು
ದೇವಸ್ಥಾನದ ಮುಂದೆ ತಂದು ಮಲಗಿಸಿದ್ದಾರೆ

ನನ್ನ ಮಗಳು ಈ ರಸೀದಿಗಳಿಂದ ಕಾಗದದ ದೋಣಿಯನ್ನು ಮಾಡಿ
ಮಳೆ ನೀರಲ್ಲಿ ಹರಿಬಿಟ್ಟಿದ್ದಳು
ಆ ಕಾಗದದ ದೋಣಿಗಳೆಲ್ಲಾ ಬಂದು ಗರುಡಗಂಬಕ್ಕೆ ಸಿಕ್ಕಿ ಹಾಕಿಕೊಂಡಿತ್ತು
ನಾನು ಮಾತ್ರ
ಒಂದೊಂದೇ ದೋಣಿಗಳು ಬಂದು ಅಲ್ಲಿ ಸಿಕ್ಕಿ ಹಾಕಿಕೊಳ್ಳುವುದನ್ನ
ನೋಡುತ್ತಿದ್ದೆ.

ಒಂದು ಸಾಲಿನ ಕವಿತೆಗಳು

1. ಪಠ್ಯ

ಬಿಟ್ಟು ಬಂದ ಚಪ್ಪಲಿಗಳು ಅಲ್ಲೇ ಇತ್ತು

***************************
2. ಸಂಪ್ರದಾಯ 

ಬಿಟ್ಟು ಬಂದ ಚಪ್ಪಲಿಗಳು ಪಾದುಕೆಗಳಾಗಿತ್ತು.

****************************
3. ಮತ್ತೆ ಗಾಂದಿ 
ಸದಾ ಗಾಂದಿ ಪಾತ್ರ ಮಾಡಿದ ನಟ ಚಪ್ಪಲಿಗಳನ್ನಾಕಿಕೊಳ್ಳಲೇ ಇಲ್ಲ.

*****************************

ಅಗ್ನಿಪಥ

ಮಹಾಭಾರತ ಯಾರ ಕಥೆ? ಕೃಷ್ಣನ ಕಥೆಯೆ? ಭೀಮನ ಕಥೆಯೆ? ಅರ್ಜುನನ ಕಥೆಯೆ? ಇವರ್ಯಾರದೂ ಅಲ್ಲ. ಅದು ಅಂಬೆ, ಗಾಂಧಾರಿ, ಮಾದ್ರಿ, ಕುಂತಿ, ದ್ರೌಪದಿಯರೆಂಬ ಐದು ಹೆಣ್ಣುಗಳ ಕಥೆಯೆಂದು ಅಗ್ನಿಪಥ ನಾಟಕ ತೆರೆದುಕೊಂಡಿತು. ಭಾನುವಾರ(೧-ಸೆಪ್ಟಂಬರ್) ಮೈಸೂರಿನ ನಟನ ತಂಡದವರ "ಅಗ್ನಿಪಥ" ನಾಟಕವನ್ನು ರಂಗಶಂಕರದಲ್ಲಿ ನೋಡಿದ ನಂತರ ನನ್ನನ್ನು ಇಡೀ ಮಹಾಭಾರತ ಕತೆಯೆ ಮತ್ತೊಮ್ಮೆ ಮತ್ತೊಂದು ಅರ್ಥದಲ್ಲಿ ತೆರೆದುಕೊಂಡಿತು. ಇತ್ತೀಚಿನ ದಿನದಲ್ಲಿ ಹಲವಾರು ಖ್ಯಾತನಾಮರ(ಮುಖ್ಯವಾಗಿ ಧಾರವಾಹಿಗಳಲ್ಲಿ ಮಾಡುವ ಖ್ಯಾತನಾಮರ) ನಾಟಕಗಳನ್ನು ನೋಡಿ ಅದರ ಏಕತಾನತೆಗೆ ಬೇಸರಬಂದಿತ್ತು. ನಟನದ(http://natanamysore.com/) ಈ ಪ್ರಯೋಗ ಎಲ್ಲ ವಿಧದಲ್ಲಿಯೂ ಇಷ್ಟವಾಯಿತು. 

ಪುರಾಣಪಾತ್ರಗಳನ್ನು ಮತ್ತೆ ಮತ್ತೆ ಕಾವ್ಯದಲ್ಲಿಯೋ, ನಾಟಕದಲ್ಲಿಯೋ, ಕಾದಂಬರಿಯಲ್ಲಿಯೋ ತಂದಾಗಲೆಲ್ಲ, ಅದೇಕೆ ಅದೆ ಹಳೆ ಪಾತ್ರಗಳನ್ನೇ ತರುತ್ತಾರೆ? ಹೊಸ ಪಾತ್ರಗಳನ್ನೂ, ಹೊಸ ಕತೆಯನ್ನೂ ಕಟ್ಟಿಕೊಡಬಹುದಲ್ಲವ ಎಂದು ಅನ್ನಿಸುತ್ತೆ. ಹೀಗಿದ್ದರೂ, ಪುರಾಣ, ಐತಿಹಾಸಿಕ ಪಾತ್ರಗಳು, ಕತೆಗಳು ಎಂದೆಂದಿಗೂ ಪ್ರಸ್ತುತವಾಗಿರುತ್ತೆ ಎಂಬ ಉತ್ತರದಿಂದ ಅದು ಮತ್ತೆ ಮತ್ತೆ ರಂಗಕ್ಕೇರುತ್ತೆ. ಹೀಗೆ ಒಂದು ಪುರಾಣ, ಐತಿಹಾಸಿಕ ಕೃತಿ ರಂಗಕ್ಕೇರಿದಾಗ ಅದು ಆ ಕಾಲದ ಪರಿಸ್ಥಿಗಳೊಂದಿಗೆ ಪ್ರಸ್ತುತವಾದಾಗ, ಹಾಗೆ ಹೊಸದಾಗಿ ರೂಪಾಂತರಗೊಂಡ ಕೃತಿಗೆ ಮೌಲ್ಯ. ಮಹಾಭಾರತದ ಕತೆ, ಅದರ ಆಳ, ಸಂಕೀರ್ಣತೆಗಳಿಂದ ಎಂದಿಗೂ ಪ್ರಸ್ತುತವಾದರೂ, ಯಾವ ಪ್ರಶ್ನೆಯನ್ನ ಮುಂದಿಟ್ಟುಕೊಂಡು ಮಹಾಭಾರತದ ಕತೆಯನ್ನ ಮತ್ತೆ ರಂಗಕ್ಕೆ ತರುತ್ತಿದ್ದೇವೆ ಎಂಬುದು ಬಹಳ ಮುಖ್ಯವಾಗುತ್ತೆ. ಹೀಗಾಗಿ, ನಟನದ "ಅಗ್ನಿಪಥ" ಪ್ರಯೋಗ  ಮಹಾಭಾರತದ ಸ್ತ್ರೀ ಪಾತ್ರಗಳ ನೋವು, ಹತಾಷೆ, ಅವಮಾನಗಳ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಮಹಾಭಾರತದ ಕತೆಯನ್ನು ಮತ್ತೆ ರಂಗಕ್ಕೇರಿಸಿರುವುದು ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಸರಿಯಾಗಿದೆ.

ಅಗ್ನಿಪಥ ನಾಟಕವು ಅಂಬೆ, ಗಾಂದಾರಿ, ಮಾದ್ರಿ, ದ್ರೌಪದಿ ಹಾಗು ಕುಂತಿಯರ ಕಥೆಗಳುಳ್ಳ, ಅವರ ಬದುಕಿನ ದುರಂತಗಳನ್ನೂ, ಸೂಕ್ಷ್ಮಗಳನ್ನೂ ಎಚ್ಚರಿಕೆಯಿಂದ ನಮ್ಮ ಮುಂದೆ ಇಡುವ, ನಮ್ಮ ಮುಂದೆ ಇಟ್ಟು, ನಮ್ಮನ್ನೂ ನೇರವಾಗಿ ಪ್ರಶ್ನೆಸುವ ಕಥೆಯುಳ್ಳ ನಾಟಕ. ಬಿ. ಜಯಶ್ರಿಯವರು  ನಿರ್ದೇಶಿಸಿ, ಸಂಗೀತವನ್ನು ನೀಡಿದ ನಾಟಕ. ಸಂಭಾಷಣೆ ಮಂಡ್ಯ ರಮೇಶ ಹಾಗು ಮುರಳಿ ಶೃಂಗೇರಿ. 
ಸ್ವಯಂವರಕ್ಕಾಗಿ ಸಿಂಗರಿಸಿಕೊಂಡು ಅಂಬೆ, ಅವರ ಸಹೋದರಿಯರೊಡನೆ ನಿಂತಿದ್ದಾಳೆ. ಎಲ್ಲ ದೇಶದ ರಾಜರುಗಳೂ ಸೇರಿದ್ದಾರೆ. ಆಗ ಭೀಷ್ಮನೂ ಸ್ವಯಂವರಕ್ಕೆ  ಬರುತ್ತಿದ್ದಾನೆಂದು ಸುದ್ದಿಯಾಗುತ್ತೆ. ಭೀಷ್ಮನೇಕೆ ಬಂದ ಎಂದು ಎಲ್ಲರೂ ಗಾಬರಿಗೊಳ್ಳುತ್ತಾರೆ. ಹಲವು ವಿಧದ ಮದುವೆಗಳನ್ನು ಹೇಳಿದ ಭೀಷ್ಮನು ತಾನು ಅಲ್ಲಿ ಸೇರಿದ ರಾಜರುಗಳನ್ನೆಲ್ಲ ಸೋಲಿಸಿದರೆ, ಅಂಬೆ ಹಾಗು ಅವರ ಸೋದರಿಯರು ಅವನದ್ದಾಗುತ್ತಾರೆಂದು ಹೇಳಿ ರಾಜರುಗಳನ್ನೆಲ್ಲಾ ಸೋಲಿಸಿ ಅಂಬೆ ಹಾಗು ಅವರ ಸೋದರಿಯರನ್ನು ಕೊಂಡೊಯ್ಯುತ್ತಾನೆ. ಇಲ್ಲಿನ ಭೀಷ್ಮನ ಮಾತುಗಳನ್ನು ಕೇಳಬೇಕು, ತಾನು ಅಲ್ಲಿ ಸೇರಿದ ರಾಜರುಗಳನ್ನು ಸೋಲಿಸಿದ್ದಕ್ಕೆ ಆ ಹೆಣ್ಣುಗಳ ಮೇಲೆ ತನಗೆ ಅಧಿಕಾರವೆಂದೇಳುತ್ತಾನೆ. ಹೆಣ್ಣಿನ ಮೇಲಿನ ಅಧಿಕಾರವನ್ನು ತೋಳ್ಬಲದ ಆಧಾರದಲ್ಲಿ ಹೊಂದುತ್ತಾನೆ. ನಂತರ ಅಂಬೆ ತಾನು ಸಾಳ್ವನನ್ನು ಇಷ್ಟಪಟ್ಟಿರುವುದಾಗಿಯೂ, ತನ್ನ ತಂದೆಯೂ ಇದನ್ನು ಮೆಚ್ಚಿದ್ದರೆಂದೂ ತಿಳಿಸಿದಾಗ ಭೀಷ್ಮನು "ನೀನು ಸ್ವತಂತ್ಯ್ರಳು" ಎಂದಾಗ, ಯಾವ ರೀತಿಯಲ್ಲಿ ಭೀಷ್ಮನು ಅವರುಗಳನ್ನು ತಂದ, ನಂತರ "ಸ್ವತಂತ್ರ್ಯಳು" ಎಂದು ಹೇಳಿದಾಗ ಸ್ವಾತಂತ್ರ್ಯದ ಅರ್ಥವು ಇಡೀ ಪ್ರಕರಣದಲ್ಲಿ ಮತ್ತೊಮ್ಮೆ ರೂಪಗೊಂಡಿತು. ಸ್ವಾತಂತ್ರ್ಯದ, ಅದೂ ಸ್ತ್ರೀ ಸ್ವಾತಂತ್ರ್ಯದ ಅರ್ಥ ಈ ಪ್ರಕರಣದಿಂದ, ಅದೂ "ನೀನು ಸ್ವತಂತ್ರ್ಯಳು" ಎಂದ ಮಾತಿನಿಂದ, ಸ್ವತಂತ್ರ್ಯದ ಮೂಲವನ್ನೆ ಪ್ರಶ್ನಿಸಿದಂತಾಯಿತು. ಅಂಬೆ ಸಾಳ್ವನ ಬಳಿಗೋದಾಗ,"ನಿನ್ನನ್ನು ನೋಡಿದಾಗ ನನಗೆ ಭೀಷ್ಮನ ವಿರುದ್ದದ ನನ್ನ ಸೋಲೆ ನನಗೆ ನೆನಪಾಗುತ್ತೆ...""....ನಿನ್ನನ್ನ ಮದುವೆಯಾದರೆ, ರಾಜ್ಯದ ಜನ, ಪರಿವಾರ ಏನೆಂದಾರು...." ಎನುತ್ತಾನೆ. ಅಲ್ಲಿಂದ ಭೀಷ್ಮನ ಬಳಿಗೋದಾಗ ".....ನನ್ನ ಪ್ರತಿಜ್ನೆ...""....ನನ್ನ ಕೀರ್ತಿ...." ಎಂತಹ ಮಾತುಗಳು!. ಒಬ್ಬನು ತನ್ನ ಜನ, ಪರಿವಾರದ ನೆಪವೊಡ್ಡುತ್ತಾನೆ. ಮತ್ತೊಬ್ಬನು ಕೀರ್ತಿ, ಪ್ರತಿಜ್ನೆ ಎಂಬ ಉತ್ತರವನ್ನ ನೀಡುತ್ತಾನೆ. ಹೆಣ್ಣಿನ ಆತ್ಮಗೌರವದ ಪ್ರಶ್ನೆ ಇಲ್ಲಿ ಯಾರಿಗೂ ಮುಖ್ಯವಾಗುವುದಿಲ್ಲ. ಭೀಷ್ಮನ ಬಾಯಲ್ಲಿ "ಧರ್ಮ"ದ ಮಾತು ಹಲವಾರು ಬಾರಿ ಬರುತ್ತೆ. ಆಗ ಅನ್ನಿಸಿತು, ಯಾವುದು ಧರ್ಮ? ಯಾರು ಮಾಡಿದ್ದು ಧರ್ಮ? 



ತಾನು ಮದುವೆಯಾಗಬೇಕಿರುವ ಗಂಡನ ಕುರಿತಾಗಿ ಹಲವು ಕನಸುಗಳನ್ನು ಕಟ್ಟಿಕೊಂಡು ಸಂತಸದಲ್ಲಿದ್ದ ಗಾಂಧಾರಿ,ಧೃತರಾಷ್ಟ್ರನಿಗೆ ಆರತಿ ಬೆಳಗಹೋದಾಗ ಅದನ್ನು ದಬ್ಬಿ ಎಡವಿ ಬೀಳುತ್ತಾನೆ. ಆಗ ಗಾಂಧಾರಿಗೆ ತಾನು ಮದುವೆಯಾಗಲಿರುವುದು ಒಬ್ಬ ಕುರುಡನನ್ನು ಎಂದು ತಿಳಿಯುತ್ತೆ. ಇಲ್ಲಿ ನಾಟಕದ ತಂತ್ರ ಇಷ್ಟವಾಯಿತು. ಗಾಂಧಾರಿ ಹಾಗು ಗಾಂಧಾರಿಯ ಮನಸ್ಸು ಎಂಬ ಎರಡು ಪಾತ್ರಗಳು ಮಾತನಾಡುತ್ತೆ. ಇಲಿ ಸಖಿಯರಾಡುವ ಮಾತುಗಳು ನೇರವಾಗಿ ಹಲವು ಸೂಕ್ಷ್ಮಗಳನ್ನೊಳಗೊಂಡಿದೆ. ಸಖಿಯರು ಹೇಳುತ್ತಾರೆ, ಗಾಂಧಾರಿ ನೀನು ಅದೃಷ್ಟವಂತೆ, ಅವರನ್ನು ಮದುವಯಾದರೆ ನೀನು ಕುರುವಂಶದ ಸೊಸೆಯಾಗುತ್ತೀಯ. ಧೃತರಾಷ್ಟ್ರನು ಮಹಾ ಪಂಡಿತನು ಕುರುಡನಾದರೇನಂತೆ. ಭೀಷ್ಮನು ಗಾಂಧಾರ ದೇಶಕ್ಕೆ ಭದ್ರತೆಯನ್ನೊದಗಿಸುತ್ತಾನಂತೆ ಎಂದೆನ್ನುತ್ತಾರೆ. ಅಂದರೆ ಸೇನೆಯನ್ನು ತಂದಿಟ್ಟು ಹೆಣ್ಣನ್ನು ಕೇಳಿದ್ದಾನೆ ಭೀಷ್ಮ. ಅಧಿಕಾರದ ಬಲಕ್ಕೆ ಇಲ್ಲಿ ಗಾಂಧಾರಿಯ ಬಲಿಯಾಯಿತು. ನಾಟಕದ ಕೊನೆಯಲ್ಲಿ ಕೃಷ್ಣನನ್ನು ಶಪಿಸುವ ಪ್ರಸಂಗವೊಂದು ಬರುತ್ತೆ, ಆಗ ".. ದೇವರಾದರೂ ಸರಿ, ನಿನ್ನನ್ನು ಶಪಿಸುತ್ತೇನೆ....." ಎಂದು ಶಪಿಸುತ್ತಾಳೆ.  ಯಾವ ಯಾವುದೋ ಪಾತ್ರಗಳು ಯಾವುದೋ ಹಂತಗಳಲ್ಲಿ ಅದೇಗೆ ಬಲಿಯಾಗಿಹೋಯಿತು. ಇದು ಗಾಂಧಾರಿ ಎಂಬೋ ಮಹಾಭಾರತದ ಕತೆಯಲ್ಲಿನ ಒಂದು ಪಾತ್ರದ ಕತೆ ಮಾತ್ರ ಅಲ್ಲ. ಅದೆಷ್ಟೋ ಹೆಣ್ಣುಗಳ ಕತೆಯೋ ಹೌದು. 



ಸಹಜ ಪ್ರಕೃತಿ ಧರ್ಮಕ್ಕೆ ಒಳಗಾಗಿ ಪಾಂಡುವಿನ ಸಾವಿಗೆ ತಾನೆ ಕಾರಣಳು ಎಂದು ತಿಳಿದು ಅಗ್ನಿಗೆ ಆಹುತಿಯಾಗುವ ಮಾದ್ರಿಯದು ಮೂರನೆ ಪಾತ್ರ. "...ನಾನು ಕಾಮಕಲೆಯಲ್ಲಿ ನಿಷ್ಣಾತಳೆಂದೆ ನನ್ನನ್ನು ಭೀಷ್ಮ ಪಾಡುವಿಗೆ ಕಟ್ಟಿದ...." "....ರೋಗಿಷ್ಟ, ಶಾಪದ ನೆವ ಬೇರೆ..." ಎಂದು ತನ್ನ ಆಳದ ನೋವನ್ನು ಹೇಳಿಕೊಳ್ಳುತ್ತಾಳೆ. "....ಪಾಂಡು ಮಹಾರಾಜ ಇಂದು ಉಲ್ಲಸಿತನಾಗಿದ್ದ....ಬಂದು ಅಪ್ಪಿಕೊಂಡ.....ನೋಡ ನೋಡುತ್ತಿದ್ದಂತೆಯೆ ಕುಸಿದು ಬಿದ್ದ...." ಅದ್ಬುತ ಸಂಭಾಷಣೆ. ಧರ್ಮದ ನೆಪಹೇಳಿ ಅಗ್ನಿಗಾಹುತಿಯಾಗುತ್ತಾಳೆ ಮಾದ್ರಿ. ಯಾರ ತಪ್ಪಿತ್ತು ಇಲ್ಲಿ. ಇನ್ನು ಉಳಿದ ಎರಡು ಪಾತ್ರಗಳು ಕುಂತಿ ಹಾಗು ದ್ರೌಪದಿಯದು. ದ್ರೌಪದಿಯನ್ನು ಧರ್ಮರಾಯ ಜೂಜಿನಲ್ಲಿ ಒಂದು ವಸ್ತುವನ್ನ ಇಟ್ಟಂತೆ ಇಟ್ಟು ಜೂಜಾಡಿ ಸೋಲುತ್ತಾನೆ. ದ್ರೌಪತಿಯನ್ನು ತುಂಬು ಸಭೆಗೆ ಎಳೆದು ತಂದು ವಸ್ತ್ರಾಪಹರಣವನ್ನು ಮಾಡುತ್ತಾರೆ. ಕುಂತಿಯದು ಮದುವೆಗೆ ಮುಂಚೆಯೆ ತಾಯಾದ ಕತೆ. ಈ ಎರಡೂ ಪಾತ್ರಗಳು ಚೆನ್ನಾಗಿ ಮೂಡಿಬಂದರೂ ಸಹ, ವೈಯುಕ್ತಿಕವಾಗಿ ಮೇಲಿನ ಮೂರು ಪಾತ್ರಗಳಷ್ಟು ಆಳವಾಗಿ ಬಂದಿಲ್ಲವೆಂದೆನಿಸಿತು. ಅದಕ್ಕೂ ಹೆಚ್ಚಾಗಿ ಅಂಬೆ, ಗಾಂಧಾರಿ ಹಾಗು ಮಾದ್ರಿ ನನ್ನನ್ನು ಬಹಳ ಕಾಡಿದ ಪಾತ್ರಗಳಾದವು.




ಇನ್ನು ನಾಟಕದ ತಂತ್ರದ ಬಗ್ಗೆ, ನಾಟಕಕ್ಕೆ  ಗೊಂದಲಿಗರ ಮೇಳ ಎಂಬ ಜಾನಪದ ಪ್ರಕಾರವನ್ನೂ ಅನುಸರಿಸಿರುವುದು ಸರಿಯಾಗಿ ಮೂಡಿಬಂದಿದೆ.  ಗೊಂದಲಿಗರ ಮೇಳ ಎಂಬುದು ಉತ್ತರ ಕರ್ನಾಟಕದಲ್ಲಿನ ಜಾನಪದ ಶೈಲಿ. ಅಂಬಾಭವಾನಿಯ ಪೂಜಾ ಸಮಯದಲ್ಲಿ, ಇಡೀ ರಾತ್ರಿ ಆಕೆಯ ಪವಾಡಗಳನ್ನು ಹಾಡಿ ಹೊಗಳುತ್ತ ಕುಣಿಯುತ್ತ, ದೇವಿ ಸ್ಥುತಿ ಮಾಡುತ್ತ  ರಾತ್ರಿ ಕಳೆಯುವುದನ್ನ ಗೊಂದಲ ಹಾಕುವುದು ಎನ್ನುತ್ತಾರೆ. ಗೊಂದಲ ಹಾಕಲು ಕನಿಷ್ಟ ಐದು ಜನರಿರುತ್ತಾರೆ, ಒಬ್ಬ ಮುಖ್ಯ ಗಾಯಕ, ಒಬ್ಬ ಸಂಭಾಳ ನುಡಿಸುವವ, ಒಬ್ಬ ಚೌಡಿಕೆ ನುಡಿಸುವವ, ಮತ್ತಿಬ್ಬರು ಪಂಜನ್ನ ಹಿಡಿದಿರುತ್ತಾರೆ.    ವೇಷ, ಸಂಗೀತ, ಕೊಳಲು ಎಲ್ಲವೂ ಚೊಕ್ಕವಾಗಿ ಮೂಡಿಬಂದಿದೆ. ಇನ್ನು ನಟನ ತಂಡವನ್ನು ಅಭಿನಂದಿಸಲೇಬೇಕು. ಮುಖ್ಯವಾಗಿ ನಟನದ ರುವಾರಿ ಮಂಡ್ಯ ರಮೇಶರಿಗೆ ಧನ್ಯವಾದಗಳು. 



ಪಾತ್ರ ಪರಿಚಯ:
ಅಂಬೆ : ದಿಶಾ ರಮೇಶ್
ಮಾದ್ರಿ: ಕಾವ್ಯ ನಟನ
ಗಾಂಧಾರಿ ಹಾಗು ದ್ರೌಪದಿ: ಪ್ರಿಯ ನಟನ
ಕುಂತಿ : ಅಪೂರ್ವ ಅಕ್ಕಿಹೆಬ್ಬಾಳ
ಭೀಷ್ಮ: ರಾಮು ನಟನ
ಕರ್ಣ:ಮೇಘ ಸಮೀರ
ದುಶ್ಯಾಸನ : ಚಂದನ್
ದುರ್ಯೋದನ: ಅರಸ್
ಸಾಳ್ವ: ಮಧುಸೂದನ್
ಕೃಷ್ಣನ ಧ್ವನಿ: ಮಂಡ್ಯ ರಮೇಶ
ಗೊಂದಲಿಗ ದುಗ್ಗಪ್ಪ ಹಾಗು ದೃತರಾಷ್ಟ್ರ : ಮುರುಳಿ ಶೃಂಗೇರಿ
ಸಂಭಾಳದವರು: ಸುಭ್ರಮಣ್ಯ ಹಾಗು ಮೇಘ ಸಮೀರ

ಫೋಟೋ ಕೃಪೆ : ನಟನ ತಂಡ
ಗೊಂದಲಿಗರ ಮೇಳದ ಕುರಿತು ಮಾಹಿತಿ:  ಬಿ.ಜಯಶ್ರೀರವರು ಅಗ್ನಿಪಥ ನಾಟಕದ ಕರಪತ್ರದಲ್ಲಿ ನೀಡಿದ್ದ ವಿವರಣೆ: ಕೃಪೆ: ನಟನ ತಂಡ

ಮಾಹಿತಿಯನ್ನ ನೀಡಿದ ಶಿರಿಷ್ ನಟನ ರವರಿಗೆ ಧನ್ಯವಾದಗಳು.

ಇತಿಹಾಸಕಾರನ ದಿನಚರಿಯಿಂದ


೧.
ನಮ್ಮೂರಲ್ಲಿ ಒಂದು ಕಲ್ಲಿನ ಶಾಸನ
ಯಾವ ಕಾಲದಿಂದಲೋ ನಿರ್ಲಿಪ್ತವಾಗಿ ಮಲಗಿತ್ತು
ಪಾಪ, ಯಾವ ರಾಜನೋ ಸಾಮಂತನೋ
ಬರೆಸಿದ್ದಿರಬೇಕು  
ಅದರ ಭಾಷೆ ನಮಗ್ಯಾರಿಗೂ ಓದಲು ಬರುತ್ತಿರಲಿಲ್ಲ.

ನಮ್ಮೂರಿಗೆ ಹೊಸದಾಗಿ ಬಂದ ಶಾಮನಿಗೆ
ಸಂಪೂರ್ಣವಾಗಿ ತನ್ನನ್ನೇ ಅರ್ಪಿಸಿಕೊಂಡ ಶಾಸನ
ಅವನಿಗೆ ಕೂರಲು ಆಸನವಾಗಿ, ಮಲಗಲು ಮಂಚವಾಗಿ
ಇನ್ನೂ ಏನೇನೋ ಆಗಿ ಶಾಮನದ್ದಾಗಿ ಹೋಯಿತು.

ಒಂದು ದಿನ ಶಾಮ ಎಲ್ಲಾನೂ ಬಿಟ್ಟು ಎಲ್ಲಿಗೋ ಓಡಿ ಹೋದ
ಓಡಿ ಹೋಗಲಿಕ್ಕೆ ಏನೇನೋ ಜರುಗಿತ್ತಂತೆ ಹಾಗೂ ಕಾರಣಗಳಿತ್ತಂತೆ
-ಅಂತ ಜನಗಳು ಮಾತನಾಡಿಕೊಳ್ಳುತ್ತಿದ್ದರು.

೨.
ನನ್ನಜ್ಜಿಯ ಪ್ರೇಮ ಪತ್ರಗಳೇನಾದರೂ ಸಿಕ್ಕಬಹುದೆಂದು ಪ್ರಯತ್ನಿಸುತ್ತಿದ್ದೇನೆ
ನನ್ನಜ್ಜಿ ಬಹಳ ಸುಂದರವಾಗಿದ್ದಳು
ಎಲ್ಲಾ ವಯಸ್ಸಿನಲ್ಲೂ.
ನನ್ನ ತಾತ ಕರ್ರಗೆ, ಉಬ್ಬುಹಲ್ಲು, ಸೊಣಕಲು ಶರೀರ
ಎಷ್ಟೋ ಊರುಗಳು ದಾಟಿ ಎಲ್ಲೋ ನೆಲೆನಿಂತು ಸಾಕಿದ್ದಳು ನನ್ನಜ್ಜಿ
ಅವಳ ಚರಿತ್ರೆಯನ್ನ ಬರೆಯಲಿಕ್ಕೆಂದೇ ನಾನು ಇತಿಹಾಸಕಾರನಾದೆ.

ಕಡೆ ದಿನಗಳಲ್ಲಿ ನನ್ನಜ್ಜಿಗೆ ಗ್ಯಾಂಗ್ರಿನ್ ಆಗಿ ಕಾಲು ಕಳೆದುಕೊಂಡು
ತೀವ್ರ ನೋವಿನಲ್ಲಿದ್ದಾಗ, ಸತ್ತು ಹೋಗುವಷ್ಟು ನೋವಾಗಿದ್ದಾಗ
ತನ್ನ ನೆಚ್ಚಿನ ಮಸಾಲೆ ದೋಸೆ ತರಿಸಿಕೊಂಡು ತಿಂದು
ಮಾರನೆ ದಿನ ಸತ್ತು ಹೋದಳು.

೩.
ಮೆಜಸ್ಟಿಕ್ ಅಲ್ಲಿ
ಒಂದು ಕಾಲದಲ್ಲಿ
ಒಬ್ಬ ಅಜ್ಜಿ ಬುಟ್ಟಿಯಲ್ಲಿ ಇಡ್ಲಿ ತಂದು ಮಾರೋಳು
ನಂಗೆ ದಿನ ಎರಡು ಇಡ್ಲಿ ಕೊಡೋಳು
ತನ್ನ ಅನಿಮಿತ್ತ ಕರ್ಮದಂತೆ
ಈಗ ಎಲ್ಲೋ ಬಂದು ಏನೋ ಮಾಡಿ ಆಗಿದೆ
ಹಿಂತಿರುಗಿ ಹೋದಾಗ ಅಲ್ಲಿ ಅಜ್ಜಿ ಇರೋಲ್ಲ ಅಂತಾನೆ ಅನ್ನಿಸುತ್ತೆ.
ನನ್ನದೊಂದು ಪುಸ್ತಕ ಪ್ರಕಟವಾಗಿದೆ
ಪ್ರಪಂಚ ಇತಿಹಾಸ ಹಾಗು ನಾನು

೩.
ಈ ಒಬ್ಬ ಕವಿ* ತೀರ ವಿಚಿತ್ರ ಎಂಬಂತೆ ಕವಿತೆ ಬರೆದ
ದಂಗೆಯೆದ್ದು ಏನೋ ಮಾಡಲಿಕ್ಕೋಗಿ ಜೀವನಾನೆ ಜೈಲಲ್ಲಿ ಕಳೆದು
ಹೊರಬಂದಾಗ
ತನ್ನ ರೂಮನ್ನು ಸೂಳೇಯರಿಗೆ ಬಾಡಿಗೆಗೆ ಕೊಟ್ಟು
ಬಂದ ಹಣದಲ್ಲಿ ಪೆನ್ನು ಪೇಪರ್ ಕೊಂಡು
ಕವಿತೆ ಬರೆದ.

೪.
ಗ್ಲೋಬು, ಭೂಪಟ, ಪೆನ್ನು, ಪೆನ್ಸಿಲ್ಲು, ಭೂತಗನ್ನಡಿ
ಈ ಇತಿಹಾಸಕಾರನ ದಿನಚರಿಯ ಪುಸ್ತಕ
-ಹೊತ್ತ ಈ ಚೀಲವನ್ನು
ನನ್ನ ತಾತ ಗಾಂದೀತಾತನ ಫೋಟೋ ಹಾಕಿದ್ದ ಮೊಳೆಗೆ
ಹಾಕಿ - ಹೊರಡುತ್ತಿದ್ದೇನೆ.

* Nguyen chi Thein ಎಂಬ Vietnam ಕವಿ

Human Right Protection Foundation petition

Human Rights Protection Foundation, Udupi has started A Petition to the Governor of Karnataka to "Order the government of Karnataka to obey the Supreme Court Order in the  Akku Leela case". We need you to sign the online petition and help Akku and Leela finally get justice.  


Will you take 30 seconds to sign it right now? Here's the link:
Petition

Here's why it's important: 
The Supreme Court has ordered Govt. of Karnataka to Pay the salary of Ms. Akku and Ms. Leela which has been denied to them right from 1971. The Supreme Court order is three years seven months old. The poor women are struggling to get justice for the last 42 years.

Please read this :- 

Dear Readers,
I believe not many of you would know the classic case of how the “high-handedness” of a few officials has affected the lives of two illiterate women in Udupi.
The two women, Akku and Leela, have put in about four decades of service as scavengers at the Government Women Teachers‟ Training Institute on a monthly salary of Rs. 15/-. When they joined the institute in 1971, they were told they would be paid a basic salary of Rs.15/- a month until the government officially approved their appointments and then they would receive their full pay backdated to the day they joined.
Even after a year, they had still not had their jobs officially approved. They wanted to quit. The principal pleaded with them to stay and promised they would receive more than Rs. 30,000 as
back wages and they would be appointed on a permanent basis. He warned them that they would lose this if they resigned. The women continued cleaning the lavatories.
Their plight came to light after Dr. Ravindranath Shanbhag, President of Udupi-based Human Rights Protection Foundation (HRPF), took up the matter and created public opinion against this injustice.
In 1999 with the help of HRPF, the women approached the Karnataka Administrative Tribunal (KAT) seeking relief. As a result, the Education Department stopped paying them even that meager salary of Rs. 15/-.
Now, after 14 years of legal battle, the women have three judgments including Karnataka
High Court and the Supreme Court in their favor. Every court has asked the government to pay
them their due right from 1971 till their retirement.
Since the government has not paid their salary, the ladies have approached the Supreme Court with Contempt of Court Petition.
[ Source : HRPF Bulletin 5, Editor: Nivedita ]

For more details, please read this :




Please share the petition with your friends.

ಎರಡು ಕೋಡಿನ ಮೊಲ


"ಇಲ್ಲ, ನನಗೆ ಆ ಕ್ಷಣದಲ್ಲಿ ಯಾವುದೇ ಸಂಧಿಗ್ಧತೆ ಇರಲಿಲ್ಲ. ಸೀದಾ ಸಾಮಾನ್ಯ ಪರಿಸ್ಥಿತಿಯಂತೆ ಅನ್ನಿಸಿತ್ತು. ಅವತ್ತು ಬೆಳಗ್ಗೆ ಎದ್ದಾಗ ನನಗೆ  ಗಾಬರಿಯಾಗುವಷ್ಟು ಏನೂ ನೆನಪಿರಲಿಲ್ಲ. ರಾತ್ರಿ ವಿಚಿತ್ರ ಅನುಭವವಾಗಿತ್ತು. ರಾತ್ರಿ ಒಮ್ಮೆ ಎಚ್ಚರಾದಾಗ ಎಲ್ಲವೂ ಕರಗುತ್ತಿರುವಂತೆ ಭಾಸವಾಯಿತು. ಗೋಡೆಗಳು, ಮನೆ, ನಾ ಮಲಗಿದ್ದ ಮಂಚ, ಕಡೆಗೆ ಇಡೀ ಜಗತ್ತೆ ಕರಗುತ್ತಿರುವಂತೆ ಅನ್ನಿಸಿತು. ಎಷ್ಟು  ಭಯವಾಯಿತು ಎಂದರೆ ಗಟ್ಟಿಯಾಗಿ ಹೊದ್ದು  ಮಲಗಿಬಿಟ್ಟೆ. ಬೆಳಗಾಗಿ ಎದ್ದಾಗ  ಯಾಕೋ ಏನೂ ನೆನಪಿರಲಿಲ್ಲ, ಏನೂ ನೆನಪಾಗುತ್ತಿರಲಿಲ್ಲ. ಆಗಲೆ ನಾನು ನಿರ್ಧರಿಸಿದ್ದು, ಅವಳಿಗೆ ನಾನು ಅವಳನ್ನ ಇಷ್ಟ ಪಡುತ್ತಿರುವ ಸಂಗತಿಯನ್ನು, ಮದುವೆಯಾಗಲು  ಬಯಸುತ್ತಿರುವ ಸಂಗತಿಯನ್ನು ತಿಳಿಸಬೇಕು ಅಂತ. ಹಾಗಾಗಿ ಅದೇ ಸಂಜೆ ತಿಳಿಸಿಬಿಟ್ಟೆ.  ಹಂಸ, ನೀನು ನಿನ್ನ ಕುಟುಂಬವನ್ನು ಪ್ರೀತಿಸುವ, ನಿನ್ನ ಅಣ್ಣನಿಗೆ ನೀನು ಮದುವೆ ಮಾಡಬೇಕೆನ್ನುವ ನಿನ್ನ ಕಾಳಜಿಯಿಂದಾಗಿ ನಾನು ನಿನ್ನನ್ನ ಇಷ್ಟ ಪಡುತ್ತಿದ್ದೇನೆ ಅಥವಾ ಪ್ರೀತಿಸುತ್ತಿದ್ದೇನೆ. ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕು ನಿನಗಿದೆ ಆದರೆ ತೀರ್ಮಾನವನ್ನು ತಿಳಿಸುವುದು ನಿನ್ನ ಕರ್ತವ್ಯ. 
ಒಂದೆರೆಡು ದಿನಗಳ ಕಾಲ ಉತ್ತರದ ನಿರೀಕ್ಷೆಯಲ್ಲಿದ್ದೆ. ನಂತರ ಅದೇನಾಯಿತೋ ನನ್ನ ಕೆಲಸಗಳಲ್ಲಿ ನಾನು ಮರತೇ ಬಿಟ್ಟೆ. ಅವಳನ್ನು, ಅವಳ ಸಂಗತಿಯನ್ನು  ಮರೆತೇ ಬಿಟ್ಟಿದ್ದೆ . ಈಗ ನೋಡು ನೀನು ಕೇಳಿದಾಗ  ನೆನಪಾಯಿತು. ನನ್ನ ಸಮಸ್ಯೆಯೆಂದರೆ ನನ್ನ ನೆನಪು ತೀರಾ ತೆಳುವು. ಎಲ್ಲವನ್ನೂ  ಮರೆತುಹೋಗುತ್ತಿದ್ದೇನೆ."

ತಾರಕ ಹೇಳುತ್ತಲೇ ಇದ್ದ...... 

ತಾರಕನ ಬಗ್ಗೆ, ಅವನ ಸ್ಥಿತಿಯ ಬಗ್ಗೆ,  ನಿಮಗೆ ಒಂದಿಷ್ಟು  ವಿವರವಾಗಿ  ಹೇಳುವು ಅವಶ್ಯಕತೆಯಿದೆ. ನಮ್ಮೂರು ಆಂಧ್ರದ ಗಡಿಬಾಗದಲ್ಲಿರುವ ಗೌರೀಬಿದನೂರು ಎಂಬ ತಾಲೂಕು ಕೇಂದ್ರದ ಹತ್ತಿರವಿರುವ ಒಂದು ಹಳ್ಳಿ. ಆಂಧ್ರಕ್ಕೆ ಸುಮಾರು ಮೂವತ್ತು  ಕಿಲೋ ಮೀಟರುಗಳ ಅಂತರ. ತೊಂಬತ್ತು  ಪ್ರತಿಶತ ಆಡುಭಾಷೆ ತೆಲುಗು. ಪಕ್ಕದ ಹಿಂದೂಪುರದಲ್ಲೋ, ಪೆನುಗೊಂಡದಲ್ಲೋ ರಾಜಕೀಯ ಸ್ಥಿತ್ಯಾಂತರಗಳಾದರೆ, ಕೊಲೆಗಳಾದರೆ, ನಮ್ಮೂರ ಅರಳಿಕಟ್ಟೆಗಳಲ್ಲಿ  ಚರ್ಚೆಗಳಾಗುತ್ತಿತ್ತು. ಇಲ್ಲಿನ ಮುಖ್ಯಮಂತ್ರಿ ಯಾರು ಎಂಬುದನ್ನ ಜನ ಮರೆತರೂ, ಅಲ್ಲಿನ ಮುಖ್ಯಮಂತ್ರಿಯನ್ನು ಮರೆಯುತ್ತಿರಲಿಲ್ಲ. ಅತ್ಯಂತ  ಮುಖ್ಯವಾಗಿ ತೆಲುಗು ಸಂಸ್ಕೃತಿ ಎಂಬೋದು ತನ್ನ ಆದಿಪತ್ಯವನ್ನ ಸಾದಿಸಿದ್ದದ್ದು, ತೆಲುಗು ಸಿನಿಮಾಗಳ  ಮುಖಾಂತರವಾಗಿ. ಊಟ ನಿದ್ರೆ ಮೈಥುನಗಳೆಂಬ  ಪ್ರಾಣಿ  ಸಹಜ ಅವಶ್ಯಕತೆಗಳಂತೆಯೆ, ತೆಲುಗು ಸಿನಿಮಾ ಎಂಬುದು ಬದುಕಿನ ಅವಶ್ಯಕತೆಗಳಲ್ಲಿ ಒಂದಾಗಿ ಹೋಗಿತ್ತು. ಬಯಲು ನಾಟಕಗಳನ್ನು ತಮ್ಮ ಮನರಂಜನೆಯ ಮಾರ್ಗವಾಗಿಸಿಕೊಂಡಿದ್ದ ಇಲ್ಲಿನ ಜನಕ್ಕೆ, ಸಿನಿಮಾ ಆವಿಷ್ಕಾರದಿಂದಾಗಿ ನಾಟಕಗಳಷ್ಟೇ ಮುಖ್ಯವಾಗಿ ಸಿನಿಮಾ ಅವರುಗಳನ್ನ ಸೆಳೆಯಿತು. ದೇವರುಗಳೆಂದರೆ ಇವರು ಮಾತ್ರ. ಪಾತ್ರಗಳನ್ನ ಮೀರಿ ವ್ಯಕ್ತಿಗಳನ್ನ ದೈವತ್ವಕ್ಕೇರಿಸಿದರು. ಉತ್ತಮ ಉದಾಹರಣೆಯೆಂದರೆ ನಂದಮೂರಿ ತಾರಕ ರಾಮ ರಾವ್ ರವರು. ನಾನು  ಭೈರಪ್ಪನವರ  ಪರ್ವ ಓದುವಾಗ ಅವರು ಕಟ್ಟುಕೊಡುತ್ತಿದ್ದ ಪಾತ್ರಗಳು ಎಷ್ಟೇ ಶ್ರೇಷ್ಟವಾಗಿದ್ದರೂ ನನ್ನ ಮನೋ ಭೂಮಿಕೆಯಲ್ಲಿ ದಾಖಲಾಗುತ್ತಿದ್ದದ್ದು ಇದೇ ತೆಲುಗು ಸಿನಿಮಾಗಳ ಪಾತ್ರಗಳು. ಇಷ್ಟೆಲ್ಲಾ ಹೇಳಲಿಕ್ಕೆ ಕಾರಣ ತಾರಕನಿಗೂ ತೆಲುಗು ಸಿನಿಮಾಗಳಿಗೂ ಇದ್ದ ಸಂಬಂಧ.   

ತಾರಕನಿಗೆ ತಾರಕ ಅಂತ ಹೆಸರು ಬರಲಿಕ್ಕೆ ಕಾರಣವಿತ್ತು. ನಮ್ಮೂರ ಪಕ್ಕದ ಅಲಕಾಪುರದಲ್ಲಿ ಸೋಮೇಶ್ವರ ಜಾತ್ರೆಗೆ ಟೆಂಟ್ ಹಾಕಿ ಸಿನಿಮಾ ಹಾಕಿದ್ದರು. ತಾರಕನ ತಾಯಿ ನರಸಮ್ಮನಿಗೆ  ಆ ಸಿನಿಮಾ ನೋಡಲೇ ಬೇಕು ಅಂತ ಅನ್ನಿಸಿತಂತೆ. ಬಸುರಿಯ ಆಸೆ ಇಲ್ಲ ಅನ್ನಲಿಕ್ಕಾಗದೆ,   ಅವಳ ಗಂಡ ಗಾಡಿ ಕಟ್ಟಿ ಸಿನಿಮಾ ಟೆಂಟಿಗೆ ಕರೆದೊಯ್ದ. ಸಿನಿಮಾ ನೋಡೋವಾಗ ನರಸಮ್ಮನಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಸಿನಿಮಾ ನೋಡಲಿಕ್ಕೆ ಅಂತ ಪಕ್ಕದೂರಿನ ಸೂಲಗಿತ್ತಿ ಸಹ ಬಂದಿದ್ಲು. ಹಾಗಾಗಿ ಸಿನಿಮ ಟೆಂಟಿನೊಳಗೆ ಸಿನಿಮಾ ನೋಡುವಾಗಲೆ, ನರಸಮ್ಮನಿಗೆ ಹೆರಿಗೆಯಾಯಿತು. ಹೆರಿಗೆ ನೋವನ್ನನುಭವಿಸೋವಾಗ, ಕೃಷ್ಣನ ವೇಷಧಾರಿಯಾದ ತಾರಕ ರಾಮಾರಾಯರಿಗೆ ಕೈ ಮುಗಿದು ಕಾಪಾಡು ಅಂತ ಬೇಡಿಕೊಂಡಳಂತೆ. ಮಗು ಹುಟ್ಟಿದ್ದು  ಆ ಕೃಷ್ಣನ ಕೃಪೆಯಿಂದ ಎಂಬುವುದಕ್ಕಿಂತ ಕೃಷ್ಣನ ವೇಷಧಾರಿಯಾದ ತಾರಕರಾಮಾರಾಯರಿಂದ ಅಂತ ನಂಬಿದ್ದ ನರಸಕ್ಕ ತನ್ನ ಮಗನಿಗೆ ತಾರಕ ಅಂತ ಆರಿಸಿ ಹೆಸರಿಟ್ಟಿದ್ದಳು. ತನ್ನ ಮಗ ಕಣ್ಣು ಬಿಟ್ಟ ತಕ್ಷಣ ರಾಮಾರಾಯರನ್ನ ನೋಡಿದನೆಂದೂ, ರಾಮಾರಾಯರೂ ತನ್ನ ಮಗನನ್ನು ನೋಡಿದರೆಂದೂ ತನ್ನ ಮಗನಿಗೆ ರಾಮಾರಾಯರ ಆಶೀರ್ವಾದಗಳಿವೆಯೆಂದೂ ನರಸಮ್ಮ ಆಳವಾಗಿ ನಂಬಿದ್ದಳು ಹಾಗೂ ಊರಿಗೆಲ್ಲ ಹಾಗೆ ಹೇಳುತ್ತಿದ್ದಳು. 

ನಮ್ಮೂರಿಗೆ  ಡಿಸ್ಕೋ ಡ್ಯಾನ್ಸು  ಆಡೋರು ಬರೋರು. ಒಂದು ಊರಿಂದ ಮತ್ತೊಂದು ಊರಿಗೆ ಸಂಚರಿಸುತ್ತ, ಒಂದು ಊರಲ್ಲಿ ಒಂದು ದಿನವೋ ಎರಡು ದಿನವೋ ಇದ್ದು  ಆಟ ಆಡಿ ಹಣ ಸಂಗ್ರಹಿಸಿ ಹೊರಟು ಹೋಗೋರು. ಅವರದು ಬಹಳ ದೊಡ್ಡ ಕುಟುಂಬ. ರಾತ್ರಿ ಸುಮಾರು ಏಳು ಅಥವಾ ಎಂಟು ಗಂಟೆಗೆ ಆಟ ಶುರುವಾಗೋದು. ಒಬ್ಬನು  ಎನ್ ಟಿ ಆರ್  ವೇಷವನ್ನ ದರಿಸಿದರೆ, ಅದಕ್ಕೆ ಸರಿಯಾಗಿ ಒಬ್ಬಾಕೆ  ಶ್ರೀದೇವಿಯ ವೇಷ ತೊಟ್ಟು,  ಈ ಇಬ್ಬರೂ ನಟಿಸಿದ ಸಿನಿಮಾದ ಹಾಡುಗಳ ಡ್ಯಾನ್ಸನ್ನ ಮಾಡೋರು. ಅದೇ ರೀತಿ ನಾಗೇಶ್ವರ ರಾವ್, ವಾಣೀಶ್ರೀ, ಕೃಷ್ಣ, ಚಿರಂಜೀವಿ, ರಾದಿಕ, ಶೋಭನ್ ಬಾಬು, ಹೀಗೆ ಅದೆಷ್ಟೋ ಹೀರೋಗಳ ವೇಷಗಳನ್ನ ಹಾಕಿಕೊಂಡು ಹಾಡಿ ಕುಣಿಯೋರು. ಕಡೆಗೆ ನಮ್ಮ ಬಳಿಯಲ್ಲಿ ಒಂದಿಷ್ಟು  ಹಣ ಬೇಡಿ ಪಡೆದು ಹೋಗೋರು. ಎಷ್ಟೋ ಬಾರಿ ಒಬ್ಬನೆ ವ್ಯಕ್ತಿ ಎರಡು ಮೂರು ವೇಷಗಳನ್ನ ಹಾಕ್ತಿದ್ದ. ಅದೇಗೆ ಒಬ್ಬನೇ ವ್ಯಕ್ತಿ ಎರಡು ಮೂರು ರೀತಿ ಕಾಣಬಲ್ಲ ಎಂಬೋದು ಆಗ ನಮಗೆ ದೊಡ್ಡ ವಿಸ್ಮಯವಾಗಿತ್ತು. ಒಮ್ಮೆ  ಈ ಡಿಸ್ಕೊ  ಡಾನ್ಸನ್ನ ನೋಡಿದ ನಂತರ ಅದರಲ್ಲಿನ ಎನ್.ಟಿ.ಆರ್ ವೇಷವನ್ನ ನೋಡಿ ತಾರಕ, ತಾನು ಎನ್.ಟಿ.ಆರ್ ಜೊತೆ ಹೊರಟು ಹೋಗ್ತೇನೆ ಅಂತ ಅಂದಾಗ ಗಾಬರಿಯಾಗಿತ್ತು. ಆಗ ನಮಗೆ ಆರು ವರ್ಷ. ಏನೋ ಚಿಂತಿಸಿ ನಿರ್ದಾರ ತೆಗೆದುಕೊಂಡವನಂತೆ ನನ್ನ ಬಳಿ ಬಂದು, " ಲೋ, ನಾನೂ ಅವರ ಜೊತೆ ಹೊರ್ಟು ಹೋಗ್ತೇನೆ. ನಂಗೆ ಅವರ ರೀತೀಲಿ ವೇಷ ಹಾಕ್ಬೇಕು ಅಂತನ್ನಿಸ್ತಾ ಇದೆ.ಆ ಎನ್.ಟಿ.ಆರ್ ಇದ್ದರಲ್ಲ ಅವರ ಜೊತೆಗೆ ಹೊರ್ಟು ಹೋಗ್ತೇನೆ" ಅಂತ ಹೇಳಿ ನಾನು ಬೇಡ ಅಂದರೂನೂ ನನ್ನನ್ನು ಕರೆದು ಕೊಂಡು ಅವರತ್ತಿರ ಹೋದ. ರಾತ್ರಿ ಚೆನ್ನಾಗಿ ಕುಣಿದು ದಣಿದಿದ್ದ ಆ ಜನ, ಚನ್ನಾಗಿ ತಿಂದು ಕುಡಿದು ಮಲಗಿದ್ದರು. ಎದ್ದ ನಂತರ ರಾತ್ರಿ ಯಾರು ಯಾವ ವೇಷ ದರಿಸಿದ್ದರು ಎಂಬೋದೆ ತಿಳೀಲಿಲ್ಲ. ಪರಿಸ್ಥಿತಿ ಕೆಟ್ಟು  ರಾತ್ರಿಯ ಎನ್.ಟಿ.ಆರ್ ಯಾರು ಎಂದು ಅಲ್ಲಿನ ಜನರನ್ನ ವಿಚಾರಿಸಿದಾಗ, ದೂರದಲ್ಲಿ ಹರಿದ ಲುಂಗಿ ಉಟ್ಟುಕೊಂಡು, ಮಾಸಿದ ಕೊಳಕು ಬನಿಯನ್ ತೊಟ್ಟ ವ್ಯಕ್ತಿಯನ್ನ ತೋರಿಸಿ, ಅವನೆ ಎನ್.ಟಿ.ಆರ್ ಅಂದಾಗ ತಾರಕ ನಂಬದೆ ತನಗೆ ರಾತ್ರಿಯ ಎನ್.ಟಿ.ಆರ್ ಬೇಕೆಂದು ಹಟ ಮಾಡಿದ. ಆ ಗಲಾಟೆಯಿಂದಾಗಿ ಅಷ್ಟೊತ್ತಿಗೆ ತಾರಕನಪ್ಪನಿಗೆ ಸುದ್ದಿ  ತಲುಪಿ ಅವರು ಬಂದು ನಾಲ್ಕೇಟು ಕೊಟ್ಟು  " ಓದ್ಕೊಳ್ರೋ ಅಂದ್ರೆ ತಿರುಬೋಕಿಗಳ ಜೊತೆ ಹೋಗ್ತೀನಿ ಅಂತೀರ " ಅಂತ ಮನೆಗೆ ಕಳುಹಿಸಿದರು. 

ಈಗ ಅನ್ನಿಸುತ್ತೆ ಒಬ್ಬ ವ್ಯಕ್ತಿಯ ವೃತ್ತಾಂತವನ್ನ ತಿಳಿಸ ಹೊರಟರೆ ಅದು ಮುಗಿಯುವುದೇ ಇಲ್ಲ . ಚರಿತ್ರೆಗಾಗಲಿ, ಕತೆಗಾಗಲಿ,  ಆರಂಭ  ಅಂತ್ಯ ಎಂಬೋದು ಅದೆಷ್ಟು  ಆಸಕ್ತಿದಾಯಕವೊ, ಅಷ್ಟೆ ಅಪಾಯವೂ ಸಹ. ಕನಿಷ್ಠ ಕತೆಯಲ್ಲಾದರೂ ಕಥೆಯನ್ನ ನಿರಾಕರಿಸಲಿಕ್ಕೆ ಸಾದ್ಯವಾಗುತ್ತ ನೋಡಬೇಕು. ಇನ್ನು ಮುಂದೆ ತಾರಕನ ಬಗ್ಗೆ ಹೆಚ್ಚಿಗೆ ತಿಳಿಸೋಲ್ಲ. ತಾರಕ ಎಂಬುವವನು ನನ್ನ ಚಿಕ್ಕಂದಿನ ಗೆಳೆಯ. ನಾನೂ ಅವನೂ ಒಟ್ಟಿಗೆ ಬೆಳೆದವರು, ಓದಿದವರು. ಒಂದನೆ ತರಗತಿಯಿಂದ ಒಟ್ಟಿಗೆ ಓದಿದೆವು. ನಾನು ಅವನ ಆತ್ಮೀಯ ಗೆಳೆಯನಾಗಿದ್ದೆ. ಆದರೆ  M.Sc ಗೆ ಹೋದ ನಂತರ ಅದೇನಾಯಿತು ತಿಳಿಯಲಿಲ್ಲ. ಅವನು ಎಲ್ಲರೊಡನೆ ಸಂಪರ್ಕ ಕಡಿದುಕೊಂಡು ಬಿಟ್ಟ. ನಮ್ಮ ಯಾವ ಗೆಳೆಯರಿಗೂ ಅವನು ಏನಾದ, ಏನು ಮಾಡುತ್ತಿದ್ದಾನೆ ಯಾವುದೂ ತಿಳಿಯಲಿಲ್ಲ. ಮೊನ್ನೆ ಎಲ್ಲೋ ಹೀಗೆ ಸಿಕ್ಕಾಗ ಮಾತಿಗಿಳಿದ. ನೆನ್ನೆಯವರೆಗು ಜೊತೆಯಲ್ಲಿದ್ದವನಂತೆ ನನ್ನ ಜೊತೆಗೆ ಮಾತನಾಡತೊಡಗಿದ. ಅವನನ್ನ ನೋಡಿದಾಗ ಅನ್ನಿಸಿದ್ದು. ಕತೆಯಲ್ಲಿ ಮಾತ್ರ ಕತೆಯನ್ನ ನಿರಾಕರಿಸಲಿಕ್ಕೆ ಸಾದ್ಯ ಅಂತ. 

ಅವನು ಮಾತಾಡುತ್ತಲೆ ಇದ್ದ....
"ನೀನು ಕೇಳಿದೆ , ಯಾಕೆ ಹೀಗಾದೆ ಅಂತ. ಹೀಗೆ ಎಂದರೆ ಹೇಗೆ ಎಂಬೋದೂ ನನಗೆ ತಿಳಿದಿಲ್ಲ. ನಮಗೆ ಕಾರಣಗಳ ಹುಚ್ಚು , ಎಲ್ಲಕ್ಕೂ ಕಾರಣಗಳನ್ನ ಕೊಡಬೇಕು. ಕನಿಷ್ಠ ನಮ್ಮ ಸಮಾದಾನಕ್ಕಾಗಿಯಾದರೂ ಕಾರಣಗಳನ್ನ ಕೊಡಬೇಕು ಅಥವಾ ಕೊಟ್ಟುಕೊಳ್ಳಬೇಕು. ಎಷ್ಟೋ ಬಾರಿ ಕಾರಣಗಳೇ ಇಲ್ಲದೆ ಮಾಡಿದ ಸಂಗತಿಗಳಿಗೆ ಕಾರಣವನ್ನ ಹುಟ್ಟು  ಹಾಕುತ್ತೇವೆ. ನಾನೂ ಸಹ ಇಂದಿನ ನನ್ನ ಈ ಪರಿಸ್ಥಿತಿಗೆ ಒಂದು ಅಥವಾ ಹಲವು ಕಾರಣಗಳನ್ನ ಕಂಡುಕೊಂಡೆ ಅಥವಾ ಕೊಟ್ಟುಕೊಂಡೆ. ಈಗೀಗ ನನ್ನ ಮಾತುಗಳಲ್ಲಿ ಅಥವಾ ಅಂತ ಹೆಚ್ಚು ಬಾರಿ ಬರುತ್ತೆ. ಅದೇಕೋ ನನಗೆ ಒಂದು ಸಿದ್ದ ಉತ್ತರ ಅಂತ ದೊರಕುವುದೇ ಇಲ್ಲ. ಸದಾ ಎರಡು ವಿರುದ್ಧಾರ್ಥಕ ವಾಕ್ಯಗಳನ್ನ ಕೂಡಿಸಿ ಅಥವಾ ಅಂತ ಸೇರಿಸಿ ಬಿಡುವುದೋ ಏನೋ. 
ನನಗೆ ತೆಲುಗು ಸಿನಿಮಾಗಳ ಹುಚ್ಚು ಅಂತ ಬೈಯ್ಯುತ್ತಿದ್ದೆ. ಅದನ್ನ ಅದೇಗೋ ನೋಡ್ತೀಯ, ಅಲ್ಲಿ ಏನೂ ಅಂದರೆ ಏನೂ ಇರೋದಿಲ್ಲ. ಬರೀ ಕಲ್ಪನೆ, ವಾಸ್ತವದ ಸುಳಿಯೂ ಅಲ್ಲಿರೋದಿಲ್ಲ ಅಂತಿದ್ದೆ. ನಾನು ಸಿನಿಮಾ ನೋಡಿ ನೋಡಿ ಹಾಗಾದೆನ ಅಂತನ್ನಿಸುತ್ತೆ. ನನ್ನ ಸುತ್ತಲಿನ ಜಗತ್ತನ್ನ ನೋಡಿದಾಗ ಇದೂ ಸಹ ಸಿನಿಮಾನ ಅಥವಾ ಇದು ಬರಿ ಸಿನಿಮಾ ಅಷ್ಟೇನ ಅಂತನ್ನಿಸುತ್ತೆ. ಕ್ವಾಂಟಂ ಫಿಸಿಕ್ಸ್ ನ ತಾತ್ವಿಕತೆಯ ಆಳದಲ್ಲಿನ ವಾಸ್ತವದ ಪರಿಕಲ್ಪನೆಯನ್ನ ಅರಿಯುವ ಪ್ರಯತ್ನ ಮಾಡುವಾಗ ಮನುಷ್ಯರ, ಅವರ ನಡುವಳಿಕೆಗಳ ಸಮೀಕರಣದ ಗೊಂದಲ ಕಾಡುತ್ತೆ. ವಾಸ್ತವವು ನೋಡುಗನ ನೋಟದ ಮೇಲೆ ಅವಲಂಬಿತವಾಗುತ್ತೆ  ಎಂಬುದರ ನೇರ ಪ್ರಭಾವವು ಜೀವನ ದರ್ಶನದ ಮೇಲೂ ಆಗುತ್ತೆ. ಬೆಳಗಿನಿಂದ ರಾತ್ರಿಯವರೆಗೂ ಬರೀ ಬೌತಶಾಸ್ತ್ರದ ಸಮೀಕರಣಗಳೊಂದಿಗೆ ಕಳೆದುಬಿಟ್ಟಾಗ ರಾತ್ರಿ ನಿದ್ರೆ ಬರುವುದಿಲ್ಲ. ಆಗ ತೆಲುಗು ಸಿನಿಮಾವನ್ನ ಹಾಕಿಕೊಂಡು ಜೋರಾಗಿ ನಗುತ್ತ ಇರುತ್ತೇನೆ. ಅದರಲ್ಲಿನ ಹಾಸ್ಯ ಸನ್ನಿವೇಷಗಳಿದ್ದಾಗ ನಗುತ್ತ, ಭಾವನಾತ್ಮಕ ಸನ್ನಿವಾಷಗಳಿದ್ದಾಗ ಅತ್ತುಬಿಡುತ್ತೇನೆ. ಬರೀ ಪ್ರಶ್ನೆಗಳಿಂದಲೇ ತುಂಬಿದ ಬದುಕಿನಲ್ಲಿ ಬದುಕಲಿಕ್ಕೆ  ಕಷ್ಟವಾಗುತ್ತೆ. ಸಿನಿಮಾ ನೋಡುವಷ್ಟೊತ್ತೂ ಆ ನಟನ ಭಾವಗಳೊಂದಿಗೆ ಬೆರೆತಿರುತ್ತೇನೆ, ಸಿನಿಮಾ ಮುಗಿದಾದ ಮೇಲೆ ನೆಮ್ಮದಿಯ ನಿದ್ರೆ ಬರುತ್ತೆ. ಬೆಳಗೆದ್ದಾಗ ಆ ಸಿನಿಮಾವೂ, ಅದರ ಪಾತ್ರಗಳೂ ಎಲ್ಲವೂ ಮರೆತಿರುತ್ತೆ ಅಷ್ಟೆ.

ಆದರೂ ನಿನಗೆ ಎರಡು ಸಂಗತಿಗಳನ್ನ ತಿಳಿಸಬೇಕು. ನನ್ನ ಬದುಕಿನಲ್ಲಿ ರಾಜೇಶ ಎಂಬೋ ಒಬ್ಬ ಗೆಳೆಯ ಇದ್ದ. ಅವನ ಬಗ್ಗೆ ಅದೆಷ್ಟೋ ಸಂಗತಿಗಳನ್ನ ಹೇಳಬೇಕಿದೆ. ಅದು ಇಲಿ ಮುಖ್ಯ ಅಲ್ಲ . ಮುಖ್ಯವಾದ ಸಂಗತಿ ಒಂದಿದೆ. ಅವನ ಮಾತಲ್ಲೆ ನಿಂಗೆ ಹೇಳ್ತೀನಿ ಕೇಳು " ತಾರಕ , ನಾನು ಚಿಕ್ಕೋನಿದ್ದಾಗಲೆ, ನಮ್ಮ ಅಮ್ಮ ಬೇರೊಬ್ಬರ ಜೊತೆ ಮಲಗಿದ್ದನ್ನು ನಾನು ನೋಡಿದ್ದೆ. ನಮ್ಮ ತಂದೆ ಬೇರೆಯವರ ಜೊತೆ ಇರುತ್ತಿದ್ದದ್ದನ್ನು ನಾನು ಕಂಡಿದ್ದೆ. ಅದು ನನಗೆ ಎಂದಿಗೂ ಅವರ ಬಗ್ಗೆ ತಪ್ಪು ಭಾವನೆಯನ್ನ ಮೂಡಿಸಲಿಲ್ಲ. ನನ್ನ ತಂದೆ ಒಬ್ಬ ಪ್ರಾಮಾಣಿಕ ಅಧಿಕಾರಿ. ಒಬ್ಬ ಉತ್ತಮ ತಂದೆ. ನನ್ನ ತಾಯಿಯೂ ಸಹ. ಅವರುಗಳು ನನ್ನ ಉತ್ತಮ ತಂದೆ ತಾಯಂದಿರು." ನಿನಗೆ ಈ ಸಂಗತಿ ಮುಖ್ಯವಾಯಿತೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಇದು ನನ್ನ ಬದುಕಿನ ಮೇಲೆ ತೀವ್ರವಾದ ಪ್ರಭಾವ ಬೀರಿತು ಎಂದು ಭಾವಿಸಿದ್ದೇನೆ. ಇಂದಿಗೂ ಅದು ಯಾಕೆ ಪ್ರಭಾವ ಬೀರಿತು ಎಂಬುದು ತಿಳಿದಿಲ್ಲ.

ನನಗೆ ನೆನ್ನೆ ರಾತ್ರಿ ಎಚ್ಚರಿಕೆಯಲ್ಲಿ ಜರುಗಿದ ಅದೆಷ್ಟೋ ಸಂಗತಿಗಳು ನೆನಪಿರುವುದಿಲ್ಲ. ಹಾಗಾದಾಗ ಇನ್ನು ರಾತ್ರಿಯ ಕನಸಿನ ಮಾತೆಲ್ಲಿ. ಆದರೆ ಅದೇಕೋ ಆ ದಿನದ ಕನಸು ನನಗೆ ಬೆಳಗಾದಾಗಲೂ ನೆನಪಿತ್ತು . ಬಹಳ ಸ್ಪಷ್ಟವಾಗಿ, ಪ್ರತೀ ಸಂಗತಿಯೂ ನೆನಪಲ್ಲಿ ಉಳಿದಿತ್ತು. ಕನಸು ಬಹಳ ಸುಲಭವಾಗಿತ್ತು. ಕನಸು ಈ ರೀತಿ ಸಾಗುತ್ತೆ. ಒಮ್ಮೆ ನಾನು ಮಂಚೇನಳ್ಳಿಯ ಟೆಂಟಿಗೆ ಸಿನಿಮಾಕ್ಕೆ ಹೋಗಿದ್ದೆ. ಯಾವ ಸಿನಿಮಾ, ನಾಯಕ ಯಾರು ಎಂಬುದು ಯಾವುದೂ ಗೊತ್ತಿಲ್ಲದೆ ಹೋಗಿದ್ದೆ. ಜನ ಬಹಳ ಇದ್ದರು. ಎಷ್ಟೇ ಹೊತ್ತಾದರೂನೂ ಸಿನಿಮಾ ಆರಂಭ ಆಗಲಿಲ್ಲ. ಆಗ ಅನ್ನಿಸ್ತು , ಜನ ಯಾಕೆ ಇಷ್ಟು ಗಲಾಟೆ ಮಾಡ್ತಾರೆ, ಇವರೆಲ್ಲ ಹೊರಟು ಹೋದರೆ ಎಷ್ಟು ಚೆನ್ನಾಗಿರುತ್ತೆ ಅಂತಂದುಕೊಂಡಾಗ ಜನರೆಲ್ಲ ಹೊರಟು ಹೋದರು. ಸಿನಿಮಾ ಆರಂಭವಾಗಬಾರದ ಅಂತ ಅಂದುಕೊಂಡಾಗ ಅದು ಆರಂಭ ಆಯಿತು. ನಾನು ಕಲ್ಪಿಸಿಕೊಂಡ ಪಾತ್ರಗಳು ಪರದೆಯ ಮೇಲೆ ಮೂಡಿ ಬಂದವು. ನಾನು ಕಲ್ಪಿಸಿಕೊಂಡ ಚಿತ್ರಗಳು, ಪಾತ್ರಗಳು, ಸನ್ನಿವೇಷಗಳು, ಹಾಸ್ಯ, ಕೋಪ, ದುಃಖ ಎಂಬೋ ಭಾವಗಳು ಎಲ್ಲವೂ ನಾನು ಅಂದುಕೊಂಡಂತೆ ನಡೆಯುತ್ತಿತ್ತು.
ಮೊದಲಿಗೆ ಖುಷಿಯಾಯಿತು. ಆಮೇಲೆ ನನ್ನ ಕಲ್ಪನೆಯೆಲ್ಲಾ ಬರಿದಾಗುತ್ತ ಸಾಗಿತು. ಎಷ್ಟೇ ಕಲ್ಪಿಸಿಕೊಂಡರೂನು ಅವು ಮತ್ತೆ ಮತ್ತೆ ಪುನರಾವೃತ್ತಿಯಾಗುತಿತ್ತೆ ವಿನಃ ಯಾವುದೇ ಹೊಸ ಸನ್ನಿವೇಷಗಳು ಮೂಡಲೇ ಇಲ್ಲ. ಒಂದು ರೀತಿಯ ನಿಶ್ಯಕ್ತಿ ಕಾಡಿತು. ಕಲ್ಪನೆಯು ಸೋತುಬಿಟ್ಟಾಗ  ಚಿತ್ರಗಳು ಚಲನೆಯಿಲ್ಲದೆ ಸ್ತಬ್ಧವಾಗಿ ಹೋದವು. ಕೇವಲ ಸ್ತಬ್ಧ ಚಿತ್ರಗಳು ಎದುರಿಗೆ ಸಾಲಾಗಿ ನಿಂತಿದ್ದವು, ಯಾವುದೇ ಚಲನೆ ಇಲ್ಲದೆ. ಕಡೆಗೆ ಮುಗಿಯಬಾರದ ಈ ಹಾಳು ಸಿನಿಮಾ ಅಂದು ಕೊಂಡಾಗ ಸಿನಿಮಾ ಮುಗಿದಿತ್ತು. ನಾನು ಹೊರಗೆ ಬಂದಾಗ ಜಗತ್ತು ಕೇವಲ ನನ್ನ ಕಲ್ಪನೆಯಂತೆಯೆ ಮೂಡಿ ಬಂದಿದೆಯ?, ನಾನು ಕಲ್ಪಿಸಿಕೊಂಡಂತೆ ಜರುಗುತ್ತ? ಎಂದು ಪರೀಕ್ಷಿಸೋಣ ಎಂದುಕೊಂಡಾಗ ಎಚ್ಚರವಾಗಿ ಹೋಯಿತು. "

"ಅಬ್ಬ, ದೊಡ್ಡ ಕತೆ ಮಾರಾಯ. ಅದೆಲ್ಲ ಸರಿ, ಯಾವುದಾದರೂ ಹುಡುಗಿಯನ್ನ ಇಷ್ಟ ಪಟ್ಟಿದ್ದೀಯ...? ಪ್ರಪೋಸ್ ಮಡಿದ್ದೀಯ"
"ಹೂಂ. ಒಬ್ಬ ಹುಡುಗಿಗೆ ಪ್ರಪೋಸ್ ಮಾಡಿದ್ದೆ. ... ಆದರೆ...."
"ಯಾಕೋ, ಏನಾಯ್ತು.....? ಹೇಗನ್ನಿಸಿತ್ತು   ಆ ಕ್ಷಣ, ಮಸ್ತ ಮಜ ಅಲ್ವ..."
"ಇಲ್ಲ, ನನಗೆ..................................................................................................................................................... 
..............................................................................................
................................. ಮರೆತುಹೋಗುತ್ತಿದ್ದೇನೆ"

           *********************************************
ಇದಾದ ನಂತರ ತಾರಕ ಮತ್ತೆ ಬೇಟಿಯಾಗಲಿಲ್ಲ. ಒಮ್ಮೆ ಒಂದು ಈ-ಮೇಲ್ ಕಳಿಸಿದ್ದ. 
"ಆತ್ಮೀಯ ಅರವಿಂದ, ಹೇಗಿದ್ದಿ? ಹಂಸನ ವಿಷಯವನ್ನ ಯಾರಿಗೂ ಹೇಳಿರಲಿಲ್ಲ. ನಾನು ಮರೆತುಹೋಗಿದ್ದದ್ದು ನಿನಗೆ ಗೊತ್ತಿದೆ. ಮೊನ್ನೆ ಅವಳು ಒಂದು ಪತ್ರ (ಇ-ಮೇಲ್) ಕಳುಹಿಸಿದ್ದಳು. ಯಾಕೋ ನಿನ್ನ ಬಳಿ ಹೇಳಿಕೊಳ್ಳಬೇಕೆಂದೆನಿಸಿತು. 
"ನನಗೆ ಗೊತ್ತು, ನಾನು ನಿನಗೆ ಪ್ರತಿಕ್ರಿಯಿಸಬೇಕೆಂದು. ಬಹಳ ಆಲೋಚಿಸಿದೆ. ನೀನು ನನ್ನ ಆತ್ಮೀಯ ಗೆಳೆಯ, ಆದರೂ ನಾನು ನಿನ್ನನ್ನ ಬಾಳ ಸಂಗಾತಿಯಾಗಿ ಸ್ವೀಕರಿಸಲಿಕ್ಕೆ ಆಗೋಲ್ಲ. ನಿನ್ನನ್ನೇ ಅಲ್ಲಾ ಯಾವ ಹುಡುಗನನ್ನೂ ಬಾಳಸಂಗಾತಿಯಾಗಿ ಚಿಂತಿಸಲೂ ಸಾದ್ಯವಾಗುತ್ತಿಲ್ಲ. ಪ್ರತೀ ಬಾರಿಯೂ ಒಬ್ಬರನ್ನು ನೋಡಿದಾಗ, ನನಗನ್ನಿಸುತ್ತೆ, ನಾನು ಯಾಕೆ ಅವರನ್ನ ಬಾಳ ಸಂಗಾತಿಯಂತಲೊ, ಪ್ರಿಯತಮ ಅಂತಲೊ, ಗಂಡ ಅಂತಲೊ ಸ್ವೀಕರಿಸಬೇಕು ಅಂತ. ಪ್ರತೀ ಹುಡುಗಿಗೂ ಬರಲೇ ಬೇಕಿದ್ದ ಆ ಭಾವನೆ ನನಗಿಲ್ಲ, ನನಗೆ ಬರುತ್ತಿಲ್ಲ. ಎಂತಹ ರೋಮಾಂಚನವಾದ, ಲೈಂಗಿಕವಾದ ದೃಷ್ಯವನ್ನು ಕಂಡಾಗಲು, ಅದು ನನಗೆ ಮನರಂಜನೆಯ ಬಾಗವಾಗಿ ಕಂಡಿದೆಯೆ ವಿನಃ ನನ್ನಲ್ಲಿ ಯಾವ ಭಾವನೆಯನ್ನೂ ಮೂಡಿಸಲಿಲ್ಲ. ಸ್ವತಃ ನನ್ನನ್ನು ನಾನು ಆ ಸ್ಥಿತಿಯಲ್ಲಿ ಊಹಿಸಿಕೊಂಡಾಗಲು ನನಗೆ ಏನೂ ಅನ್ನಿಸಲಿಲ್ಲ. ನಾನು ಸೋತಿದ್ದೇನೆ. ಅದು ನನ್ನ ಸಮಸ್ಯೆಯಿರಬಹುದು. ನಿನ್ನ ಬೌದ್ಧಿಕತೆಗೆ ಇದು ಅರ್ಥವಾಗುತ್ತೆಂದು ಭಾವಿಸಿದ್ದೇನೆ." 
ಹೀಗೆಂದು ಬರೆದಿದ್ದಳು. ನನ್ನಹಂಕಾರಕ್ಕೆ ದೊಡ್ಡ ಪೆಟ್ಟಾಗಿತ್ತು. ಅವಳ ತಿರಸ್ಕಾರ ಯಾವುದೇ ಕಾರಣಕ್ಕೂ ನನಗೆ ಬೇಸರವಾಗಿರಲಿಲ್ಲ. ನಿನ್ನ ಬೌದ್ಧಿಕತೆಗೆ ಇದು ಅರ್ಥವಾಗುತ್ತೆ ಎಂಬುದನ್ನು ಓದಿದಾಗ ಯಾರು ಬೌಧಿಕತೆಯಲ್ಲಿ ಎತ್ತರದ ಸ್ಥಾನದಲ್ಲಿ ನಿಂತಿದ್ದಾರೆಂಬುದು  ಚಿಂತಿಸಿದಾಗ ಕುಗ್ಗಿ ಹೋದೆ. ತೀರ ಕುಬ್ಜನಾಗಿ ನಾನು ಕಾಣ್ತಾ ಇದ್ದೇನೆ. ಪುರುಷ ದೇಹದ ಅಹಂಕಾರವನ್ನು ನಿರಾಕರಿಸುವ ಶಕ್ತಿ ಹೆಣ್ಣಿಗೆ ಮಾತ್ರ ಇದೆಯೆಂದೆನಿಸುತ್ತೆ. ಅವಳು ನನಗಿಂತ ತೀರ ಎತ್ತರದಲ್ಲಿದ್ದಾಳೆ. 
ಈಗ ಹೊರಡುತ್ತಿದ್ದೇನೆ. ಎಲ್ಲಿಗೆ ಅಂತ ಕೇಳಬೇಡ, ಸಂಪರ್ಕಿಸಬೇಡ, ಸಂಪರ್ಕಿಸುವ ಪ್ರಯತ್ನವನ್ನೂ ಮಾಡಬೇಡ. ನಿನ್ನನ್ನು ಸಂಪರ್ಕಿಸಬೇಕೆಂದೆನಿಸಿದಾಗ ಕಂಡೀತವಾಗಿಯು ಸಿಗುತ್ತೇನೆ.  

ಇಂತಿ
ತಾರಕ


...........................

ನನಗೆ ಕವನದ ಅನುವಾದ ಸಿದ್ಧಿಸಲೇ ಇಲ್ಲ
ತೀರ ವಿಚಿತ್ರವೆಂಬಂತೆ
ಆಸ್ಪತ್ರೆಯಲ್ಲಿ ಆ ಮುಲುಗಾಟಗಳ ಮಧ್ಯೆ
ಒಂದು ಕವನವನ್ನ ಅನುವಾದಿಸಿದ್ದೆ
"ಆಸ್ಪತ್ರೆಯ ಬೆಡ್ಡುಗಳಿಗೆ ಯಾವ ರೋಗಿಯ ನೆನಪೂ ಉಳಿದಿರೋದಿಲ್ಲ
ಜ್ವರ ತೀವ್ರವಾದಾಗ
ಅಪ್ರಜ್ಞಾವಸ್ಥೆಯಲ್ಲಿ
ಅಸಂಬದ್ಧವೆನಿಸೊ, ಸಂಬಂಧವೇ ಇಲ್ಲ ಎನಿಸೊ
ಎಷ್ಟೋ ಚಿತ್ರಗಳು
ಬಂದು ಹೋಗಿ ಬಿಡುತ್ತೆ
ಅವ್ಯವಸ್ಥಿತವಾಗಿ

ನಿರಚನೆಯ ಮಾತು ಆಗಲೆ ಶುರುವಾದದ್ದು
ನರ್ಸುಗಳಿಗೊ, ಡಾಕ್ಟರುಗಳಿಗೊ ರೋಗಿಯ ನೆನಪುಳಿದಿರಬಹುದು
ಕೆಲವೊಮ್ಮೆ ಹೀಗೂ ಆಗಿಬಿಡುತ್ತೆ
ರೋಗಿಯನ್ನ ನರ್ಸೊ, ನರ್ಸನ್ನ ರೋಗಿಯೊ ಇಷ್ಟಪಟ್ಟು ಮದುವೆಯಾಗಿಬಿಡಬಹುದು
ರೋಗಿಗಳನ್ನ ವರಿಸಿದ ಡಾಕ್ಟರುಗಳ ಕತೆ ಚರಿತ್ರೆಯಲ್ಲಿ ಗಾಢವಾಗಿ ದಾಖಲಾಗಿ ಹೋಗಿದೆ."

ಮೇಲಿನ ಅನುವಾದದ ಮೂಲ ಕವಿತೆಯ ಕರ್ತೃ-ಕವಿ
ರೋಗಿಷ್ಟನಾಗಿ ಆತನೆ ಕವಿತೆಯಾಗಿಸಿದ ಬೆಡ್ಡಿನ ಮೇಲೆ ಮಲಗಿದ್ದಾನೆ
ಅವನನ್ನೇ ನೋಡುತ್ತ ನಾನು ಕವಿತೆಯನ್ನ ಯಥಾವತ್ ಅನುವಾದಿಸಿದ್ದೇನೆ.

ದುರಂತವೆಂದರೆ,
ಆ ಕವಿ/ರೋಗಿ ಹಿಂದೊಮ್ಮೆ
ಪ್ರೇಮಿಯೂ, ತತ್ವಶಾಸ್ತ್ರಜ್ಞನೂ , ಭೌತಶಾಸ್ತ್ರಜ್ಞನೂ  ಆಗಿದ್ದ. 

................ ಅನ್ನೋ ಸಂಕೀರ್ಣ ಪ್ರತಿಮೆ

           
ನಮ್ಮೂರಲ್ಲಿ ಸತ್ತ ನದಿ ಒಂದಿತ್ತು
ಅದರ ಪಕ್ಕ ಸುಡುಗಾಡೂ ಇತ್ತು
ನಾ ಅಂದುಕೊಂಡಿದ್ದೆ
ಗೋರೀಲಿ ಶವ ಬೆಚ್ಚಗೆ ಮಲಗಿರುತ್ತೆ ಅಂತ
ಬಸುರಿ, ಸತ್ತೋಗಿದ್ಲು
ಅವಳ ಹೊಟ್ಟೇಲಿನ ಮಗು
ಹೂಗುಡೊ ಧ್ವನಿ ಕೇಳಿ
ತತ್ತರಿಸಿ ಕುಸಿದುಬಿಟ್ಟೆ

   
ಜಾದುಗಾರ ಜಾದೂನಿಂದ ಮಗು ಹುಟ್ಟಿಸ್ದ
ಶಾಪಕ್ಕೆ ಸಿಕ್ಕು ಅಲೀತಿದ್ದ ದೇವ ಕನ್ಯೆಯ
ದೇಹದಿಂದ ಬರ್ತಿದ್ದ ಗಂಧಕ್ಕೆ
ಮಾರುಹೋಗೊ ಗುಣಾನ
ಆ ಮಗು ಸಹಜವಾಗೆ ದಕ್ಕಿಸಿಕೊಂಡಿತ್ತು

   
ಗರ್ಭಗುಡೀಲಿ ಸಮಾದಿ ಎದ್ದಿದ್ದೆ ಆಗಿದ್ದು
ಈ ದೇವಾಲಯ ದೇವರು ಇತ್ಯಾದಿ
ನದೀನ ಅಗೆದಾಗ ದೊರೆತಿದ್ದು
ಮುಪ್ಪರಿಯದ ತಲೆ ಬುರುಡೆಗಳು

   
ದೇವರ ಸಾವಿಗೆ ಅಳಲೇ ಬೇಕು ಅನ್ನೋ ನಿನ್ನ ಹಠಕ್ಕೆ
ಅಯ್ಯೋ ಅಂತ ಮರುಕ ಪಡೊ ಸ್ಥಿತೀಲಿ ನಾನಿಲ್ಲ
ಇದು ಊರ ಜಾತ್ರೆ
ಜನಗಳು ಜೈ ಜೈ ಅಂತಿರ್ತಾರೆ
ತೇರೆಳೆದಾಗ ಚಕ್ರಕ್ಕೆ ಬಲಿ ಹಾಕ್ತಿರ್ತಾರೆ
ಗರುಡ ತೇರಿನ ಸುತ್ತ ತಿರುಗಿದ್ನ ಅಂತ ನೋಡ್ತಿರ್ತಾರೆ

   
ಅನುಮಾನ ಎದ್ದು ಬಿಟ್ಟಾಗ
ಮಣ್ಣ ವಾಸನೆ ಪ್ರತೀಕಾರ ತೀರಿಸ್ಕೊಳ್ಳುತ್ತೆ
ಕಾರಣ, ನಿರಾಕರಣ, ಸಕಾರಣ ದ ಅಂಚಲ್ಲಿ
ಹೊಂಚು ಹಾಕೋನ ಬಲೆಗೆ
ಹೆಸರೆ, ರೂಪಾನೆ, ಮತ್ತೊಂದೆ ?

 
ಗತಿಗೆ ನಿಯತಿ ಇಲ್ಲ
ಅಹಂಕಾರಾನೆ ಗತಿ

 
ನಿರ್ಲಿಪ್ತತೆ ಅಂತೀವಲ್ಲ
ಅದಕ್ಕೆ ಒಂದು ರೀತಿಯ ಉತ್ಕಟತೆ ಇರುತ್ತೆ
ಕೃತಿ ನಿರ್ಮಾಣದ ಆಕೃತಿಗೆ                  
ದಿಕ್ಕಾರ ಹೇಳ್ತೀವಲ್ಲ, ಅದಕ್ಕೂ

 
ಜಗತ್ತಿನ ಶೀರ್ಷಿಕೇನ ಅಂಗೈಯಲ್ಲಿ ಕಟ್ಟಿಕೊಂಡ ಸುಡುಗಾಡ ಸಿದ್ಧ
ಜೋಳಿಗೇಲಿ ಹಾಕ್ಕೊಂಡು ತಟ್ಟಂತ ಮಾಯವಾಗಿ ಹೋದ.

.............................


ಅದೇಕೆ ಸಮುದ್ರದ ಎದುರು ನಿಲ್ಲುತ್ತೀಯ ಎಂಬುದಾಗಲಿ
ಅದೇಕೆ ಅದನ್ನೇ ನೋಡುತ್ತಿರುತ್ತೀಯ ಎಂಬುದಾಗಲಿ
ತಿಳಿಯುವುದೇ ಇಲ್ಲ.

ನಾವು ಒಟ್ಟಿಗೆ ಕೂತಿರುತ್ತಿದ್ದ
ಎಲೆ ಇಲ್ಲದ ಆ ಒಂಟಿ ಮರ
ಈಗಲೂ ಅಲ್ಲೇ ಇದೆ

ಈ ಬಾರಿ ನೀನು ಸೀಮಂತಕ್ಕೆ ಬಂದಾಗ
ಸಿಗುತ್ತೀಯ?
ಒಟ್ಟಿಗೆ ಮರಕ್ಕೆ ಒರಗಿ ಕೂತು ಸಮುದ್ರ ನೋಡುವ

ಸಮುದ್ರದ ದಂಡೆಯಲ್ಲಿದ್ದೂ ಯಾಕೆ ಈ ಮರದಲ್ಲಿ ಎಲೆಗಳೆ ಇಲ್ಲ ಎಂಬುದು
ತಿಳಿಯುವುದೇ ಇಲ್ಲ

ತೇಟ್ ನಿನ್ನಂತೆ.....

ರೈಲು ಹಳಿಯ ಮೇಲಿನ ನಾಣ್ಯ

                                                   

ಚಿಕ್ಕವನಾಗಿದ್ದಾಗ ನನಗಿದ್ದ ಒಂದೇ ಕನಸೆಂದರೆ ರೈಲಿನಲ್ಲಿ ಟಿಕೆಟ್ ಕಲೆಕ್ಟರ್ ಆಗುವುದು. ನಿತ್ಯವೂ ರೈಲಿನಲ್ಲಿ ಸಂಚರಿಸುವ, ನಿತ್ಯವೂ ಹಲವು ಬಗೆಯ ಜನರನ್ನ ಕಾಣುವ ಟಿಕೆಟ್ ಕಲೆಕ್ಟರ್ ವೃತ್ತಿ ಬಹಳ ಆಕರ್ಷಿಸಿತ್ತು. ಎಲ್ಲಿಗಾದರೂ ಉಚಿತವಾಗಿ ಪ್ರಯಾಣ ಮಾಡುವ ಅನುಕೂಲ ತಿಳಿದಾಗಲಂತೂ ಬದುಕಿನ ಧ್ಯೇಯವೆ ಆ ವೃತ್ತಿಯನ್ನ ಪಡೆಯುವುದು ಎಂದೆನಿಸಿಬಿಟ್ಟಿತ್ತು. ಅದೃಷ್ಟವೋ ದುರಾದೃಷ್ಟವೋ ನಾನು ಟಿಕೆಟ್ ಕಲೆಕ್ಟರ್ ಆಗಲಿಲ್ಲ, ಅದು ಬೇರೆಯದೆ ಕತೆ. ಏನೇ ಆದರೂ ನನಗೆ ರೈಲೆಂದರೆ ಈಗಲೂ ಇಷ್ಟ. ರೈಲಿನ ಒಳಗಿಂದ ಹೊರಗೆ ಕೈ ಬೀಸಿ ಮಕ್ಕಳಿಗೆ ಟಾಟ ಹೇಳುವ ಬಯಕೆ, ಚಿಕ್ಕವನಾಗಿದ್ದಾಗ ರೈಲು ಹೊರಗಿಂದ ರೈಲಿಗೆ ಟಾಟ ಹೇಳುವಾಗಿನ ಬಯಕೆಯಷ್ಟೆ ತೀವ್ರವಾಗಿದೆ. ಬೇಸರವಾದಾಗ, ಯಾವುದೋ ಖಿನ್ನತೆ ನನ್ನನ್ನಾವರಿಸಿಬಿಟ್ಟಿದೆಯೆಂದೆನಿಸಿದಾಗ ರೈಲು ನಿಲ್ದಾಣದಲ್ಲಿ ಹೋಗಿ ಕೂತುಬಿಡುತ್ತೇನೆ. ರೈಲು ನಿಲ್ದಾಣದಲ್ಲಿ ಟೀ ಕುಡಿಯುತ್ತ, ಅಲ್ಲಿ ಹೋಗುವ ಬರುವ ಜನರನ್ನ, ಅವರ ವೇಷಗಳನ್ನ, ಸಾಮಾನುಗಳನ್ನ ನೋಡುತ್ತ ನನ್ನ ಪ್ರಶ್ನೆಗಳ ಜಗತ್ತನ್ನ ಮರೆಯುತ್ತೇನೆ. ಇಡೀ ರೈಲು ನಿಲ್ದಾಣವು ಮೌನವಾಗಿ ಸಂವಹಿಸುವ ಗುರುವಿನಂತೆ ಕಾಣುತ್ತೆ.

ನನ್ನ ತಾತ(ಅಮ್ಮನ ಅಪ್ಪ) ದೊಡ್ಡ ಸಂಗೀತ ವಿದ್ವಾಂಸರಾಗಿದ್ದವರು. ಸಂಗೀತದಲ್ಲಿ ದೊಡ್ದ ವಿದ್ವಾಂಸರಾಗಿದ್ದರೂ ಅದರಲ್ಲಿ ಹಣ ದಕ್ಕುತ್ತಿರಲಿಲ್ಲ. ಹಲ್ಲುಪುಡಿ, ವೋಂವಾಟರ್, ಕಸ್ತೂರಿ ಮಾತ್ರೆಗಳನ್ನ ಮಾಡಿ ನಿತ್ಯವೂ ಹೆಗಲ ಮೇಲೆ ಹೊತ್ತು ಊರೂರೂ ಅಲೆದು ಅವುಗಳನ್ನು ಮಾರಿದರೆ ಅಂದಿನ ಜೀವನ. ನಮ್ಮ ಅಮ್ಮನ ಊರು ಆಂಧ್ರದ ಪೆನುಗೊಂಡ ಹತ್ತಿರದ ಹಳ್ಳಿ. ಆ ಬಿಸಿಲಿನಲ್ಲಿ ಎಷ್ಟೋ ಬಾರಿ ಚಪ್ಪಲಿಯಿಲ್ಲದ ಕಾಲುಗಳಲ್ಲಿ ಸಾಮಾನುಗಳನ್ನ ಹೊತ್ತು ಊರೂರು ಅಲೆಯುವಾಗ ಆ ಬಿಸಿಲ ನೋವು ಕಾಡದಿರಲೆಂದು ದಾರಿಯುದ್ದಕ್ಕೂ ಹಾಡನ್ನಾಡುತ್ತ ಆ ನೋವು ಮರೆಯುತ್ತಿದ್ದರು. ತಾತನಿಗೆ ಸಂಗೀತದಿಂದ ಎಂತಹ ಬೇಸರವಾಗಿತ್ತೆಂದರೆ, ತನ್ನ ಮಕ್ಕಳಿಗ್ಯಾರಿಗೂ ತಾತ ಎಂದಿಗೂ ಸಂಗೀತವನ್ನ ಹೇಳಿಕೊಡಲಿಲ್ಲ. ಸಂಗೀತದಿಂದ ತನ್ನ ಬದುಕಿಗೆ ಏನೂ ಉಪಯೋಗವಾಗಲಿಲ್ಲವೆಂದೆ ತಾತ ಭಾವಿಸಿದ್ದರು. ತಾತ ಅಕಾಲದಲ್ಲಿ ತೀರಿಕೊಂಡರು. ನನ್ನ ಅಮ್ಮ, ಅವಳ ಐದು ಜನ ಸಹೋದರರು, ಇಷ್ಟೂ ಜನರ ಭಾರ ಅಜ್ಜಿಯ ಮೇಲೆ ಬಿದ್ದಿತು. ಬದುಕು ಸಾಗಲೆ ಬೇಕು. ಅದೆ ಸಮಯಕ್ಕೆ ಆ ಊರಿಗೆ ರೈಲು ನಿಲ್ದಾಣ ಬಂತು. ರೈಲು ನಿಲ್ದಾಣದ ಕಾಮಗಾರಿಗೆ ಜನ ಬರತೊಡಗಿದರು. ಊರ ಹೊರಗೆ ಮನೆ ಮಾಡಿಕೊಂಡಿದ್ದ ಅಜ್ಜಿಯವರಿಗೆ ರೈಲು ನಿಲ್ದಾಣ ಹತ್ತಿರವಿತ್ತು. ರಾಜ್ಯ ರಸ್ತೆ ಹೆದ್ದಾರಿಗೆ ಹಾಕಿದ ರೈಲ್ವೆ ಗೇಟು ಮನೆಯಿಂದ ಸ್ವಲ್ಪ ದೂರವೆ ಇತ್ತು. ಆಗ ಅಜ್ಜಿ ಹೋಟೆಲ್ ತೆಗೆದಳು. ಹಿರಿಯ ಮಗನಿಗೆ ಕಿರಾಣಿ ಅಂಗಡಿ ಹಾಕಿಕೊಟ್ಟಳು. ಅಂದಿನಿಂದ ರೈಲು ಕಾರ್ಮಿಕರು, ರೈಲು ಗೇಟು ಹಾಕಿದಾಗ ಬರುವ ಮಂದಿ ಹೀಗೆ ಅಜ್ಜಿಯ ಹೋಟೆಲು ಊರಿನ ಕೇಂದ್ರಸ್ಥಾನವಾಯಿತು. ಅಜ್ಜಿಯ ಮನೆಯು ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿತು. ನನ್ನ ಅಮ್ಮನಿಗೆ, ಅವಳ ಇಡೀ ಕುಟುಂಬಕ್ಕೆ ರೈಲಿನ ಬಗೆಗೆ ಒಂದು ರೀತಿಯ ಧನ್ಯತಾ ಭಾವವಿತ್ತು. ಅವಳ ಈ ಧನ್ಯತಾ ಭಾವ ನನ್ನ ಕುತೂಹಲವಾಗಿ ರೈಲು ಆಕರ್ಷಿಸತೊಡಗಿತು.

ಅಜ್ಜಿಯ ರೀತಿಯಲ್ಲಿ ಅಮ್ಮ ಎಂದಿಗೂ ರಾಜ ರಾಣಿಯರ, ದೇವತೆಗಳ, ಭಾರತ, ರಾಮಾಯಣದಂತಹ ಕತೆಗಳನ್ನ ಹೇಳಲೇ ಇಲ್ಲ. ನನಗೆ ಈಗ ನೆನಪಾಗುತ್ತೆ, ನಾನು ಚಿಕ್ಕವನಾಗಿದ್ದಾಗ ಅಮ್ಮನಿಗೆ ಎಂದೂ ಕತೆಗಳನ್ನ ಹೇಳೆಂದು ಕಾಡುತ್ತಿರಲಿಲ್ಲ. ಎಷ್ಟು ಕತೆ ಕೇಳಿದ್ರೂ ಹೇಳಲಿಕ್ಕೆ ಅಜ್ಜಿ ಇರ್ತಾ ಇದ್ದಳು. ನಂತರದ ದಿನಗಳಲ್ಲಿ ಅಮ್ಮ ಹಲವು ಕತೆಗಳನ್ನ ಹೇಳುತ್ತಿದ್ದಳು. ತನ್ನದೇ ಬದುಕಿನ ನಿಜದ ಸಂಗತಿಗಳು ನನಗೆ ಕತೆಗಳಾಗಿ ಕೇಳುತ್ತಿತ್ತು. ತನ್ನ ಗತದ ನೋವನ್ನ, ನಲಿವನ್ನ, ನನ್ನೊಡನೆ ಹೇಳಿಕೊಳ್ಳುತ್ತ ಅವಳ ಬದುಕಿನ ಪೂರ್ಣ ಚರಿತ್ರೆಯಲ್ಲಿ ನನ್ನನ್ನೂ ಭಾಗಿಯಾಗಿಸುತ್ತಿದ್ದಳು. "ನಿಮ್ಮ ಮಾಮ ರೈಲು ಹಳಿಗಳನ್ನ ಪರೀಕ್ಷಿಸೋ ಟ್ರಾಲೀನ ನೂಕಲಿಕ್ಕೆ ಹೋಗ್ತಾ ಇದ್ರು. ದಿನಕ್ಕೆ ಒಂದು ರೂಪಾಯಿ ಕೊಡ್ತಾ ಇದ್ರು. ಆಗ ನಂಗೆ ಒಂದು ರೂಪಾಯಿ ಎಷ್ಟು ದೊಡ್ಡದಾಗಿ ಕಂಡಿತು ಅಂದ್ರೆ, ದಿನಾ ಒಂದು ರೂಪಾಯಿ ಅಂದ್ರೆ ತಿಂಗಳಿಗೆ ಮೂವತ್ತು ರೂಪಾಯಿ ಅಂತ ಖುಷಿಯಿಂದ ನಿಮ್ಮ ಮಾವಂಗೆ ನಾನೇ ಹೋಗು ಅಂತ ಹೇಳ್ತಾ ಇದ್ದೆ." ಅಂತ ಹೇಳ್ತಾ ನನ್ನ ಮಾಮ ಈಗ ತಲುಪಿರುವ ಹಂತದ ಬಗೆಗೆ ಅಭಿಮಾನಪಡುತ್ತಿದ್ದಳು. ಹಾಗೆ ಟ್ರಾಲಿ ನೂಕುತ್ತ ನನ್ನ ಮಾವ ಚೆನ್ನಾಗಿ ಓದಿ ಬ್ಯಾಂಕಿನಲ್ಲಿ ಉನ್ನತ ಹಂತದ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ನನ್ನ ಅಮ್ಮನ ಹಳೇ ಕಪ್ಪು ಬಿಳುಪಿನ ಎರೆಡು ಜಡೆಗಳ ಫೋಟೋ ಒಂದಿದೆ. ಆ ಫೋಟೋವನ್ನ ನೋಡಿ, ನನ್ನ ಅಮ್ಮ ಹೋಗುವ ರೈಲಿಗೆ ಹೇಗೆ ಟಾಟ ಹೇಳುತ್ತಿದ್ದಳು ಅಂತ ನೆನೆದಾಗ ನಗು ಬರುತ್ತೆ.

ಹವಾನಿಯಂತ್ರಿತಬೋಗಿ(ಎಸಿ)ಯೊಳಗೆ ಏನಿರುತ್ತದೆ, ಹೇಗಿರುತ್ತದೆ ಎಂಬುದು ನನಗೆ ರೈಲಿನ ಬಗೆಗಿದ್ದ ಕುತೂಹಲಗಳಲ್ಲಿ ಅತಿ ಮುಖ್ಯವಾದದ್ದಾಗಿತ್ತು. ಸದಾ ಕಪ್ಪು ಗಾಜಿನಿಂದ ಆವೃತವಾಗಿರುತ್ತಿದ್ದ, ಎಂದಿಗೂ ನಮಗ್ಯಾರಿಗೂ ಟಾಟ ಮಾಡಲಾಗದ ಆ ಕಪ್ಪು ಕನ್ನಡಕದ ಬೋಗಿಯೊಳಗೆ ಏನಿರಬಹುದು, ಅಲ್ಲಿನ ಜನ ಹೇಗಿರುತ್ತಾರೆ ಎಂದು ತಿಳಿಯಲು ಬಹಳ ಆಸೆಪಟ್ಟಿದ್ದೆ. ಜೀವನದಲ್ಲಿ ಆ ಬೋಗಿಯೊಳಗೆ ಸುಮ್ಮನೆ ಒಮ್ಮೆಯಾದರೂ ಹೋಗಿ ನೋಡಿಕೊಂಡು ಬರಬೇಕೆಂಬೊ ಆಸೆ ಇತ್ತು. ನಮ್ಮ ಆರ್ಥಿಕ ಅರಿಸ್ಥಿತಿಯಲ್ಲಿ ಎಸಿ ಬೋಗಿಯೊಳಗೆ ಪ್ರಯಾಣ ಮಾಡುವುದು ಸಾದ್ಯವಿರಲಿಲ್ಲ. ಒಮ್ಮೆ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಹಳ್ಳಿಗೋಗುವ ರೈಲಿಗೆ ಕಾಯುತ್ತಿದ್ದಾಗ ಯಾವುದೋ ರೈಲು ಎದುರಿಗೆ ಬಂದು ನಿಂತಿತು. ಸರಿಯಾಗಿ ಎಸಿ ಬೋಗಿ ನನ್ನೆದುರಿಗೆ ನಿಂತಿತ್ತು. ಹೆಚ್ಚು ಜನರ್ಯಾರೂ ಇರಲಿಲ್ಲ. ಆಗ ಒಳ ಹೋಗಿ ನೋಡಿಕೊಂಡು ಬರಲೆ ಅಂತನ್ನಿಸಿತು. ಅದೇ ಕ್ಷಣದಲ್ಲಿ ಅತ್ಯಂತ ಭಯವೂ ಆಗತೊಡಗಿತು, ಅಕಸ್ಮಾತ್ ಯಾರಾದರೂ ನೋಡಿದರೆ! ಯಾರೋ ಹೇಳಿದ್ದರು, ಎಸಿ ಬೋಗಿಗಳೊಳಗೆ ಪೋಲೀಸರು ಇರುತ್ತಾರೆ ಅಂತ, ಹಾಗೇನಾದರೂ ಪೋಲಿಸರು ಇದ್ದು ನನ್ನನ್ನು ಹಿಡಿದುಕಂಡುಬಿಟ್ಟರೆ ಎಂದೆಲ್ಲ ಭಯವಾಗುತ್ತಿತ್ತು. ಭಯವನ್ನು ಮೀರಿದ ಆಕರ್ಷಣೆ ಆ ಬೋಗಿಗಳೊಳಗಿತ್ತು. ಅದರಲ್ಲಿ ಏನೋ ಇದೆ. ಅಲ್ಲಿನ ಜನಗಳು ಬೇರೆಯದೆ ರೀತಿ ಇರುತ್ತಾರೆ. ಅಲ್ಲಿನ ಸೀಟುಗಳು ಬೇರೆಯದೆ ರೀತಿ ಇರುತ್ತದೆ. ಆ ಆಕರ್ಷಣೆ ನನ್ನನ್ನ ಒಳಗೆ ನೂಕಿತು. ಬಾಗಿಲನ್ನ ಹೇಗೆ ತೆಗೆಯುವುದೆಂಬುದೂ ತಿಳಿದಿರಲಿಲ್ಲ. ಹೇಗೋ ನೂಕಿದಾಗ ತೆರೆದು ಒಳಗೆ ಸೇರಿಕೊಂಡೆ. ಕೆಲವೆ ಜನರಿದ್ದರು. ಯಾವುದೋ ಅನ್ಯ ಗ್ರಹದ ಜೀವಿಯೊಬ್ಬ ಒಳಗೆ ಬಂದಂತೆ ಕಾಣುತ್ತಿದ್ದರು. ಹವಾನಿಯಂತ್ರಿತ ವ್ಯವಸ್ತೆ ತಣ್ಣಗಿನ ಅನುಭವವನ್ನೂ, ಹೊರಗಿನ ಶಬ್ದವು ಕೇಳದಂತಹ ನಿಶ್ಯಬ್ದವನ್ನೂ ಸೃಷ್ಟಿಸಿತ್ತು. ದೀರ್ಘವಾಗಿ ಉಸಿರೆಳೆದುಕೊಂಡಾಗ ಜೀವನದ ಮಹತ್ಸಾದನೆ ಮಾಡಿದ ಭಾವನೆಯುಂಟಾಯಿತು. ಅಷ್ಟರೊಳಗೆ ರೈಲು ಹೊರಟಿತ್ತು. ಬಾಗಿಲನ್ನು ಹಿಂದೆ ತೆರೆಯಲು ಹೋಗಿ ಮುಂದೆನೂಕುತ್ತಿದ್ದೆ, ಬಾಗಿಲು ತೆರೆಯುತ್ತಿಲ್ಲ, ರೈಲು ಹೊರಡುತ್ತಿತ್ತು. ಭಯ ಗಾಬರಿಯಿಂದ ಬೆವೆತುಹೋದೆ. ನಂತರ ಆ ಕಡೆಯಿಂದ ಯಾರೋ ತೆಗೆದರು. ಹೊರಗೆ ಬಂದು ರೈಲಿನಿಂದ ದುಮುಕಿದೆ. ಬದುಕಿದೆನೊ ಜೀವವೆ ಅಂತನ್ನಿಸಿಬಿಟ್ಟಿತ್ತು. ಕಡೆಗೂ ಆ ಬೋಗಿಯೊಳಗೆ ಹೋದೆನಲ್ಲ ಅಂತ ಅನ್ನಿಸಿದರೂ ನಂತರದ ದಿನಗಳಲ್ಲಿ ಆ ಆಕರ್ಷಣೆಯೆ ಹೊರಟುಹೋಯಿತು. ಅದೂ ಕೂಡ ಮಾಮೂಲಿ ಬೋಗಿಯಂತೆಯೆ ಅನ್ನಿಸಿಬಿಟ್ಟಿತು. ಮುಂದೆ ಉನ್ನತ ವ್ಯಾಸಂಗಕ್ಕೆ ಸೂರತ್ಕಲ್ಲಿಗೆ ಹೋದಾಗ, ಕಾಲೆಜಿನ ವತಿಯಿಂದ ಅಲಹಾಬಾದಿಗೆ ಹೋಗಿ ಅಲ್ಲಿ ನೊಬೆಲ್ ವಿಜೇತರನ್ನ ಬೇಟಿಯಾಗುವ ಅವಕಾಶ ದೊರಕಿತು. ಆಗ ಅಲಹಬಾದಿಗೆ ಎಸಿ ಬೋಗಿಯಲ್ಲಿ ಹೋಗುವ ಅವಕಾಶವನ್ನ ಸರ್ಕಾರ ಒದಗಿಸಿತ್ತು. ಅಂದು ಎರಡು ದಿನಗಳ ಪ್ರಯಾಣವನ್ನ ಆ ಎಸಿ ಬೋಗಿಯಲ್ಲೆ ಕಳೆದೆ. ಈಗ ಯಾವ ಸಮ್ಮೇಳನಕ್ಕೆ ಹೋಗಬೇಕಾದರೂ ಎಸಿ ಬೋಗಿಯಲ್ಲಿ ಹೋಗುವ ಸೌಲಬ್ಯವಿದೆ. ನನ್ನ ಈಗಿನ ಸ್ಥಿತಿಯ ಬಗ್ಗೆ ನನಗೆ ಹೆಮ್ಮೆ ಗೌರವ ಮೂಡಿದರೂ, ಸಾಮಾನ್ಯ ದರ್ಜೆಯಲ್ಲಿ ಹೋಗುತ್ತಿದ್ದಾಗಿನ ಆ ಆತ್ಮೀಯತೆ ಇದರಲ್ಲಿ ದಕ್ಕುವುದೇ ಇಲ್ಲ. ಅಲ್ಲಿನ ಗಲಾಟೆ, ಅಲ್ಲಿನ ಹರಟೆ, ಅಲ್ಲಿನ ಮಕ್ಕಳ ಸದ್ದು, ರೈಲಿನ ಸದ್ದು, ಹೊರಗಿನ ಚಲಿಸುವ ದೃಶ್ಯಗಳು ಯಾವೂ ಇಲ್ಲಿಲ್ಲ. ಕೇವಲ ಸಾಮಾನ್ಯ ದರ್ಜೆಯ ಪ್ರಯಾಣವನ್ನ ಅನುಭವಿಸಲಿಕ್ಕಾಗಿಯೆ ಬೆಂಗಳೂರಿನಿಂದ ಹಳ್ಳಿಗೆ ಹೋಗುವಾಗಲೆಲ್ಲ ಸಾಮಾನ್ಯ ದರ್ಜೆಯ ರೈಲಿನಲ್ಲೆ ಹೋಗುತ್ತೇನೆ. ದೂರ ಪ್ರಯಾಣದ ವೇಳೆ ಎಸಿ ಬೋಗಿ ಹತ್ತುವಾಗಲೆಲ್ಲ, ನನ್ನ ನೋಟ ಆ ಸಾಮಾನ್ಯ ಬೋಗಿಯೆಡೆಗೆ ಇರುತ್ತೆ. ಹಂತಗಳ ಬೆಳವಣಿಗೆಯ, ಅಥವಾ ಯಾವುದರಿಂದಲೋ ದೂರ ಸರಿಯುವ ಕ್ರಿಯೆಯ ಎಂಬೋ ದ್ವಂದ್ವಕ್ಕೆ ಉತ್ತರ ಸಿಗದೆ ರೈಲಿಳಿಯುತ್ತೇನೆ.

**************************************************************

ಎಂದಿಗೂ ಐದೇ ಐದು ನಿಮಿಷವೂ ಸುಮ್ಮನೆ ಇರದ ನಮ್ಮೂರ ಸುಬ್ಬ ಅಂದೇಕೆ ಇಡೀ ದಿನ ಏನನ್ನೂ ಮಾತನಾಡಲಿಲ್ಲ ಎಂಬೋದು ನನಗೆ ಇಂದಿಗೂ ತಿಳಿಯುತ್ತಿಲ್ಲ. ಸುಬ್ಬನನ್ನು ಕಂಡಾಗಲೆಲ್ಲ ಅಂದೇಕೆ ಸುಬ್ಬ ಸುಮ್ಮನೆ ಕೂತಿದ್ದ ಎನ್ನುವ ಸಂಗತಿ ಎಚ್ಚರಗೊಳ್ಳುತ್ತೆ. ಸುಬ್ಬ ನಮ್ಮೂರ ರಾಮರಾಯರ ಮಗ. ನನಗಿಂತೆ ಸುಮಾರು ಇಪ್ಪತ್ತು ವರ್ಷ ದೊಡ್ಡವನು. ಆದರೆ ಅವನ ಬುದ್ದಿ ಬೆಳೆಯಲೇ ಇಲ್ಲ. ಸುಬ್ಬ ಒಬ್ಬ ಮಾನಸಿಕ ಅಸ್ವಸ್ತ. ಹಾಗನ್ನೋದು ಸರಿಯ ಅಂತನ್ನಿಸುತ್ತೆ. ಯಾರೂ ಎಂದಿಗೂ ಸುಬ್ಬನನ್ನ ಹುಚ್ಚ ಅಂದದ್ದು ನಾನು ಕೇಳಿಸಿಕೊಂಡಿಲ್ಲ. ಸದಾ ಸುಮ್ಮನೆ ಏನನ್ನೋ ಮಾತನಾಡುತ್ತಲೆ ಇರುತ್ತಾನೆ. ಸುಬ್ಬ ಯಾವಾಗ ನನ್ನನ್ನ ನೋಡಿದರೂ, ಅಥವಾ ಯಾರನ್ನೇ ನೋಡಿದರೂ "ರೈಲು ಬಂತೇನ?" "ಏಷ್ಟೊತ್ತಿಗೆ ಬರುತ್ತಾ..?" ಹೀಗೆ ಏನೋ ಅಸಂಬದ್ದ ಮಾತುಗಳನ್ನ ಸದಾ ಆಡುತ್ತಿರುತ್ತಾನೆ. ನಮ್ಮ ಹಳ್ಳಿಯಲ್ಲಿ(ನನ್ನ ಅಪ್ಪನ ಊರು) ಯಾವ ರೈಲೂ ಇಲ್ಲ. ರೈಲ್ವೇ ನಿಲ್ದಾಣವೂ ಇಲ್ಲ. ಸುಬ್ಬನ ಪರಿಸ್ಥಿತಿಯನ್ನ ತಿಳಿದ ಜನರು "ಹೂ ಬಂತು", "ನಾಳೆ ಬರುತ್ತೆ", "ಇಗೋ ಈಗ ಬರುತ್ತೆ". ಹೀಗೆ ತಮಗೆ ಆ ಕ್ಷಣದಲ್ಲಿ ತೋಚಿದ್ದೇನನ್ನೋ ಹೇಳುತ್ತಿದ್ದರು. ಕೆಲವರಿಗೆ ಇದು ಸುಬ್ಬನ ಜೊತೆಗೆ ಆಡುವ ಆಟ. ನಿಜಕ್ಕೂ ಸುಬ್ಬನಿಗೆ ಈ ರೈಲಿನ ಗೀಳು ಹೇಗೆ ಹತ್ತಿತು ಎಂಬುದು ನಿಗೂಢ ಸಂಗತಿಯಾದರೂ, ನಮ್ಮ ಊರಿನಲ್ಲಿ ಒಂದು ಕತೆ ಸದಾ ಪ್ರಚಲಿತದಲ್ಲಿತ್ತು.

ನಮ್ಮೂರ ರಾಮರಾಯರು ಬಾರೀ ಜಮೀನ್ದಾರರು. ನೂರಾರು ಎಕರೆ ಜಮೀನಿತ್ತು. ಬಹಳ ಶ್ರೀಮಂತರಾಗಿದ್ದುದರಿಂದ ಸಹಜವಾಗಿ ಗತ್ತು ಗರ್ವ ಎಲ್ಲವೂ ಸೇರಿಕೊಂಡಿತ್ತು. ಕಾಲಾಂತರದಲ್ಲಿ ಹಲವು ಸಾಹಸಗಳಿಗೆ ಕೈ ಹಾಕಿ ಎಷ್ಟೋ ಆಸ್ತಿಯನ್ನು ಕಳೆದುಕೊಂಡರೂ, ಗರ್ವವೇನೂ ಕುಸಿದಿರಲಿಲ್ಲ. ಆಗಿನ ಕಾಲಕ್ಕೆ ನಮ್ಮೂರಿಗೆ ಮೊದಲನೆ ಟಿವಿಯನ್ನೂ, ಸ್ಕೂಟರನ್ನೂ ತಂದವರು ಅವರೆ. ಅವರ ಮನೆಯಲ್ಲಿ ಟಿವಿ ನೋಡಲಿಕ್ಕೆ ಅಂತಲೆ ಜನ ಸೇರುತ್ತಿದ್ದರು. ಆ ಟಿವಿಯ ಮುಂದೆ ಕೂತು ಕೈ ಕಾಲನ್ನ ಆಡಿಸುತ್ತ, ಹಿಂದೆ ಕೂತು ನೋಡುವವರಿಗೆ ತೊಂದರೆ ಕೊಡುವುದು ರಾಮರಾಯರ ನೆಚ್ಚಿನ ಹವ್ಯಾಸಗಳಲ್ಲೊಂದು. ನಮ್ಮ ಸುಬ್ಬ ಚಿಕ್ಕವನಾಗಿದ್ದಾಗ ಆ ಟಿವಿಯ ಯಾವುದೋ ಕಾರ್ಯಕ್ರಮದಲ್ಲಿ ರೈಲು ಬಂಡಿಯನ್ನ ನೋಡಿದ. ಅದು ತನಗೆ ಬೇಕು ಅಂತ ಅವರಪ್ಪನ ಬಳಿ ಹಟ ಹಿಡಿದ. ರಾಮರಾಯರು ತಮ್ಮ ದರ್ಪದಿಂದ ಮಗನಿಗೆ ಕೊಡಿಸುವುದಾದರೆ ನಿಜವಾದ ರೈಲನ್ನೆ ಕೊಡಿಸುವ, ಕೊಡಿಸುತ್ತೇನೆ ಅಂದು ಬಿಟ್ಟರು. ನಮ್ಮೂರ ಜನಗಳು ಈಗಲೂ ಹೇಳುತಾರೆ, ರಾಮರಾಯರು ಹಲವು ಬಾರಿ ಬೆಂಗಳೂರಿಗೆ ಹೋಗಿ ನಮ್ಮೂರಿಗೆ ರೈಲನ್ನ ತರಿಸುವ ಪ್ರಯತ್ನ ಮಾಡಿದ್ದರು ಅಂತ. ವಯಸ್ಸಾದಂತೆ ರಾಮರಾಯರ ಆಸ್ತಿ ದರ್ಪ ಎರೆಡೂ ಕಳೆಯಿತು. ಕಡೆಗೆ ಒಂದು ದಿನ ರಾಮರಾಯರೂ ಇಲ್ಲವಾದರು. ಬುದ್ದಿ ಬೆಳೆಯದ ಕಾರಣ, ಸುಬ್ಬನು ಮಾತ್ರ ರೈಲು ಊರಿಗೆ ಬರುತ್ತದೆಂದೆ ಬಾವಿಸಿದ್ದ. ಎಷ್ಟೇ ದೊಡ್ಡವನಾದರೂ, ಬಂದವರನ್ನೆಲ್ಲ ರೈಲು ಬಂತೇನ, ಯಾವಾಗ ಬರುತ್ತ ಅಂತಾನೆ ಕೇಳುತ್ತಿದ್ದ.

ಒಮ್ಮೆ ಸುಬ್ಬನ ಹಟ ಜಾಸ್ತಿಯಾಗಿ ಹೋಯಿತು. ಬೇರೆ ಏನೂ ಮಾತನಾಡದಂತೆ ಯಾವಾಗಲೂ ರೈಲು ರೈಲು ಅಂತಾನೆ ಅನ್ನಲಿಕ್ಕೆ ಶುರುವಿಟ್ಟುಕೊಂಡ. ಸುಬ್ಬನ ತಾಯಿಯೂ ನಮ್ಮ ಅಜ್ಜಿಯೂ(ಅಮ್ಮನ ಅಮ್ಮ) ಯಾವುದೋ ರೀತೀಲಿ ಸಂಬಂಧಿಕರು. ಜೊತೆಗೆ ಒಂದೇ ಊರಿನವರಾದ ಕಾರಣ ನಮಗೂ ಅವರಿಗೂ ಒಳ್ಳೆಯ ಸ್ನೇಹ ಸಂಬಂಧವಿತ್ತು. ಆಗಲೆ ತಿಳಿಸಿದಂತೆ ನನ್ನ ಅಜ್ಜಿಯ ಊರಲ್ಲಿ ರೈಲು ನಿಲ್ದಾಣವಿತ್ತು, ಜೊತೆಗೆ ದಿನಕ್ಕೆ ಎರಡು ರೈಲುಗಳು ನಿಲ್ಲುತ್ತಲೂ ಇದ್ದವು. ಮನೆಯ ಮುಂದಿನ ಜಗುಲಿಯ ಮೇಲೆ ಕೂತರೆ ನಿತ್ಯ ಬೆಳಗಿನಿಂದ ಸಂಚರಿಸುವ ಅಷ್ಟೂ ರೈಲುಗಳನ್ನ ಕಾಣಬೊಹುದಿತ್ತು. ಸುಬ್ಬನ ಕಾಟ ಹೆಚ್ಚಾದುದರಿಂದ ಸುಬ್ಬನ ತಾಯಿ ಒಮ್ಮೆ ನಮ್ಮಜ್ಜಿಯ ಊರಿಗೆ ರೈಲಲ್ಲಿ ಹೋಗಿ ಒಂದೆರೆಡು ದಿನ ಇದ್ದು ಮತ್ತೆ ರೈಲಲ್ಲಿ ಸುಬ್ಬನನ್ನು ಕರೆದುಕೊಂಡು ಬರುವ ಅಂತ ಒತ್ತಾಯಿಸಿದರು. ಅಮ್ಮನಿಗೆ ಹೇಗೂ ಅಜ್ಜಿಯ ಮನೆಗೆ ಹೋಗುವುದೆಂದರೆ ಖುಷಿಯ ವಿಚಾರ, ಹಾಗಾಗಿ ಸುಬ್ಬನನ್ನು ಕರೆದುಕೊಂಡು ಅವರ ತಾಯಿ, ನಾನು, ಅಮ್ಮ ಎಲ್ಲರೂ ರೈಲಲ್ಲಿ ಹೊರಟೆವು.  

ನಾನು ಎಣಿಸಿದಂತೆ ರೈಲು ನಿಲ್ದಾಣದಲ್ಲಾಗಲಿ, ರೈಲಿನಲ್ಲಾಗಲಿ ನಡೆಯಲೇ ಇಲ್ಲ. ಅದೇಕೆ ಹಾಗೆನ್ನಿಸಿತೋ ಏನೋ, ರೈಲು ನೋಡಿದ ತಕ್ಷಣ ಸುಬ್ಬ ಭಾವುಕನಾಗುತ್ತಾನೆ ಅಥವಾ ಮೌನವಾಗುತ್ತಾನೆ ಅಥವಾ ಖುಷಿಯಿಂದ ಕಿರುಚುತ್ತಾನೆ. ಒಟ್ಟಿನಲ್ಲಿ ಅವನ ನಡವಳಿಕೆಯಲ್ಲಿ ಗುರುತಿಸುವಂತಹ ಬದಲಾವಣೆಗಳಾಗುತ್ತೆ ಎಂದು ಭಾವಿಸಿದ್ದೆ. ಆದರೆ ಅದೇನೂ ಜರುಗಲೇ ಇಲ್ಲ. ರೈಲನ್ನ ನೋಡಿದ ಸುಬ್ಬ ರೈಲಿನ ಕುರಿತಾದ ಮಾತು ಬಿಟ್ಟು ಬೇರೆ ಬೇರೆ ಮಾತುಗಳನ್ನು ಸುಮ್ಮನೆ ಆಡುತ್ತಲೇ ಇದ್ದ. ರೈಲು ನಿಲ್ದಾಣದಲ್ಲಿ ರೈಲು ಯಾವಾಗ ಬರುತ್ತೆ ಅಂತ ಕೇಳಲೇ ಇಲ್ಲ. ರೈಲು ಬಂದಾಗ, ಹತ್ತುವಾಗ ಸ್ವಲ್ಪ ಭಯಪಟ್ಟಂತೆ ಕಂಡ. ಆದರೆ ನಂತರ ನಾವೆಲ್ಲ ಹತ್ತಿದ ಮೇಲೆ ಸುಲಭವಾಗಿ ಹತ್ತಿಬಿಟ್ಟ. ನಮ್ಮೂರ ಸುಬ್ಬ ರೈಲಿನಲ್ಲಿ ಕೂತಿದ್ದ. ಯಾವುದೇ ರೀತಿಯ ಬದಲಾವಣೆಯಿಲ್ಲದೆ, ಯಾವ ರೀತಿಯಲ್ಲಿ ಮನೆಯ ಮುಂದೆ ನಿತ್ಯವೂ ಕೂತು ರೈಲು ಬಂತೇನ ಅಂತ ಕೇಳುತ್ತಿದ್ದನೊ ಅದೇ ರೀತಿ ರೈಲಲ್ಲಿ ಕೂತು ಸುಮ್ಮನೆ ಅರ್ಥವಿಲ್ಲದ ಅರ್ಥವಾಗದ ಮಾತುಗಳನ್ನ ಆಡುತ್ತಲೇ ಇದ್ದ.

ಸುಮಾರು ಎರಡು ದಿನಗಳ ಕಾಲ ನಾವುಗಳು ಸುಬ್ಬ ಎಲ್ಲರು ಅಜ್ಜಿಯ ಮನೆಯಲ್ಲಿದ್ದೆವು. ಮನೆಯ ಮುಂದಿನ ಜಗುಲಿಯ ಮೇಲೆ ಇಡೀ ದಿನ ಕೂತು, ಬರುವ ಹೋಗುವ ರೈಲನ್ನ ಗೂಡ್ಸ್ ಗಾಡಿಯನ್ನ ನೋಡುತ್ತಲಿದ್ದ. ಯಾರಿಗೂ ತೊಂದರೆ ಕೊಡದ ಕಾರಣ ಸುಬ್ಬನ ನೋಟವೂ, ಅವನ ಅರ್ಥವಿಲ್ಲದ ಮಾತುಗಳೂ ಯಾರಿಗೂ ಮುಖ್ಯವೆನಿಸಲೇ ಇಲ್ಲ. ಮಾರನೆಯ ದಿನ ನಾವುಗಳು ಊರಿಗೆ ಹಿಂತಿರುಗಿದೆವು. ತೀರ ಆಶ್ಚರ್ಯವೆಂಬಂತೆ ಹಿಂತಿರುಗುವ ಆ ಇಡೀ ದಿನ ಬೆಳೆಗ್ಗೆಯಿಂದಲೆ ಸುಬ್ಬ ಏನನ್ನೂ ಮಾತನಾಡಲಿಲ್ಲ. ಇಂದಿಗೂ ನನ್ನನ್ನು ಈ ಸಂಗತಿ ಕಾಡುತ್ತೆ. ಮಾರನೆ ದಿನದಿಂದ ಸುಬ್ಬ ಮಾಮೂಲಿಯಂತೆ ಮತ್ತೆ ಅದೇ ಸ್ಥಿತಿಯಲ್ಲಿ ಮನೆಯ ಮುಂದೆ ಕೂತು ರೈಲು ಬಂತೇನ ಅಂತ ಮಾತನಾಡುತಿದ್ದ. ಈಗಲೂ ಹೋದರೆ ಅದೇ ಸ್ಥಿತಿ, ಅದೇ ಮಾತು.

ಯಾಕೋ ಇವೆಲ್ಲಾ ಸಂಗತಿಗಳೂ ನೆನಪಾಯಿತು. ಮೊನ್ನೆ ಅಜಿಯ ಊರಿಗೆ ಹೋಗಿದ್ದೆ. ಅಲಿ ಏನೂ ಇರಲಿಲ್ಲ. ಅಜ್ಜಿ, ಅಜ್ಜಿಯ ಮನೆ ಎಲ್ಲವೂ. ಅಜ್ಜಿ ಸತ್ತ ನಂತರ ಒಬ್ಬೊಬ್ಬರಾಗಿ ಎಲ್ಲರೂ ಊರು ಬಿಟ್ಟರು. ಮನೆ ಬಿದ್ದು ಹೋಯಿತು. ಈಗ ಆ ಊರಿನಲ್ಲೇನೂ ಉಳಿದಿರಲಿಲ್ಲ. ಅಮ್ಮ ನಾನು ಆಡಿದ ರೈಲು ನಿಲ್ದಾಣದ ಹತ್ತಿರದ ಬಯಲಿಗೆ ನಡೆದೆ. ಯಾಕೋ ಬೇಸರವಾಯಿತು. ಯಾರೋ ಅಲ್ಲಿ ಆಟವಾಡುತ್ತಿದ್ದರು. ಚಿಕ್ಕವನಾಗಿದ್ದಾಗ ಹತ್ತು ಪೈಸೆ ನಾಣ್ಯವನ್ನು ರೈಲು ಹಳಿಯ ಮೇಲಿಟ್ಟರೆ, ರೈಲು ಆ ನಾಣ್ಯದ ಮೇಲೆ ಚಲಿಸಿದರೆ ಆ ನಾಣ್ಯ ಮ್ಯಾಗನೇಟ್ ಆಗುತ್ತೆ ಅಂತ ಯಾರೋ ಹೇಳಿದ್ದರು. ನಾವೆಲ್ಲ ನಂಬಿದ್ದೆವು. ಎಷ್ಟೋ ಬಾರಿ ಹತ್ತು ಪೈಸೆ ತೆಗೆದುಕೊಂಡು ಹೋಗಿ ಹಳಿಯ ಮೇಲಿಟ್ಟು ಮ್ಯಾಗನೇಟ್ ತೆಗೆದುಕೊಳ್ಳೊಣ ಅಂತನ್ನಿಸಿದ್ದರೂ ಹೆದರಿಕೆಯಾಗುತ್ತಿತ್ತು, ಅಕಸ್ಮಾತ್ ರೈಲು ಬಿದ್ದು ಹೋದರೆ ಅಂತ. ಈಗ ನನಗೆ ಗೊತ್ತು ನಾಣ್ಯ ಮ್ಯಾಗನೇಟ್ ಆಗೋಲ್ಲ ಅಂತ. ಆದರೂ, ಜೇಬಲ್ಲಿ ಇದ್ದ ಒಂದು ರೂಪಾಯಿಯ ನಾಣ್ಯವನ್ನ ರೈಲಿನ ಹಳಿಯ ಮೇಲೆ ಇಟ್ಟು ಬಂದೆ. ರೈಲಿಗಾಗಿ ಕಾದೆ. ಸ್ವಲ್ಪ ಹೊತ್ತಾದ ಮೇಲೆ ರೈಲು ಹಳಿಯ ಮೇಲೆ ಸಾಗಿತು. ರೈಲು ಹೋದ ನಂತರ ಆ ನಾಣ್ಯಕ್ಕೆ ಹುಡುಕಿದೆ. ಸಿಗಲೇ ಇಲ್ಲ. ಎಷ್ಟೇ ಹುಡುಕಾಡಿದರೂ ಅದು ಸಿಗಲೇ ಇಲ್ಲ.
..................................................

ಮಾರ್ಗ ದರ್ಶನ


೧.

ಸೀರಯಂಗಡಿ ಮುಂದೆ ಇದ್ದ ಹೆಣ್ಣುಗೊಂಬೆಯನ್ನು ಹೊತ್ತೋದವನು
ರಾತ್ರಿಯಲ್ಲಿ ನಿರ್ಜನ ಮಧ್ಯರಸ್ತೆಯಲ್ಲಿ
ವಿಗ್ರಹದ ಪಕ್ಕದಲ್ಲಿ ಸೀರೆಯುಡಿಸತೊಡಗಿದ

ನನಗೆ ಗಾಬರಿಯಾಗಿದೆ

ಆತ ನಿಜದ ವ್ಯಕ್ತಿಯ? ಪ್ರೇತಾತ್ಮವ?
ಹುಚ್ಚನ?  ಙ್ಞಾನಿಯ?

ನಿನ್ನ ಮಾಂತ್ರಿಕ ತಂತ್ರ ವಿದ್ಯೆಗೆ
ನಾನೇ ಗಾಬರಿಗೊಂಡಿದ್ದೇನೆ
ಕಲಿಸಿದ್ದು ನಾನೇ ಇರಬೊಹುದು
ಉಪಸಂಹಾರಕ್ಕೆ ನೀನೇ ಬೇಕು

೨.

ವಿದ್ಯೆ ನನಗೆ ಅಸ್ಮಿತೆ ಹಾಗೂ ಅಹಂಕಾರ
ಅಚ್ಚರಿಗೊಳ್ಳುತ್ತೀರೆಂದು ಭಾವಿಸಿದ್ದೆ  
ಗಾಬರಿಗೊಂಡಿದ್ದರ ಮರ್ಮ ತಿಳಿಯುತ್ತಿಲ್ಲ.

ಕಪ್ಪು ಬೆಕ್ಕು ಮಾಂತ್ರಿಕ ವಿದ್ಯೆಯಲ್ಲಿ ಶ್ರೇಷ್ಠ ಬಲಿ 

ಮೊದಲು ಹುಡುಕಬೇಕು
ಕಪು ಬೆಕ್ಕು ಅಪರೂಪ

ಸಣ್ಣ ತಂತಿಯನ್ನಿಟ್ಟುಕೊಂಡು ತಣ್ಣಗಿನ ಹಾಲನ್ನಿಟ್ಟು
ಅದರ ಬರುವಿಕೆಯ ನಿರಂತರ ಧ್ಯಾನದಲ್ಲಿರಬೇಕು
ಬರುತ್ತೆ, ಬಂದೇ ಬರುತ್ತೆ, ಮೆಲ್ಲಗೆ
ಯಾರೂ ಇಲ್ಲವೆಂದು ಭಾವಿಸಿ
ಹಾಲು ಕುಡಿಯುತ್ತಿರುತ್ತೆ
ಅರ್ದ ಕುಡಿದಿದ್ದಾಗ ನೆಮ್ಮದಿಯಿಂದಿರುತ್ತೆ
ಆಗ ಎಳೆಯಬೇಕು ತಂತಿಯನ್ನ
ಚೀರುತ್ತೆ, ತೊಳಲಾಡುತ್ತೆ, ಒದ್ದಾಡುತ್ತೆ, ಪರಚಲು ಮೇಲೆ ಬರುತ್ತೆ
ಸೋತಾಗ ದೀನ ನೋಟದಿಂದ ನೋಡುತ್ತೆ  
ಆಗ ಮನಸು ಕರಗತೊಡಗುತ್ತೆ
ಇಲ್ಲಿಯವರೆಗೆ ಎಲ್ಲ ಸಾಮಾನ್ಯನೂ ಮಾಡಬಲ್ಲ
ಅಯ್ಯೋ ಪಾಪ ಬಿಟ್ಟುಬಿಡುವ ಅಂತ ಅನ್ನಿಸುತ್ತೆ
ಆಗ
ಬಿಗಿಹಿಡಿದು ತಂತಿಯನ್ನ ಎಳೆಯಬೇಕು
ಅದರ ಕಡೆಯ ಕ್ಷಣಗಳನ್ನ ನಿಬ್ಬೆರಗಾಗದೆ ನೋಡಬೇಕು
ಸಾಯುವ ಕ್ಷಣಗಳಲ್ಲಿ ಆ ಕಣ್ಣುಗಳಲ್ಲಿ ಭೀಕರ ಕಠೋರತೆ ಕಾಣುತ್ತೆ
ಅಲ್ಲಿದೆ ನೋಡಿ ಮಾಂತ್ರಿಕ ಶಕ್ತಿಯ ಮಹೋನ್ನತ ಸಾಕ್ಷಾತ್ಕಾರ

ನಿಮಗೆ ಉಪಸಂಹರಿಸಬೇಕು ಅಷ್ಟೆ

ಮೂರ್ತಿ ಸ್ಥಾಪನೆಯ ಕೀರ್ತಿಗೋ
ಭಂಜನೆಯ ಶ್ರೇಷ್ಠತೆಗೋ
ಕಲಿಸಿದ್ದು ನೀವೆ...

ಉಪಸಂಹರಿಸುತ್ತೇನೆ,
ಬರುತ್ತೀರ
ಹೊರಗೆ ಹೋಗುವ....

ಕವಿ:- ಸಾವಯವ ಶಿಲ್ಪವು ಅನಿಶ್ಚಿತ ನಿಯಮಗಳ ದಾಸತ್ವವನ್ನ ಪಡೆದು ಮರಳಲಿ.

......................

ನಿನ್ನ ಬಸುರಿನ ಹಾರೈಕೆ ದೊಡ್ಡದು ಕಣೇ
ನನ್ನನ್ನೇ ಹೊಟ್ಟೆಯೊಳಗಿಟ್ಟುಕೊಂಡು ಸಲಹತೀ
ನಾ ಒದ್ದರೂ ಖುಷಿಪಡ್ತೀಯ ಮಗೂನ ಆಟ ಅಂತ
ನನಗೆ ಪಾಪ ಪ್ರಜ್ಞೆ ಕಾಡುತ್ತೆ
ಎಂದಿಗೂ ನೀನು ನನ್ನ ಪ್ರೇಯಸಿ ಆಗಲಿಲ್ಲ ಆಗಲಾರೆ
ನನ್ನ ಅಮ್ಮ ಕಣೇ ನೀನು

.........................

ಶೌಚಕ್ಕೆ ಹೋದಾಗ ಕೈ-ಕಾಲು ತೊಳೆದು ಬರ್ತೇವೆ
ಮಲ ಒಳಗಿದ್ದಾಗ ನಾವೆ ಜೀರ್ಣಿಸಿಕೊಂಡದ್ದು
ಹೊರಗೆ ಬಂದರೆ ಗಲೀಜು ಅಸಹ್ಯ
ಒಂದಾ ಕೈ ಕಾಲು ತೊಳೆದು ಬರೋದನ್ನೇ ಬಿಡಬೇಕು
ಇಲ್ಲವಾ ಒಳಗಿದ್ದಾಗಲೂ ತೊಳೀಬೇಕು
ಶಬ್ದ ಹಾಗು ಮಲ ಎರೆಡೂ ಒಂದೇ ರೀತಿ
ಇಲ್ಲಿ ತೊಳೆದು ಅಲ್ಲಿ ಬಿಡ್ತೀನಿ ಅನ್ನೋನು ಕಿರುಚುತಾನೆ

.....................

ಒಮ್ಮೆ ಒಬ್ಬ ಒಂದು ಅನಾಥ ಮನೆಯೊಂದನ್ನು ಕಂಡು ಒಳಹೊಕ್ಕ
ಗೋಡೆಯ ಮೇಲೆಲ್ಲ ಅರ್ಥವಾಗದ ಮಗುವಿನ ಬರಹಗಳು
ಹಳದಿ ಬಣ್ಣ ತಿರುಗಿದ ಕಿರಾಣಿ ಅಂಗಡಿ ಲೆಕ್ಕದ ಪುಸ್ತಕ ಹಾಗು ದಿನಚರಿ
ಹರಿಸಿನ ಕುಂಕುಮ ಚೆಲ್ಲಿದ್ದ ಸಮಾಧಿ

ಏನನ್ನೋ ಕಂಡವನಂತೆ ತಿಳಿಸಿದಾಗ
ಪುರಾತತ್ವ ಇಲಾಖೆಯವರು ಆಕ್ರಮಿಸಿ
ಪ್ರವೇಶ ಶುಲ್ಕವನ್ನು ನಿಗದಿಗೊಳಿಸಿದ್ದಾರೆ

...........................

ಪ್ರಶ್ನೆ ಉತ್ತರ ಎಂಬೋದು ಸಂಭೋಗದಂತೆ
ಆತ್ಮ ಸಂತೃಪ್ತಿ ಅಥವಾ ಹುಟ್ಟು
ಮತ್ತೆ ಮತ್ತೆ ಬೇಕಾದಾಗ ಚಟ
ಪ್ರಭುದ್ಧ ಭಾಷೇಲಿ ಸಂಬಂಧ

ಹುಟ್ಟು ಸಂಭೋಗಾನ ಮೀರಿದ್ದು   
ತೇಟ್ ಪ್ರಶ್ನೆ ಉತ್ತರಗಳಂತೆ
ತಿರುಕನ ಮನೆಯ ಮುಂದೆ ತಿರುಕ
ತಿರುಬೋಕಿಯ ಸ್ವಗತ

...................

ನನಗೆ ತಿಳಿಯೋಲ್ಲ
ಯಾಕೆ ಜನಗಳು ದೆವ್ವಗಳನ್ನ ಕಂಡರೆ ಹೆದರುತ್ತಾರೆ ಅಂತ,
ದೆವ್ವಗಳು ಅಂದರೆ ಅತೃಪ್ತ ಆತ್ಮಗಳಂತೆ

ನಾನು ಒಂದು ಅತೃಪ್ತ ಆತ್ಮಕ್ಕೆ
ಕಾವಲುಗಾರನಾಗಿ ನಿಯಮಿಸಲ್ಪಟ್ಟಿದ್ದೇನೆ
ಒಂಟಿ ಕಾವಲುಗಾರನಾದುದರಿಂದ
ಬೇಸರ ಕಾಡದಿರಲೆಂದು/ಭಯಪಡಬಾರದೆಂದು
ಈ ಅತೃಪ್ತ್ ಆತ್ಮವು ತೃಪ್ತವಾಗುವ ಬಗೆಯನ್ನ ತಿಳಿಯಲಿಕ್ಕೆ
ನನ್ನ ಜೀವನವನ್ನ ಮೀಸಲಿರಿಸಿದ್ದೇನೆ.