ಕತೆ

                      
[ ಇಲ್ಲಿನ ಪಾತ್ರಗಳು ಹಾಗು ಸನ್ನಿವೇಶಗಳು ಕೇವಲ ಕಾಲ್ಪನಿಕ. ಯಾರನ್ನಾದರೂ, ಯಾವುದನ್ನಾದರೂ ಹೋಲುತ್ತಿದ್ದರೆ, ಅದಕ್ಕೆ ಈ "ಕತೆ" ಕಾರಣವಲ್ಲ ]

"ಅಜ್ಜಿ, ಕತೆ ಹೇಳಜ್ಜಿ..."
"ಯಾವ ಕತೇನೋ...?"
"ಯಾವುದೋ ಒಂದು ಕತೆ ಹೇಳಜ್ಜಿ"
"ಒಂದಾನೊಂದು ಕಾಲದಲ್ಲಿ, ಆ ಒಂದು ಊರಲ್ಲಿ...........................................................................................

-------------------೦----------------------೦-------------------------
ದಾಸಯ್ಯ ಅದೇ ಕಂಬಾಲರಾಯನ ಗುಡ್ಡದ ಮೇಲೆ ಕೂತಿದ್ದ.  ಅದೇ ಸ್ಥಿತೀಲಿ, ಯಾವಾಗಲೂ ಕೂತಂತೆ, ಯಾವಗಲೂ ನಿಂತಂತೆ ಹಾಗೇ ಇದ್ದ. ವಯಸ್ಸಾಗಿತ್ತು. ಕಾಲ ಚಲಿಸಿತ್ತು. ಅದರ ಗುರುತು ದೇಹದಲ್ಲಿ ಕಾಣುತ್ತಿತ್ತು. ಏನೇ ಬದಲಾದರೂ ದಾಸಯ್ಯ ಮಾತ್ರ ಹಾಗೇ ಕೂತಿದ್ದ. ಕಂಬಾಲರಾಯನ ಗುಡ್ಡ ಹಾಗೇ ಇತ್ತು, ಕಂಬಾಲರಾಯನೂ ಹಾಗೇ ಇದ್ದ. ನಾನು ಹುಡುಕಿ ಹೊರಟಿದ್ದೆ. ದಾಸಯ್ಯನ್ನ ಕಾಣಬೇಕಿತ್ತು. ಕತೆ ಬೇಕಿತ್ತು ನಂಗೆ.
ಕಂಬಾಲರಾಯನ ಗುಡ್ಡದ ಹತ್ತಿರಕ್ಕೆ ಬರುತ್ತಾ ಇದ್ದಾಂಗೆ ಅಲ್ಲೆ ಇದ್ದ ಗುಹೆ ಕಾಣಿಸ್ತು. ಇದೇ ಗುಹೇನ ತೋರಿಸಿ ಅಜ್ಜಿ ಕತೆ ಹೇಳ್ತಿದ್ಲು. ಈ ಗುಹೇಲಿ ಒಬ್ಬ ದೊಡ್ಡ ರಾಕ್ಷಸ ಇದ್ದಾನೆ. ಆ ರಾಕ್ಷಸ ನಮ್ಮನ್ನೆಲ್ಲಾ ತಿಂದಾಕ್ತಾನೆ. ಯಾವುದಕ್ಕೇ ಹಟ ಮಾಡಿದ್ರೂನು ಮನೇಲಿ ತೋರಿಸ್ತಾ ಇದ್ದದ್ದು ಈ ಗುಹೆ ಹಾಗು ಅದರೊಳಗಿರೋ ರಾಕ್ಷಸ. ಎಷ್ಟು ಕಲ್ಪನೆಗಳನ್ನ ಕಟ್ಕೊಂಡಿದ್ದೆ!!! ಈ ಗುಹೇನ ನೋಡಿದಾಗ, ಇದರ ಮುಂದೆ ನಿಂತಾಗ, ಅಜ್ಜಿ ಹೇಳಿದ ಕತೆಯ ನಾಯಕ ನಾನೇ ಆಗಿ ಹೋಗಿ, ಆ ಕ್ಷಣದಲ್ಲಿ ಕೈಯಲ್ಲೊಂದು ಕತ್ತಿ. -ಅದೂ ಆ ಕತ್ತೀನ ಒಬ್ಬ ದೇವತೆ ಕೊಟ್ಟಿರ್ತಾಳೆ. ಆ ಕತ್ತೀನ ಹಿಡಿದು ಗುಹೆ ಒಳಗೆ ಹೋಗಿ ಅಲ್ಲಿರೋ ರಾಕ್ಷಸನ ಹತ್ರ ಹೊಡದಾಡಿ -ಆ ಮಾಟ ಮಂತ್ರ ಎಲ್ಲಾ ಮಾಡಿ- ಅವನನ್ನ ಕೊಂದು, ಅಬ್ಬ ಆಗ ಆ ಗುಹೆ ಅರಮನೆಯಾಗಿಹೋಗೋದು. ಅಲ್ಲಿನ ರಾಜ ನಾನೆ. ಅಲ್ಲೊಬ್ಬ ರಾಜಕುಮಾರಿ ಸುರ ಸುಂದರಾಂಗಿ. ಅಬ್ಬ ಕನಸೆ!! ಅಬ್ಬ ಕಲ್ಪನೆಯೆ! ಈಗಲೂ ಇದರ ಮುಂದೆ ನಿಂತಾಗ ಮತ್ತೆ ಮತ್ತೆ ನೆನಪಾಗುತ್ತೆ, ಒಳಗೆ ರಾಜಕುಮಾರಿ ಇದ್ದಾಳೆ, ಸುರಸುಂದರಾಂಗಿ ದೇವಕನ್ಯೆ, ರಾಕ್ಷಸ ಹಿಡಿದಿಟ್ಟಿದ್ದಾನೆ. ನಾನು ಹೋಗಬೇಕು, ಹೋಗಿ ರಾಕ್ಷಸನ್ನ ಕೊಂದು ರಾಣಿಯನ್ನ ಕಾಪಾಡಬೇಕು. ಆದರೆ, ರಾಕ್ಷಸನ ಪ್ರಾಣ ಇನ್ನೆಲ್ಲಿಯೋ ಇದೆಯಂತೆ, ಅದನ್ನ ತಿಳಿಬೇಕೆಂದರೆ ಅಲ್ಲಿರೋ ಒಂಟಿ ಕಣ್ಣಿನ ಅಜ್ಜಿ ಕೇಳೋ ಪ್ರಶ್ನೇನ ಉತ್ತರಿಸಬೇಕು. ರಾಕ್ಷಸನ ಪ್ರಾಣದ ರಹಸ್ಯಾನ ತಿಳಿದು ರಾಕ್ಷಸನ್ನ ಕೊಂದರೆ ಆಗ ರಾಜಕುಮಾರಿ ನನ್ನವಳು. ಆಗ ನಾನೇ ರಾಜ. ಅದೆಂತಹ ಕತೆಗಳು. ಒಮ್ಮೆಯೂ ನಾನು ಯಾವ ಕತೆಯ ನಾಯಕನೂ ಆಗಲಿಲ್ಲ, ಪ್ರತಿ ನಾಯಕ, ರಾಕ್ಷಸ, ವೇಷತೊಡುತ್ತೀನೆಂದರೂ ನಾಯಕಿಯಾಗಲಿಲ್ಲ. ಬೇಸತ್ತು ಯಾವುದೋ ಒಂದು ಪಾತ್ರವನ್ನಾದರೂ ಕೊಡಿ ಅಂದರೆ ಕತಯಲ್ಲಿ ನಿನ್ನ ಪಾತ್ರವೇ ಇಲ್ಲ ಅಂದು ಬಿಡೋದೆ...!
ಪಾತ್ರವನ್ನ ನಿರಾಕರಿಸಲಿಕ್ಕೆ ನೀ ಯಾರಯ್ಯ? ನೀ ಬರೆದದ್ದ ಕತೆ? ಯಾರೂ ಯಾವ ಕತೇನೂ ಬರೀಲಿಕ್ಕೆ ಸಾದ್ಯವಿಲ್ಲ. ಕತೆ ಹುಟ್ಟಬೇಕು ಅಂದರೆ ಅದು ಜರುಗಬೇಕು. ಅದಕ್ಕೇ ಜಿದ್ದಿಗೆ ಬಿದ್ದಿದ್ದೇನೆ. ಈ ಕತೆಯ ನಾಯಕ ನಾನೇ ಆಗಬೆಕು. ಪ್ರತಿನಾಯಕನೂ ನಾನೆ. ಸಹ ನಾಯಕ, ಅದೂ ನಾನೆ. ಬಣ್ಣ ತೊಟ್ಟಾದರೂ ಸರಿ ನಾಯಕಿಯೂ ನಾನೆ. ಪಾತ್ರವನ್ನೇ ನಿರಾಕರಿಸಿದ ಕತೆಯನ್ನೇ ಕತೆಯಾಗಿಸಿ ಪ್ರತೀ ಪಾತ್ರವೂ ನಾನೇ ಆಗಬೇಕು. ಅದಕ್ಕೇ ಕತೆ ಬೇಕು. ಅದಕ್ಕೇ ದಾಸಯ್ಯನ್ನ ಹುಡುಕಿ ಬಂದೆ.
" ದಾಸಯ್ಯ ಹೆಂಗಿದಿ?"
"ನಾ ಚೆನ್ನಾಗಿದ್ದೀನ್ ಮಗ, ಏನ್ ಹೀಗೆ ಬಂದೆ?"
"ಕತೆ ಬೇಕಿತ್ತು ದಾಸಯ್ಯ, ಕತೆ"
"ಎಲ್ಲಾ ಬಿಟ್ಟ ಪುಟಗೋಸಿ ದಾಸಯ್ಯ ಕಣೋ ನಾನು. ಮನೆ ಇಲ್ಲ, ಮಠ ಇಲ್ಲ, ಹೆಂಡ್ತಿ ಇಲ್ಲ, ಮಕ್ಳಿಲ್ಲ, ಅಪ್ಪ ಗೊತ್ತಿಲ್ಲ, ಅಮ್ಮನ್ನ ನೋಡಿದ ನೆನಪು ಉಳಿದಿಲ್ಲ. ನಾನ್ ಏನ್ ಕತೆ ಹೇಳ್ಳೋ ನಿಂಗೆ? ಅದೂ ನಿಂಗೆ ಬೇಕಿರೋ ಕತೇಲಿ ನೀನೆ ನಾಯಕನೂ ಆಗ್ಬೇಕು, ನಾಯಕೀನೂ ನೀನೆ ಆಗ್ಬೇಕು, ಎಲ್ಲಾನೂ ನೀನೆ ಆಗೊ ಚಟ ನಿಂಗೆ. ಆ ಕತೆಗೆ ಒಂದು ಬಂಧ ಬೇಕು, ಒಂದು ಭಾವ ಬೇಕು, ಬೆಸೆಯೋಕೆ ಅಂತ ಒಂದು ಸಂಬಂಧ ಬೇಕು. ನಡೆಯೋಕೆ ಒಂದು ದೇಶ ಅದಕ್ಕೆ ತಕ್ಕಂಗೆ ಒಂದು ಕಾಲ. ಎಲ್ಲಿಂದ ತರ್ಲೋ ಇವನ್ನೆಲ್ಲ!! ಆಗ್ಲೋ ಈಗ್ಲೋ ಅಂತಿರೋ ಈ ಮುದಿ ದಾಸಯ್ಯ ಏನೋ ಕತೆ ಹೇಳ್ತಾನೆ"
"ನಂಗೊತ್ತಿಲ್ಲ ದಾಸಯ್ಯ, ನಂಗೊಂದು ಕತೆ ಬೇಕು. ಕತೆಯಿಲ್ಲದೆ ನಂಗೆ ಏನು ಮಾಡೋದು ಅಂತ ಗೊತ್ತಾಗ್ತಿಲ್ಲ. "ಹುಟ್ಟಿದ್ಯಾಕೋ?" ಅಂತ ಕೇಳಿದ್ರೆ ಏನ್ ಹೇಳೋದು ಅಂತಾನೆ ತಿಳಿತಿಲ್ಲ ದಾಸಯ್ಯ. ಎಲ್ಲಿ ಸತ್ತೋಗ್ತೀನೋ ಅಂತ ಭಯ ಆಗ್ತಿದೆ. ಅದಕ್ಕೆ ಒಂದು ಕತೆ ಹೇಳು. ಎಲ್ಲಾ ಪಾತ್ರಾನು ನಾನೆ ಆಗಿಸಿ ಒಂದು ಕತೆ ಕಟ್ಟು"
"ಸರಿ, ನಿಂದೊಂದು  ಋಣ ನನ್ನಲ್ಲಿ ಉಳಿದೋಗಿದೆ. ಅದಕ್ಕೆ ಕತೆ ಹೇಳ್ತೀನಿ. ಅಲ್ಲ ಅಲ್ಲ ನಿಜಾನೆ ಹೇಳ್ತೀನಿ. ನೀ ಚಿಕ್ಕೋನಿದ್ದಾಗ ನಂಗೆ ಒಂದು ನವಿಲುಗರಿ ಕೊಟ್ಟು ಅದು ಮರಿ ಹಾಕುತ್ತೆ ಆ ಮರೀನ ನಂಗೆ ಕೊಡ್ಬೇಕು ಅಂತ ಹೇಳೀದ್ಯಲ್ಲ?"
"ಹೋ ಅದ! ಆಗ ಚಿಕ್ಕ ವಯಸ್ಸು, ನವಿಲು ಗರಿ ಮರಿ ಹಾಕುತ್ತೆ ಅಂತ ಅಂದ್ರೆ ನಂಬಿದ್ದೆ. ಅದಕ್ಕೆ ನಿಂಗೆ ಕೊಟ್ಟೆ. "
"ಹೌದು ಮಗ, ಅಲ್ನೋಡು, ಅಲ್ಲಿ ರೆಕ್ಕೆ ಬಿಚ್ಚಿ ಆಡ್ತಾ ಇರೋ ನವಿಲು ಇದ್ಯೆಲ್ಲ. ಅದು ನಿಂದೆ. ತಗೊಂಡೋಗು"
"ಅಯ್ಯೋ ದಾಸಯ್ಯ. ನಿನ್ನ ಕತೆ ಹೇಳು ಅಂತ ಅಂದೆ. ನಡೆಯೋ ಕತೇನ ಹೇಳು ಅಂತ ಅಂದದ್ದು. ನಾನೆ ಎಲ್ಲಾ ಪಾತ್ರವೂ ಆಗೋ ಕತೇನ ಹೇಳು ಅಂತ ಅಂದದ್ದು. ನವಿಲು ಗರಿ ಎಲ್ಲಾದ್ರೂ ಮರಿ ಹಾಕುತ್ತ? ನಾನೀಗ ದೊಡ್ಡೋನು ದಾಸಯ್ಯ. ಕತೆ ಯಾವುದು, ನಿಜ ಯಾವುದು ಅನ್ನೋದು ನಂಗೆ ಗೊತ್ತು."
"ನಾನು ಹೇಳೋದು ಸತ್ಯ. ನೀ ಕೊಟ್ಟ ನವಿಲು ಗರೀನ ಏನ್ ಮಾಡೋದು ಅಂತ ತಿಳೀದೆ ಜೊತೇಗೇ ಇಟ್ಕೊಂಡಿದ್ದೆ. ಅದರ ಜೊತೆಗೇನೆ ಮಾತಾಡೋದೂ, ಅದರ ಜೊತೆಗೇನೆ ಮಲಗೋದೂ, ಓಡಾಟ, ಊಟ, ಎಲ್ಲವೂ. ಎಲ್ಲೇ ಹೋದರೂನೂ ಅದು ನನ್ನೊಟ್ಟಿಗಿರುತ್ತಿತ್ತು. ಅದು ಮರೀನೇ ಹಾಕಲಿಲ್ಲ. ಯಾರು ಯಾರನ್ನೋ ಕೇಳಿ ನೋಡಿದೆ; ಯಾರೂ ಹೇಳಲಿಲ್ಲ ನವಿಲು ಗರಿಯಿಂದ ನವಿಲು ಹಾಕೋ ವಿಧಾನಾನ. ಆದರೆ ಒಂದು ದಿನ ನವಿಲುಗರಿ ಮೊಟ್ಟೆ ಇಟ್ಟಿತ್ತು. ಇಡೀ ನವಿಲು ಗರಿ ಮೊಟ್ಟೆಯಾಗಿಹೋಗಿತ್ತು. ಆ ಮೊಟ್ಟೆ ಬೆಳೆಯುತ್ತಿತ್ತು. ಅದಕ್ಕೆ ಕಾವನ್ನ ಕೊಟ್ಟೆ. ನಾನೇ ಕೊಟ್ಟೆ. ಒಂದು ದಿನ ನವಿಲು ಮರಿ ಹೊರಗೆ ಬಂತು. ಅದಕ್ಕೆ ಹಾರೋಕೆ ಬರ್ತಾ ಇರಲಿಲ್ಲ, ನಾನು ಹಾರಿ ತೋರಿಸ್ದೆ, ಹಾರೋದು ಕಲೀತು. ಕುಣಿಯೋಕೆ ಬರ್ತಾ ಇರಲಿಲ್ಲ ಕುಣಿದು ತೋರಿಸ್ದೆ ಈಗ ನೋಡು  ಅದೇಗೆ ಕುಣಿತಿದೆ ಅಂತ. ನೀನೇ ಕೊಟ್ಟ ನವಿಲು ಗರಿಯಿಂದ ಹುಟ್ಟಿದ ನವಿಲು. ಅಲ್ಲೋಡು ಕುಣಿತಿದೆ. ಇದನ್ನೇ ಕತೆ ಅಂದ್ಕೊ. ನವಿಲು ಗರಿಯಿಂದ ನವಿಲು ಹುಟ್ಟಿದ್ದನ್ನ ಕತೆಯಾಗಿಸ್ಕೊ. ಆ ಗರೀನೂ ನೀನೆ ಆಗು, ಆ ಮೊಟ್ಟೆಯೂ ನೀನೆ ಆಗು, ಆ ನವಿಲೂ ನೀನೆ ಆಗು. ಅವಶ್ಯ ಬಿದ್ರೆ ಈ ದಾಸಯ್ಯನೂ ನೀನೆ ಆಗು. ಕಡೆಗೆ ಗರಿಯಿಂದ ಮರಿಯಾದ ಬಗೆಯೂ ನೀನೆ ಆಗಿಬಿಡು. ಆಗ ಕತೆ ಕಟಿದ್ದಾಂಗೆ ಆಗುತ್ತೆ."
"ದಾಸಯ್ಯ ನೀ ಹೇಳ್ತಿರೋದು ಕತೆ. ಸತ್ಯವನ್ನ ಕತೆಯಾಗಿಸಬೊಹುದು ಆದರೆ ಕತೆಯನ್ನ ಸತ್ಯವನ್ನಾಗಿಸೋಕ್ಕೆ ಆಗೋಲ್ಲ. ನೀನು ಹೇಳ್ತಿರೋದು ಕತೆ. ನಾನು ನಿನಗೆ ನವಿಲುಗರಿ ಕೊಟ್ಟಿದ್ದು ಸತ್ಯ, ಆದರೆ ನವಿಲು ಗರಿಯಿಂದ ಮರಿಯಾದದ್ದು ಕಲ್ಪನೆ ಅಥವಾ ಅದೇ ಕತೆ. ಕತೆ ಎಂಬೋದು ಶುದ್ಧ ಸುಳ್ಳು, ಭ್ರಮೆ ಅಥವಾ ನಾವೇ ನಿರ್ಮಿಸಿಕೊಂಡೆ ಕಲ್ಪನೆ."
" ಹ... ಹ..."
"ನೀ ನಗಬೇಡ.."
"ಕತೇಲಿ ಅಳು ಇದೆ, ನಗು ಇದೆ. ಕತೇಲಿ ಅಳೋದು ನಗೋದು, ನೀನ ?  ನಿನ್ನ ಪಾತ್ರವ?"
" ನಾನೂ ಅಲ್ಲ ನನ್ನ ಪಾತ್ರವೂ ಅಲ್ಲ. ಅದು ನನ್ನಲ್ಲಿ ರೂಪುಗೊಂಡ ಕಲ್ಪನೆ"
"ನಾ ಹೇಳೋದು ಸತ್ಯ. ನಾನು ನನ್ನ ಕಣ್ಣಾರೆ ಕಂಡಿದ್ದೀನಿ. ನೀ ಕೊಟ್ಟ ನವಿಲುಗರಿ ಮೊದಲು ಮೊಟ್ಟೆ ಆಯ್ತು, ಆಮೇಲೆ ಆ ಮೊಟ್ಟೆ ಒಡೆದು ಮರಿ ಆಯ್ತು. ಆ ಮರಿಯೇ ಅಲ್ಲಿ ಕುಣೀತಿದೆ ನೋಡು. ನಿನ್ನ ಕತೆಯ, ನನ್ನ ಸತ್ಯದ, ಜೊತೆಗೆ ಹುಟ್ಟಿದ ಆ ನವಿಲನ್ನ ನೀನೆ ತೆಗೆದುಕೊಂಡು ಹೋಗು."
"ಅದು ಮಾತ್ರ ಸಾದ್ಯ ಇಲ್ಲ . ನಂದು ಕತೇಲೆ ಪಾತ್ರ ಮಾತ್ರ. ನೀ ತೋರಿಸೋ ನವಿಲು ನಿಜವಾದದ್ದು. ಕತೇಲಿ ಎತ್ತುಕೊಂಡು ಹೋಗ್ತೇನೆ, ರಾಜಕುಮಾರನ ತರ-ಆದರೆ ನಿಜದಲ್ಲಿ ನಿನ್ನ ಹತ್ತಿರಾನೆ ಬಿಟ್ಟು ಹೋಗ್ತೇನೆ. ನಂಗೆ ನಿಜದಲ್ಲಿ ಬದುಕೋ ತಾಕತ್ತಿಲ್ಲ."
" ಸರೀ ಹಾಗಾದ್ರೆ. ನವಿಲನ್ನ ಇಲ್ಲೆ ಬಿಡು. ನಿಂಗೆ ಬೇಕಿರೋದು ಕತೆ ತಾನೆ. ನೋಡು ಅಲ್ಲಿ  ಆ ನವಿಲು ಒಂದು ಕತೇನೆ ಹುಟ್ಟಿಸಿದೆ. ಆ ಕತೇನ ಕರೆದುಕೊಂಡು ಹೋಗು. ಅದನ್ನ ಒಲಿಸಿ, ಆಲಿಸು. ಆಗ ಆ ಕತೆ ನಿಂಗೆ ಒಲಿಯುತ್ತೆ, ನಿಂಗೆ ಕತೆ ಕಟ್ಟುತ್ತೆ."
"ಹೇ ... ಕತೆ... ಬಾ ನಂಜೊತೆ...."

----------------------೦-----------------------೦-----------------------------------
"ಕತೆ, ನಾ ನಿನ್ನನ್ನ ಮುದ್ದಿಸ್ತೀನಿ. ಪ್ರೀತಿಸ್ತೀನಿ. ಆಡಿಸ್ತೀನಿ. ನೀ ಹೇಳ್ದಂಗೆ ಕೇಳ್ತೀನಿ. ನಂಗೊಂದು ಕತೆ ಕಟ್ಟು. ನೋಡು, ಆ ಕತೇಲಿ ನನ್ನನ್ನ ಒಂದು ಪಾತ್ರವನ್ನಾದರೂ ಮಾಡಿಸು. ನಿಂಗೆ ಬೇಕಾದದ್ದನ್ನ ನಾನು ಕೊಡ್ತೇನೆ. ನೀ ಹೇಳ್ದಂಗೆ ಕೇಳ್ತೇನೆ."
"ಅಯ್ಯಾ, ನನ್ನುಟ್ಟು ಯಾವ ಅದ್ಯಾವ ಋಣಾನೋ ಏನೋ ನಂಗೊತ್ತಿಲ್ಲ. ಅದ್ಯಾವ ಕಾರ್ಯ ಕಾರಣದ ಸಂಬಂಧವಾಗಿ ನಾ ಬಂದೆನೋ ಏನೋ? ಅದೇಗೆ ನಿನ್ನ ಹತ್ತಿರ ಬಂದೆನೊ ಗೊತ್ತಿಲ್ಲ. ಗೊತ್ತಿಲ್ಲ ಏನೂ ನನಗೆ. ಮೊದಲು ಕಂಡಾತ ಹೇಳಿದ ನನ್ನ ಹುಟ್ಟಿಗೆ ನೀನೆ ಕಾರಣವಂತೆ. ನನ್ನ ಹುಟ್ಟಿಸಿದಾತ ನೀನಂತೆ. ಮೊದಲು, ನೀನು ನನ್ನ ಯಾಕೆ ಹುಟ್ಟಿಸಿದಿ ಅಂತ ಹೇಳು. ಆಗ ನಾನು ನಿಂಗೆ ಕತೆ ಹೇಳ್ತೀನಿ."
" ಅಯ್ಯಾ ಕತೆ, ಆ ದಾಸಯ್ಯನ ಮಾತನ್ನ ನಂಬಬೇಡ ಕೂಸೆ. ನಾನು ನಿನ್ನನ್ನ ಹುಟ್ಟಿಸಲೇ ಇಲ್ಲ. ಅದು ಶುದ್ಧ್ ಸುಳ್ಳು. ನಿಂಗೊತ್ತ ನವಿಲು ಗರಿಯಿಂದ ಹುಟ್ಟಿದ ನವಿಲಿಂದ ಹುಟ್ಟಿದ್ದಂತೆ ನೀನು! ಅದೇಗೆ ನಂಬುತ್ತೀಯ ಅದನ್ನ. ಆದ್ದರಿಂದ ನಾನು ನಿನ್ನನ್ನ ಹುಟ್ಟಿಸಿದಾತನಾಗಿರಲಿಕ್ಕಿಲ್ಲ ನೋಡು."
"ಅಯ್ಯಾ, ಕತೆಯಲ್ಲಿ ನಿಜವಿಲ್ಲ ಹಾಗೇ ಸುಳ್ಳೂ ಇಲ್ಲ. ನನ್ನ ಹುಟ್ಟು ನಿಜವಲ್ಲವೆಂದಾಗ ಅದು ಸುಳ್ಳೂ ಆಗಿರಲಿಕ್ಕಿಲ್ಲ. ಹೇಳು, ನೀ ಹೇಳದೆ ನಾ ಬದುಕೋಲ್ಲ."
" ಮಗು ಕತೆಯೆ, ನಿನ್ನ ಹುಟ್ಟಿಸಿದ್ದು ನೀ ಕತೆ ಹೇಳಲಿಕ್ಕೆಂದು. ಕತೆಯಿಲ್ಲದೆ ನಾ ಬದುಕಲಿಕ್ಕೆ ಆಗೋಲ್ಲ. ನನ್ನ ಜೀವವನ್ನ ಯಾವುದೋ ಕತೆಯಲ್ಲಿ ಬಂದಿಸಿಟ್ಟುಬಿಟ್ಟಿದ್ದಾರೆ. ಆ ಕತೆಯನ್ನ ನಾ ಹುಡುಕಬೇಕು. ಹುಡುಕಿ ಅಲ್ಲಿರೋ ಜೀವವನ್ನ ಕಾಣಬೇಕಿದೆ. ನೀ ಹೇಳೋ ಕತೇಲಿನ ಪಾತ್ರವು ನಾನಾಗಬೇಕು. ಅದಕ್ಕೆ ನಿನ್ನನ್ನ ಹುಟ್ಟಿಸಿದೆ. ಈಗ ಹೇಳು ಕತೆಯ."
"ಅಯ್ಯಾ, ನಿನಗೆ ಕತೆ ಹೇಳಲಿಕ್ಕೆ, ಆ ಕತೆಯಲ್ಲಿನ ಪಾತ್ರವೊಂದು ನೀನಾಗಲಿಕ್ಕೆ ನನ್ನನ್ನು ಹುಟ್ಟಿಸಿದ್ಯ? ಅದು ಸ್ವಾರ್ಥ ಅಲ್ಲವ?"
"ಸತ್ಯ-ಅಸತ್ಯಗಳೆರೆಡೂ ಇಲ್ಲದ ಕತೇಲಿ, ಸ್ವಾರ್ಥ-ನಿಸ್ವಾರ್ಥಗಳೆಂಬೋ ಪದಗಳಿಗೂ ಜಾಗವಿಲ್ಲ. ಕತೆಯಲ್ಲಿ ಪ್ರಶ್ನೆಗಳಾಗಲಿ ಉತ್ತರಗಳಾಗಲಿ ಇರೋಲ್ಲ. ಈಗ ಪ್ರಶ್ನೆಗಳು ಬೇಡ, ಕತೆ ಬೇಕು...."
" ಅಪ್ಪಣೆ.....
ಒಂದಾನೊಂದು ಕಾಲವಲ್ಲ, ಇದೇ ಕಾಲ. ಒಂದಾನೊಂದು ಊರಲ್ಲ, ಇದೇ ಊರು....... ಅಲ್ಲೊಬ್ಬ.......... ಅವರು...........................................