ಮಹಾನವಮಿ


ಮಹಾನವಮಿ-
"ಅಸ್ಮಿತೆ ಹಾಗೂ ಸ್ವಾತಂತ್ರ್ಯಗಳ ನಡುವಿನ ಜೀವಿತ ಪ್ರಜ್ಞೆ"
ಅಂತ
ಒಂದು ಕವನ ಬರ್ದೆ.

ಮೊದಲಲ್ಲಿ,
ಪ್ರಶ್ನೆ-ಉತ್ತರ-ಅದರ ನೋವೂ ಸಂಕಟ
ಸತ್ಯ-ಮಿಥ್ಯ-ಅದರೊಂದಿಗಿಷ್ಟು ಪರಮ ಸತ್ಯ,
ಜೊತೆಗಿರ್ಲಿ ಅಂತ
ಕೆಂಡದಲ್ಲಿ ಸುಟ್ಟ ಮನುಷ್ಯ
ಅವ್ನ ಬೂದೀಲಿ ಅರಳಿದ ಹೂವಿಗೊಂದು ದುಂಭಿ
ದುಂಭಿಗಾಗಿ ಮನುಷ್ಯನ ಸರ್ವ ತಂತ್ರ ಪ್ರಯತ್ನ.
(ಅದೇ ಮನುಷ್ಯಾನ ಅಥವಾ ಬೇರೆ ಯಾರಾದರೂ ಆಗಿರ್ಬೋದಾ...?)

ಕವಿತೇನ ಮುಂದುವರಿಸ್ಲೇ ಬೇಕು,
"ಹುಡುಗಿಯ ಮಾತೆತ್ತದ ಕವಿತೇನ ಬರೆಸಿಬಿಡು"
ಅಂತ ಕೇಳ್ಕೊಳ್ತಾ
ತಾಯಿ ಮತ್ತೆ ಹುಡುಗಿ, ಒಂದಿಷ್ಟು ಹಾಲು
ಅಂತ ಏನೇನೋ ಬರ್ದು
ಕಡೆಗೆ ಬರ್ದೆ ನೋಡೀ
"ಬರೆಸಿಬಿಡು,
ನಾ ಎಡವಿ ಬಿದ್ದ ತೆಲೆ ಬುರುಡೆಯ ಹಣೆ ಬರಹವನ್ನ
ಒಂದು ಕವಿತೆಯಾಗಿ"

ಕವಿತೇನೂ ಮುಗಿಸ್ಬೇಕು.
"ಸತ್ತ ಹಲ್ಲೀನ ಆಯ್ಕೊಂಡು ತಿಂತಿದ್ದ ಮನುಷ್ಯ
ಮುಟ್ಟು ನಿಂತ ಸೂಳೆ ಮನೇಗೋಗಿ
ಆತ್ಮಹತ್ಯೆ ಮಾಡ್ಕೊಂಡ"

ಕಡೇ ಸಾಲಲ್ಲಿ ನಮ್ಮೂರ ದಾಸಯ್ಯ ಹೇಳ್ದ
"ಮೀರ್ಬೇಕು ಅಂತಂದ್ಕೊಂಡವ
ಅನ್ಬವಾನೇ ಮೀರ್ಬಿಡ್ಬೇಕು ಕಣಾ"
ಅಂತೇಳಿ
ಮುಗಿಸಿಬಿಟ್ಟೆ.

ನಿಜಕ್ಕೂ ಒಂದು ಕವನಾನ ಮುಗಿಸ್ಲಿಕ್ಕೆ ಆಗುತ್ತಾ ಅನ್ನೋದೂ ನಂಗೆ ತಿಳೀತಿಲ್ಲ
ಆದ್ರೂ
ನಾನೂ ಈ ಕವನಾನ ಮುಗಿಸ್ತಾ ಇದ್ದೀನಿ....


ಕಥೆ ಸಂಖ್ಯೆ ೨

{ಆತ್ಮೀಯರೆ,
ಕಥೆ ಸಂಖ್ಯೆ ೨ ರಲ್ಲಿ, ಕಥೆ ಸಂಖ್ಯೆ ೧(ಕಥೆ ಸಂಖ್ಯೆ ೧) ರ ಹಲವು ಪಾತ್ರಗಳು, ಹಾಗು ಸನ್ನಿವೇಶಗಳ ಉಲ್ಲೇಖವಾಗುವುದರಿಂದ, ಕಥೆ ಸಂಖ್ಯೆ ೨ ರ ಓದಿಗೆ ಕಥೆ ಸಂಖ್ಯೆ ೧ ಅವಶ್ಯ. ಆದ್ದರಿಂದ, ಮೊದಲು ಕಥೆ ಸಂಖ್ಯೆ ೧ ನ್ನ ಓದಿ, ನಂತರ ಕಥೆ ಸಂಖ್ಯೆ ೨ನ್ನ ಓದಿ..... }



ತುಂಬಾ ದಿನಗಳಿಂದ ಕತೆ ಬರೀಬೇಕು ಅಂತ ಅಂದ್ಕೊಳ್ಳೋದು, ಬರೀತ ಕೂರೋದು, ಆದ್ರೆ ಅದೇನಾಗುತ್ತೋ ಏನೋ, ಬರ್ದಿದ್ದಾದಮೇಲೆ ಸರೀ ಇಲ್ಲ ಅಂತ ಹೇಳಿ ಹರಿದು ಹಾಕೋದು. ಹೀಗೇ ನಡೀತಾ ಇತ್ತು. ಆದರೆ, ಯಾಕೋ ಕತೇ ಬರೀಬೇಕು ಅನ್ನೋ ಜಿದ್ದು ಮಾತ್ರ ಹೋಗಲೇ ಇಲ್ಲ. ಹೇಗಾದ್ರೂ ಬರೀಲೇ ಬೇಕು ಅನ್ನೋ ಹಸಿವು ಕಾಡ್ತಾ ಇತ್ತು. ಹೀಗೆ ಕತೆ ಬರೀಬೇಕು ಅಂತ ಅಂದ್ಕೊಂಡು ಕೂತಾಗ, ಕತೆ ನಿಜ್ವಾಗಿ ನಡೆದಿರಬೇಕ? ಅಥವಾ ಅದು ಕಲ್ಪನೆ ಮಾತ್ರವಾಗಿದ್ರೆ ಸಾಕಾ? ಅಥವಾ ಕಲ್ಪನೆ ಹಾಗೂ ಸತ್ಯಾ ಎರೆಡೂ ಬೆರೆತಿರಬೇಕ? ಅನ್ನೋ ಪ್ರಶ್ನೆಗಳು ಕಾಡಿದ್ರೂನೂ, ನಾನೇನೂ ಹೆಚ್ಚಿಗೆ ತಲೆ ಕೆಡಿಸ್ಕೊಳ್ಳಲಿಲ್ಲ. ನಾನೇನೂ ಈ ಸಾಹಿತ್ಯ ಮೀಮಾಂಸೆ, ವಿಮರ್ಷೆ ಹಾಳೂ- ಮೂಳೂ ಓದಿದವ್ನಂತೂ ಅಲ್ಲವೇ ಅಲ್ಲ. ಆದ್ರಿಂದ ಅದ್ರ ಬಗ್ಗೆ ಎಲ್ಲಾ ಹೆಚ್ಚಿನ ತಲೆ ಕೆಡಿಸ್ಕೊಳ್ಳೋಕೆ ಹೋಗಲೇ ಇಲ್ಲ.
ಕಥೆ ಸಂಖ್ಯೆ ೧ ನ್ನ ಬರೆದಾಗ, ಅದಕ್ಕೆ ಏನು ಹೆಸರಿಡಬೇಕು ಅಂತ ತಿಳೀಲೇ ಇಲ್ಲ. ಇನ್ನೂ ಮುಖ್ಯವಾಗಿ ಹೇಳೋದಾದರೆ ನಂಗೆ ಹೆಸರಿನಲ್ಲಿ ನಂಬಿಕೆ ಇಲ್ಲ. ಯಾಕೆ ಹೆಸರು ಬೇಕು ಅಂತ.? ಆದರೂ ಮುಂದೆ ಏನಕ್ಕಾದರೂ ಗುರುತಿಸಬೇಕು ಅಂತನ್ನಿಸಿದರೆ ಇರಲಿ ಅಂತ ಕತೆ ಸಂಖ್ಯೆ ೧ ಅಂತ ಹೆಸರಿಟ್ಟೆ. ಹೆಸರಿಟ್ಟ ಮೆಲೆ ತಪ್ಪಿನ ಅರಿವಾಯ್ತು. ನಾನು ಬರೆದದ್ದು ನಿಜಕ್ಕೂ ಕತೆಯೆ?
ಕತೆ ಸಂಖ್ಯೆ ೧ನ್ನ ಬೆರೆದು ಬ್ಲಾಗಿಗೆ ಹಾಕಿ, ಕೊಂಡಿಗಳನ್ನೆಲ್ಲ ಮಿಂಚಂಚೆ ಕಳಿಸಿ ಮಲಗಿದೆ. ಬೆಳೆಗ್ಗೆ ಎದ್ದು ಮಾಮೂಲಿಯಾಗಿ ಕಾಲೇಜಿನಲ್ಲಿ ಯಾವುದೋ ಸಂಶೋಧನಾ ಲೇಖನವನ್ನ ಹಿಡಿದು ಕೂತಿದ್ದೆ. ನನ್ನ ಹುಚ್ಚುತನಗಳ ಅರಿವಿದ್ದ ನನ್ನ ಗೆಳೆಯ ವಿನಯ ದೇಸಾಯಿ ಫೋನ್ ಮಾಡಿ ಒಂದೇ ಸಮನೆ
"ಹೇ ಮಗೆನೇ, ಯಾರೋ ಆ ಹುಡ್ಗಿ...?"
"ಎಲ್ಲಿ ಸಿಕ್ಕಿದ್ಲೋ...?"
"ಲೇ ಅರವಿಂದ, ಒಂದು ಮಾತೂ ಹೇಳಿಲ್ಲ ಅಲ್ವೋ, ಅಲ್ಲ ನಿಜಕ್ಕೂ ನೀನು ಆ ಹುಡುಗೀನ ಹುಡುಕಿಕೊಂಡು ಹೋಗಿದ್ಯಾ...? ಅಥ್ವ ಸುಮ್ನೆ ಕಥೆನ...?
ಅಂತ ಫೋನ್ ಮಾಡಿದಾಗ...? ನಂಗೆ ಒಮ್ಮೆಗೆ ಗಾಬರಿಯಾಗಿ ಹೋಯಿತು. ಮೊದಲಂತು ಇವ್ನು ಏನನ್ನ ಮಾತಾಡ್ತಾ ಇದ್ದಾನೆ ಅಂತಾನೇ ತಿಳೀಲಿಲ್ಲ. ಆಮೇಲೆ ಗೊತ್ತಾಯ್ತು, ಇವ್ನು ರಾತ್ರಿ ನನ್ನ ಕತೆ ಓದಿ ಈಗ ನಂಗೆ ಫೋನ್ ಮಾಡಿದ್ದಾನೆ ಅಂತ. ಹೇಗೋ ಅದೂ ಇದೂ ಹೇಳಿ, ನನ್ನ ಮಾತಿನ ಚಾಕಚಕ್ಯತೆಯಿಂದ ಅವನನ್ನ ಯಾಮಾರಿಸಿ ಫೋನ್ ಇಡೋ ರೀತಿ ಮಾಡಿದೆ.

ಒಂದು ಕ್ಷಣ ಅದೇ ಪ್ರಶ್ನೆಯನ್ನ ನಾನೇ ಹಾಕಿಕೊಂಡೆ. ಹೌದು, ಸತ್ಯಾಸತ್ಯತೆಯ ಪ್ರಶ್ನೆ ಇಲ್ಲೇ ಇದೆ, ನನ್ನಲ್ಲೇ, ನನ್ನ ಕತೆಯಲ್ಲೇ. ನನ್ನ ಕತೆ ಸತ್ಯವ ಅನ್ನೋದರಲ್ಲೇ ನನ್ನ ಬದುಕು ಸತ್ಯವ ಅನ್ನೋದು ಸೇರಿಕೊಂಡುಬಿಡುತ್ತೆ. ಆ ಪ್ರವಳ್ಳಿಕ ಸತ್ಯವ...? ನನ್ನ ಹುಡುಕಾಟ ಸತ್ಯವ....? ಆ ಕತೆಯ ಗೌತಮನ ಭ್ರಮೆ ಸತ್ಯವ.....? ಸಾಹಿತ್ಯ, ಬದುಕು ಎರೆಡೂ ಕೆಲವೊಮ್ಮೆ ತರ್ಕಕ್ಕೆ ಸಿಗೋಲ್ಲ ನೋಡಿ.

ಇಷ್ಟೇ ಆಗಿದ್ದಿದ್ದರೆ ಪರವಾಗಿರಲಿಲ್ಲ. ಒಂದು ದಿನ ನಾನು ಕಾಲೇಜಿನ ಕಡೆ ಹೋಗಬೇಕು ಅಂತ ಅಂದುಕೊಂಡಿದ್ದೆ, ಅದೇ ಸಮಯಕ್ಕೆ ವೈಶಾಖಿ ಫೋನ್ ಮಾಡಿ, ತಾನೂ ಬರ್ತಾ ಇದ್ದೀನಿ ನೀನೇನಾದ್ರು ಕಾಲೇಜಿನ ಕಡೆಗೆ ಬರೋದಾದ್ರೆ ಬಾ ಅಂತ ಹೇಳಿದ್ಲು. ಅವಳ ಮದುವೇಗೂ ಹೋಗಿರಲಿಲ್ಲ. ಬಸುರಿ ಹುಡುಗಿ ಬೇರೆ. ಹೋಗಿ ಮಾತಾಡಿಸಿ ಬರುವ ಅಂತ ಅನ್ನಿಸ್ತು. ಹುಡುಗಿಯಿಂದ ಸ್ತ್ರೀಯಾಗಿ ಈಗ ತಾಯಾಗುವ ಹಂತದಲ್ಲಿ ಇದ್ದಾಳೆ. ನೋಡಿ ಮಾತನಾಡಿಸುವ ಅಂತ ಅನ್ನಿಸ್ತು. ಸರೀ ಅಂತ ಹೋದೆ, ಅದೂ ಇದೂ ಮಾತಾಡ್ತಾ ಕೂತಿದ್ವಿ ಹಳೇ ಸ್ನಾಹಿತರು ಸಿಕ್ಕಿದ್ರೆ ಕೇಳ್ಬೇಕ, ಸಾವಿರ ಮಾತಿರುತ್ತೆ. ಹಾಗೇ ಮಾತಾಡ್ತಾ....
"ಅರವಿಂದ ನೀನು ಬರೆದಿರೋ ಕತೆ, ಅದೆ ಕಥೆ ಸಂಖ್ಯೆ ೧ನ್ನ ಓದಿದೆ. ಅಲ್ಲಿ ಬರೋ ಪ್ರವಳ್ಳಿಕ ಅಂದ್ರೆ ನಾನೇ ತಾನೆ..? ಹೆಸರು ಮಾತ್ರ ಬದ್ಲಾಯ್ಸಿದ್ದೀಯ. ನಂಗಂತೂ ಬಾಳಾ ಖುಷಿಯಾಯ್ತು ನೋಡು. ನನ್ನದೇ ಪಾತ್ರ, ಅಲ್ಲಿ, ಮತ್ತೇ ನಾನು ನೋಡ್ತಾ ಇದ್ದೆ. ಆ ಘಟನೆಗಳು ಹೇಳಿದ್ದೀಯಲ್ಲವ, ಆ ಎಲ್ಲಾ ಘಟನೆಗಳು ನಿಜ. ಅಂದರೆ ಅಲ್ಲಿಯೆಲ್ಲ ನಾನು ಇದ್ದೆ. ಆ ಘಟನೆಗಳೆಲ್ಲ ನನ್ನ ಜೊತೆಗೇನೆ ನಡೆದದ್ದು.
ಹಾಗಾದ್ರೆ, ನೀನು ನಿಜಕ್ಕೂ ನನ್ನನ್ನ ಹುಡುಕಿಕೊಂಡು ಬಂದಿದ್ಯ...?
ಅದ್ಯಾಕೆ ಹುಡ್ಕಿ ಬಂದೆ...?
ಅದೂ, ನನ್ನ ಹೊಟ್ಟೆ ಅಷ್ಟೊಂದು ಇಷ್ಟ ಆಯ್ತ....? "
"ಹೇ, ಹೋಗೆ, ನಿನ್ನ ತಲೆ. ನಂಗೇನ್ ಹುಚ್ಚ ನಿನ್ನನ್ನ ಹುಡ್ಕಿಕೊಂಡು ಬರ್ಲಿಕ್ಕೆ.
ಅದು ಕತೆ ಕಣೆ, ಕತೆ ಅಷ್ಟೆ.."
ಸ್ವಲ್ಪ ಹೊತ್ತು ಸುಮ್ಮನಾದಳು. ಅವಳಿಗೆ ಬೇಸರವಾಗಿತ್ತ, ಸಂತೋಷವಾಗಿತ್ತ...? ಯಾವ ಭಾವನೆಯನ್ನ ಕಾಣಲಿಕ್ಕೆ ಹೋಗಲಿಲ್ಲ. ಸ್ವಲ್ಪ ಹೊತ್ತು ಚೆನ್ನಾಗಿ ರೇಗಿಸಿದೆ. ಕಡೆಗೆ ಹೋಗುವಾಗ
"ಅಲ್ವೋ, ಈಗ ನಾನು ನಿನ್ನನ್ನ ಮದ್ವೆ ಆಗ್ತೀನಿ ಅಂತಂದ್ರೆ ನೀನು ಮದ್ವೆ ಆಗ್ತೀಯ...? Practical ಆಗಿ ಆಗೋಲ್ಲ ಬಿಡು. ಅದೆಲ್ಲಾ ಪಕ್ಕಕ್ಕಿಡು. ಹೀಗೆ ಸುಮ್ನೆ ಮಾತಾಡೋಣ, ಈಗ ನಮ್ಗೆ ಮದ್ವೆ ಆಗೋ ಸಾದ್ಯತೆ ಇದ್ರೆ ಮದ್ವೆ ಆಗ್ತೀಯ...? "
"ಹೋಗೆ ಹೋಗೆ..... ನಿನ್ನನ್ನ ಯಾರು ಕಟ್ಕೊತಾರೆ.... ಪರಮ ರಾಕ್ಷಸಿ ನೀನು...."
ಅಂತ ಜೋರಾಗಿ ಕಣ್ಣಲ್ಲಿ ನೀರು ಬರೋ ಅಷ್ಟು ನಕ್ಕೆ. ಕಣ್ಣಲ್ಲಿ ನೀರು ಬರ್ತಾ ಇತ್ತು. ಜೊತೆಗೆ ನಗ್ತಾ ಇದ್ದೆ. ಕಣ್ಣೀರು ನಕ್ಕಿದ್ದಕ್ಕೆ ಅಂತ ತಿಳ್ಕೊಳ್ಳಲಿ ಅಂತ. ಹೊಟ್ಟೇಲಿ ಮಗೂನ ಇಟ್ಕೊಂಡು ಮದ್ವೆ ಆಗ್ತೀಯ ಅಂತ ತಮಾಶೆ ಮಾಡ್ತಾ ಇದ್ಲು. ಅಲ್ಲಿಗೆ ನನ್ನ ಕತೆ-ಕವಿತೆ ಎಲ್ಲವೂ ನಿಂತುಹೋಯಿತು. ಕವಿತೆಗೆ ಶಬ್ದಗಳು ಸಿಗಲಿಲ್ಲ. ಕತೆ ಬರೀಲಿಕ್ಕೆ ಆಗಲಿಲ್ಲ. ಒಟ್ಟಿನಲ್ಲಿ ಸಾಹಿತ್ಯವನ್ನ ಬಿಟ್ಟುಬಿಟ್ಟೆ. ಅಂದೇ, ನಾನು ಹಿಂದೆ ಬರೆದ ಎಲ್ಲಾ ಕವನಗಳನ್ನಾ, ಕತೆಗಳನ್ನಾ ತಂದು ಒಲೆಗಾಕಿಬಿಟ್ಟೆ. ಎಲ್ಲಾ ಕತೆ, ಕವಿತೆ, ಕಾದಂಬರಿ, ಎಲ್ಲಾ ಸಾಹಿತ್ಯದ ಪುಸ್ತಕಗಳನ್ನೂ ಸುಟ್ಟುಬಿಟ್ಟೆ ಹಾಗು ಇನ್ನು ಮುಂದೆ ಸಾಹಿತ್ಯವನ್ನ ಓದುವುದಾಗಲೀ ಬರೆಯುವುದಾಗಲಿ ಮಾಡುವುದಿಲ್ಲ ಅಂತ ತೀರ್ಮಾನಿಸಿಬಿಟ್ಟೆ. ಕವಿತೆಯನ್ನ ಬರಿಯುವುದನ್ನ ನಿಲ್ಲಿಸೋದು ಅಷ್ಟು ಸುಲಭ ಅಲ್ಲ. ಕವಿತೆ ಬರೆಯೋದು ಎಷ್ಟು ಹಿಂಸೆಯೊ, ಬರೆಯದೆ ಇರುವುದೂ ಅಷ್ಟೇ ಹಿಂಸೆ. ಕಿತ್ತು ತಿನ್ನುತ್ತೆ.

ಆದರೆ, ಯಾವುದೋ ಒಂದು ಮಾರ್ಗ ಬೇಕೇ ಬೇಕು. ಹಾದಿ ಬಿಟ್ಟವುನೂ ನಡೆದ ಹಾದಿ ಒಂದು ಮಾರ್ಗವೆ. ಏನೋ ಇದೆ, ಅದನ್ನ ಅರೀಬೇಕು. ಇಲ್ಲದೇ ಹೋದರೆ ನಾನು ಸತ್ತುಹೋಗ್ತೇನೆ ಅನ್ನೋ ಅಷ್ಟು ಹಿಂಸೆ. ಆದರೆ, ಕವನ ಬರೆಯಲಾಗಲಿಲ್ಲ. ವೈಶಾಖಿಯನ್ನ ಬೇಟಿಯಾದ ನಂತರ, ನನಗೆ ಅತೀವ ಆನಂದವನ್ನ ಕೊಡುತ್ತಿದ್ದ ಕಾವ್ಯ ಭಯಂಕರ ಹಿಂಸೆಯಾಗಿಹೋಯಿತು. ಆದ್ದರಿಂದ ಫಿಸಿಕ್ಸ್ ಅನ್ನ ಹಿಡುದು ಕೂತೆ. ಕ್ವಾಂಟಂ ಫಿಸಿಕ್ಸ್ ನ ತಾತ್ವಿಕತೆಯ ಬಗೆಗೆ ತೀವ್ರ ಸಂಶೋಧನೆಗಿಳಿದೆ. ಕ್ವಾಂಟ್ಂ ಫಿಸಿಕ್ಸ್ ನ ಮೂಲಭೂತ ಸಮಸ್ಯೆಗಳ ಅಧ್ಯಯನಕ್ಕೆ ತೊಡಗಿದೆ. ಪ್ರಕೃತಿಯನ್ನ ಅದರ ಮೂಲಭೂತ ಹಂತದಲ್ಲಿ ಅರಿತುಕೊಳ್ಳಲು ಕ್ವಾಂಟಂ ಫಿಸಿಕ್ಸ್ ಬಗೆಗಿನ ಅರಿವು ಅಗತ್ಯ. ಅಲ್ಲಿ ತಾರ್ಕಿಕವಾಗಿ Reality ಯ ಬಗೆಗಿನ ಪ್ರಶ್ನೆಗಳಿಗೆ ಉತ್ತರಗಳನ್ನ ಕಂಡುಕೊಳ್ಳಬಹುದು. ಹೀಗಾಗಿ ಪಕ್ಕಾ ಫಿಸಿಸಿಸ್ಟ್ ಆದೆ ಹಾಗು ತರ್ಕದ ಮುಖಾಂತರವಾಗಿ ಸತ್ಯವನ್ನ ಹುಡುಕಿ ಹೊರಟೆ. ಇದಿಷ್ಟೇ ಅಲ್ಲದೆ ನಾಗಾರ್ಜುನನ ಮದ್ಯಮ ಮಾರ್ಗ ನನ್ನನ್ನ ಬಹಳ ಆಕರ್ಷಿಸಿತು. ಹೀಗಾಗಿ ಬೌದ್ದ ತತ್ವಶಾಸ್ತ್ರ ಹಾಗು ಫಿಸಿಕ್ಸ್ ನ ತಾತ್ವಿಕತೆ ಇವುಗಳ ಸಂಬಂದವಾಗಿ ತಿಳಿಯಲು ನಾಲಂದ ಮಹಾವಿಹಾರ, ನಾಲಂದಕ್ಕೆ ಹೊರಟೆ. ಅಲ್ಲಿ ಒಂದು ವಾರಗಳ ಕಾಲ ನಡೆದ Phisics meets Philosophy ಎಂಬೋ ಸಮ್ಮೇಳನದಲ್ಲಿ ನಾನು ಹಾಗು ಅಕ್ಷತ ಬಾಗವಹಿಸಿ ಎರೆಡು ದಿನಗಳ ಹಿಂದೆ ವಾಪಸ್ಸು ಬಂದೆವು. ಬರುತ್ತಾ ರೈಲಿನಲ್ಲಿ ಕೆಲವು ಸಂಗತಿಗಳು ನಡೆಯಿತು. ಯಾಕೋ ತಮಗೆ ಹೇಳಿಕೊಳ್ಳಬೇಕು ಅಂತ ಅನ್ನಿಸ್ತು. ಅದಕ್ಕೇ ಹೇಳ್ತಾ ಇದ್ದೀನಿ. ನಿಜಕ್ಕೂ ಇದು ಕಥೆ ಅಲ್ಲ, ಹಾಗಂತ ಕವಿತೆ ಅಲ್ಲ. ಮತ್ತೇ ನೋಡಿ ಹೇಳ್ತಿದ್ದೀನಿ, ಇದು ಸತ್ಯವೂ ಅಲ್ಲ. ಅಯ್ಯೋ ಅದೆಲ್ಲ ಬಿಡಿ, ಹಾಳು.... ಸುಮ್ಮನೆ ನಾನು ಹೇಳೋದನ್ನ ಕೇಳಿಬಿಡಿ, ಅದೆ ಓದಿ ಬಿಡಿ. ನಿಜಕ್ಕೂ ಓದಿಸಿಕೊಂಡು ಹೋಗುತ್ತೆ. ಓದೊ ತಮಗೆಲ್ಲ ಬೇಕಿರೋದು ಅದೇ ಅಲ್ಲವ.? ತಮಗೆ ಓದಿಸಿಕೊಂಡು ಹೋಗಬೇಕು, ನಂಗೆ ಓದಿಸೋ ರೀತಿ ಬರೀಬೇಕು. ಅಷ್ಟೆ ಮಾರಾಯ್ರೆ. ನಮ್ಮೂರ ದಾಸಯ್ಯ ಹೇಳ್ತಿದ್ದ, "ಅಷ್ಟೆ ಕಣಾ ಬದ್ಕು" ಅಂತ... ಎಷ್ಟು ದಾಸಯ್ಯ ಅಂತ ಏನಾದ್ರೂ ಕೇಳಿದ್ರೆ, "ಅಷ್ಟೆ ಕಣಾ ಬದ್ಕು" ಅಂತ ಮತ್ತೇ ಅದನ್ನೇ ಹೇಳ್ತಿದ್ದ. ಹಾಗೆ, ಕತೆ, ಸತ್ಯ, ಎಲ್ಲಾ ಅಷ್ಟೇ ಕಣ್ರೀ....... ಅಲ್ವೇ.......?

ನಾಲಂದಯಿಂದ ವಾಪಸ್ಸು ಬರೋವಾಗ ರೈಲಲ್ಲಿ ಒಳ್ಳೆ ಮಜಾ ಇತ್ತು. ನಂಗೆ ಹಿಂದಿ ಸರಿಯಾಗಿ ಬರೋಲ್ಲ. ಪೂರ್ತಿಯಾಗಿ ಬರೋಲ್ಲ ಅಂತಾನೂ ಹೇಳ್ಬೋದು. ಸ್ವಲ್ಪ ಸ್ವಲ್ಪ ಅರ್ಥವಾಗುತ್ತೆ ಅಷ್ಟೆ. ಆದರೂ ನಾಲಂದಕ್ಕೆ ಬಂದಿದ್ದೆ. ಅಕ್ಷತ ಜೊತೆ ಇದ್ದರು, ಅವರಿಗೆ ಹಲವು ಭಾಷೆಗಳು ತಿಳಿದಿತ್ತು. ರೈಲಲ್ಲಿ ಟೀನಾ ಅಂತ ಒಬ್ಬ ಪುಟ್ಟ ಹುಡ್ಗಿ ಇದ್ದಳು. ಮೂರು ನಾಲ್ಕು ವರ್ಷದ ಹುಡುಗಿ. ನನ್ನನ್ನ ಮಾತಾಡಿಸೋಕೆ ಬಹಳಾ ಪ್ರಯತ್ನ ಮಾಡ್ತಾ ಇದ್ದಳು. ಹಿಂದಿಯಲ್ಲಿ ಏನೇನೋ ಕೇಳ್ತಾ ಇದ್ದಳು. ನಾನೂ ಸುಮ್ಮನೆ ಅರ್ಥ ಆದವನಂತೆ ತಲೆ ಮಾತ್ರಾ ಆಡಿಸ್ತಾ ಇದ್ದೆ. ಅಕ್ಷತ ಹತ್ರ ಮಾತ್ರ ಕನ್ನಡದಲ್ಲಿ ಮಾತಾಡ್ತಾ ಇದ್ದೆ. ಆ ಮಗೂಗೆ ತನ್ನ ಬಾಷೆ ಬಾರದ ನಾನು ಒಬ್ಬ ವ್ಯಕ್ತಿಯಾಗಿಯೋ, ಮನುಷ್ಯನಾಗಿಯೋ ಕಾಣಲೇ ಇಲ್ಲ ಅಂತ ಅನ್ನಿಸುತ್ತೆ. ಪ್ರತೀ ಬಾರಿಯೂ ಅಕ್ಷತ ಹತ್ರ ಬಂದು, ಅವಿಂದ ಹೇಗೆ ತಿಂತಾನೆ(ಎಲ್ಲವೂ ಹಿಂದಿಯಲ್ಲೇ ಅವ್ಳು ಕೇಳ್ತಾ ಇದ್ಲು, ಆಮೇಲೆ ಅಕ್ಷತ ಅದರ ಅರ್ಥ ಹೇಳ್ತಾ ಇದ್ಲು), ಅವಿಂದ ಹೇಗೆ ಮಾತಾಡ್ತಾನೆ, ಅವಿಂದ ಹೇಗೆ ನಡೀತಾನೆ? ಹೀಗೆ ಎಲ್ಲವನ್ನೂ ಎಚ್ಚರಿಕೆಯಿಂದ, ಬಹಳ ಕುತೂಹಲದಿಂದ ಕೇಳಿ ತಿಳಿದು ಕೊಳ್ಳುತ್ತಿದ್ಲು. ತನ್ನ ಭಾಷೆ ಬಾರದ ಒಬ್ಬ ಜೀವಂತ ಮನುಷ್ಯ, ಏನೂ ಅರಿಯದ ಆ ಮಗುವಿಗೆ ಒಂದು ಬೊಂಬೆ ಮಾತ್ರ. ಆ ಭಾಷೆ ಬಾರದ ಗೊಂಬೆಯೆ ಬಗೆಗಿನ ಎಲ್ಲವನ್ನೂ ತಿಳಿಯಬೇಕು. ಆ ಕುತೂಹಲ ಆ ಮಗುವಿಗೆ. ಯಾಕೋ ಆ ಮಗೂ, ಆ ಘಟನೆ ತುಂಬಾ ಹಿಡಿಸ್ತು. ನಂಗೆ, ಬದುಕಿನ ಭಾಷೆ ತಿಳೀತಿಲ್ಲ. ಬದುಕಿಗೆ ಒಂದು ಭಾಷೆ ಅನ್ನೋದು ಇದೆಯ? ಅದೂ ನಂಗೆ ಗೊತ್ತಿಲ್ಲ.

ಪಾಟ್ನಾ ಇಂದ ಹೊರಟ ಸಂಘಮಿತ್ರ ರೈಲು ಆಗಲೇ ಚೆನ್ನೈ ದಾಟಿ ಕರ್ನಾಟಕಕ್ಕೆ ಮಂದಿತ್ತು. ಎಲ್ಲಾ ಗೆಳೆಯರಿಗೂ ಕರ್ನಾಟಕಕ್ಕೆ ಬಂದಿದ್ದೀನಿ ಅಂತ ಮೆಸೇಜ್ ಕಳಿಸಿದೆ. ಮುಳುಬಾಗಿಲು ಸ್ಟೇಷನ್ ದಾಟಿತ್ತು. ಯಾಕೋ ತಿರುಗಿ ನೋಡಿದೆ. ಒಬ್ಬ ವ್ಯಕ್ತಿ ನನ್ನನ್ನೇ ನೋಡುತ್ತಿರುವಂತೆ ಕಂಡಿತು. ಮತ್ತೇ ನೋಡಿದೆ,
ಅರೆ, ಅದು ರಘೋತ್ತಮರಾಯರು, ಅದೂ ಇಲ್ಲಿ. ಇವರೇಕೆ ಬಂದರು. ನೋಡಿದರೆ, ಪಂಚೆಯೆಲ್ಲ ಉದುರಿದೆ. ಮುಖದಲ್ಲಿ ತೀವ್ರ ಭಯ, ಆಯಾಸ ಕಾಣ್ತಾ ಇದೆ. ಒಂದು ಕಾಲದ ನಮ್ಮೂರ ಶಾನುಭೋಗರು, ಆಜಾನುಬಾಹು ಇಲ್ಲಿ ಈ ಅವಸ್ತೆಯಲ್ಲಿ...... ತಕ್ಷಣ ಹೋಗಿ ನೋಡಿದೆ.
"ಮಾವ, ಏನಿಲ್ಲಿ ನೀವು..?"
"ಯಾರು"
ಅಂತ ಕೇಳಿ, ಸುಮ್ಮನೆ ಮಾಕಾಹಳ್ಳಿ ಮಾಕಾಹಳ್ಳಿ ಅಂತ ನಮ್ಮೂರಿನ ಹೆಸರನ್ನೇ ಜಪ ಮಾಡ್ತಾ ಅಳ್ತಾ ಇದ್ದರು. ತುಂಬಾ ನೋವಾಯ್ತು. ಒಂದು ಕಾಲದದಲ್ಲಿ ನಾನು ಚಿಕ್ಕವನಾಗಿದ್ದಾಗ ನನ್ನನ್ನ ಆಡಿಸಿದವರು ಮಾವ. ಕರೆದುಕೊಂಡು ಬಂದು ಸೀಟಿನಲ್ಲಿ ಕೂಡಿಸಿ, ನೀರು ಕೊಟ್ಟು, ಪಂಚೆಯನ್ನ ಸರಿಯಾಗಿ ಉಡಿಸಿ ಕೂಡಿಸಿದೆ. ಆಗ ನೆನಪಾಯಿತು, ರಘು ಮಾಮಂಗೆ ನೆನಪಿನ ಶಕ್ತಿ ಹೊರಟು ಹೋಗಿತ್ತು. ಯಾವುದ್ಯಾವುದೋ ಘಟನೆಗಳನ್ನ ಹೇಳ್ತಾ ಇದ್ದರು. ಅವರ ಮಕ್ಕಳನ್ನೂ ಸಹ ಅವರು ಗುರುತಿಸುತ್ತಿರಲಿಲ್ಲ. ಕಡೆಗೆ ಅವರ ಹೆಂಡತಿಯೂ ಅವರಿಗೆ ನೆನಪಿನಲ್ಲಿ ಇರಲಿಲ್ಲ. ಯಾರಾದರೂ ಮುಂದೆ ನಿಂತು, ನಾನು ಯಾರೆಂದು ಹೇಳು ಅಂದರೆ, ಬೇರೆ ಯಾರದೋ ಹೆಸರನ್ನ ಹೇಳ್ತಾ ಇದ್ದರು. ಹೀಗೆ ಅದೇನು ಕಾಯಿಲೆಯೋ ಗೊತ್ತಿರಲಿಲ್ಲ. ತುಂಬಾ ವಯಸ್ಸೂ ಆಗಿತ್ತು. ತಕ್ಷಣ ಅಮ್ಮಂಗೆ ಫೋನ್ ಮಾಡಿದೆ. ರಘು ಮಾಮ ರೈಲಲ್ಲಿ ನನ್ನ ಜೊತೆ ಇರೋದನ್ನ ಹೇಳ್ದೆ. ಆಗ ಅಮ್ಮ ವಿಷಯ ಹೇಳಿದ್ರು, ಮದುವೆಗೆ ಅಂತ ರಘು ಮಾಮ ಮತ್ತೆ ಅವರ ಕುಟುಂಬ ಮುಳುಬಾಗಿಲಿಗೆ ಬಂದಿದ್ರು. ಮಾಮ ಮದುವೆ ಸಮಯದಲ್ಲಿ ಅಲ್ಲೆ ಆ ಜನಗಳಿಂದ ತಪ್ಪಿ ಹೋಗಿದ್ದರು. ಹೀಗೆ ನಡೀತಾ ನಡೀತ, ಮಾಕಹಳ್ಳಿ ಮಾಕಾಹಳ್ಳಿ ಅಂತ ಏನನ್ನೋ ಹೇಳ್ತಾ ರೈಲಿ ಹತ್ತಿಬಿಟ್ಟಿದ್ದರು. ಅವರ ಮಕ್ಕಳೆಲ್ಲಾ ತುಂಬಾ ಹೊತ್ತಿನಿಂದ ಅವರನ್ನ ಹುಡುಕುತ್ತಿದ್ದರಂತೆ. ನಾನು ತಕ್ಷಣ ಅವರಿಗೆ ಫೋನ್ ಮಾಡಿ, ಮಾಮ ನನ್ನ ಬಳಿಯಿರುವುದನ್ನ ತಿಳಿಸಿ, ಬೆಂಗಳುರಿನ ರೈಲ್ವೇ ನಿಲ್ದಾಣಕ್ಕೆ ಬಂದು ಕರೆದುಕೊಂಡು ಹೋಗಿ ಅಂತ ಹೇಳ್ದೆ.

ರಘು ಮಾಮ ಎಲ್ಲೋ ನೋಡುತ್ತ ಸುಮ್ಮನೆ ಅಳುತ್ತಿದ್ದರು.
"ಯಾಕೆ ಮಾಮ ಅಳ್ತಾ ಇದ್ದೀರ...? ಸುಮ್ನಿರಿ, ಏನಾಯ್ತು ಈಗ...? ನಾನು ನಿಮ್ಮನ್ನ ಮನೇಗೆ ಕರ್ಕೊಂಡು ಹೋಗ್ತೀನಿ. ಅದೇ ಮಾಕಾಹಳ್ಳಿಗೆ ಕರ್ಕೊಂಡು ಹೋಗ್ತೀನಿ. "
"ಅಪ್ಪಯ್ಯ ಯಾರೋ ನೀನು..?"
"ಅಯ್ಯೋ ಮಾಮ ನಾನು ಸೀನನ ಮಗ. ಹೋಗ್ಲಿ ಬಿಡಿ, ಈಗ ಅಳಬೇಡಿ."
ಸ್ವಲ್ಪ ಹೊತ್ತು ಸುಮ್ಮನೆ ಇದ್ದು ಮತ್ತೆ ಶುರುವಿಟ್ಟುಕೊಂಡರು
"ಮಾಮ, ಯಾಕೆ ಈಗ ಅಳೋದು?"
"ಸತ್ತೋದ, ಅವ್ನು ಸತ್ತೋದ. ಪಾಪಿ ಮುಂಡೆಮಗ ಸತ್ತೋಗ್ಬಿಟ್ಟ."
"ಯಾರು ಮಾಮ ಸತ್ತಿದ್ದು?"
"ರಘೋತ್ತಮ, ಆ ಮಾಕಾಹಳ್ಳಿಯ ರಘೋತ್ತಮ ಸತ್ತೋದ ಕಣಾ"
ಅಂತೇಳಿ ಜೋರಾಗಿ ಅಳ್ತಾ ಇದ್ದರು. ಈ ಮನುಷ್ಯಂಗೆ ಬರೀ ಮರುವಲ್ಲ. ಪೂರ್ತಿ ಹುಚ್ಚು. ಪಾಪ, ಇವರ ಮನೆಯವರು ಅದೇಗೆ ಇವರನ್ನ ಸಹಿಸ್ಕೋತಾರೋ ಏನೋ. ಅಕಸ್ಮಾತ್ ನಮ್ಗು ಹೀಗೆ ಏನಾದ್ರು ಆದ್ರೆ. ಭಗವಂತ ಅಂತನ್ನಿಸಿಬಿಡ್ತು. ಆದರೂ, ಏನಾದ್ರು ಮಾತಾಡ್ತಾ ಇದ್ರೆ ಅಳೋದಿಲ್ಲ ಅಂತೇಳಿ ಮಾತಾಡಿಸ್ತಾ ಇದ್ದೆ.
"ಮಾಮ ಯಾವ ರಘೋತ್ತಮ ಮಾಮ?"
"ಮಾಕಾಹಳ್ಳಿಯ ರಘೋತ್ತಮ, ಶಾನುಭೋಗ, ಮಾಕಹಳ್ಳಿಯ ರಘೋತ್ತಮರಾಯ"
"ಹೆಂಗೆ ಸತ್ತ ಮಾಮ?"
"ಹುಚ್ಚೀನ ನೋಡಿ ಸತ್ತ."
"ಯಾವ್ ಹುಚ್ಚಿ"
""ಅಪ್ಪಯ್ಯ, ಮಾಕಾಹಳ್ಳಿಯ ರಘೋತ್ತಮ ಸತ್ತೋದ. ಅವ್ನು ಹೆಂಗೆ ಸತ್ತ ಅನ್ನೋದು ಒಂದು ದೊಡ್ಡ ಕತೆ. ಯಾರ್ಗೂ ಗೊತ್ತಿಲ್ಲದ ಕತೆ. ಅವ್ನ ಸಾವಿನ್ ಕತೆ. ಹುಚ್ಚಿ ಶಾಂತಮ್ಮನ್ನ ನೋಡಿ, ಅವ್ಳತ್ರ ಹೋಗಿ ಸತ್ತೋದ."

ಅರೆ, ಶಾಂತಮ್ಮನ ಹೆಸ್ರು. ನಮ್ಮೂರಿನ ಫೇಮಸ್ ಹುಚ್ಚಿ. ಶಾಂತಿ ನಮ್ಮೂರಿಗೆ ಎಲ್ಲಿಂದಲೋ ಬಂದಿದ್ದ ಹುಚ್ಚಿ. ಎಲ್ಲರೂ ಶಾಂತಮ್ಮ ಅಂತ ಕರೀತಿದ್ರು. ಅವ್ಳಿಗೆ ಆ ಹೆಸ್ರು ಯಾರು ಇಟ್ರು ಅಂತ ಗೊತ್ತಿಲ್ಲ. ಶಾಂತಮ್ಮ ಅಂತ ಕರೆದ್ರೆ ಮಾತ್ರ ತಿರುಗೋಳು. ಅವ್ಳು ಎಲ್ಲಿಂದ ಬಂದ್ಲು, ಹೇಗೆ ಇಲ್ಲಿಗೆ ಬಂದ್ಲು, ಎಲ್ಲವೂ ಪರಮ ನಿಗೂಢ ಸಂಗತಿಗಳು. ಅದನ್ನ ತಿಳಿಯೋ ಅವಶ್ಯ ಊರಲ್ಲಿ ಯಾರಿಗೂ ಇರಲಿಲ್ಲ. ಇಷ್ಟಕ್ಕೂ ಹುಚ್ಚಿ ಜಾತಕ ಕಟ್ಕೊಂಡು ಆಗೋದೇನಿದೆ. ಅವ್ಳ ಭಾಷೆ ಯಾವ್ದು ಅಂತಾನೂ ಇಲ್ಲಿನೋರಿಗೆ ತಿಳಿದಿಲ್ಲ. ಯಾವ್ದೋ ಉತ್ತರದ ಭಾಷೆ. ಅವಳಷ್ಟಕ್ಕೆ ಅವಳು ಇರೋಳು. ಏನಾದ್ರು ಕೆಲ್ಸ ಹೇಳಿದ್ರೆ ಮಾಡೋಳು, ಆಗ ಸ್ವಲ್ಪ ಊಟ ಹಾಕಿದ್ರೆ ತಿನ್ನೋಳು. ಯಾರ್ಗೂ ತೊಂದ್ರೆ ಕೊಡ್ದೆ ಇದ್ದಿದ್ರಿಂದ ಯಾರು ಆಕೇನ ಬಗ್ಗೆ ಹೆಚ್ಚಿನ ತಲೆ ಕೆಡಿಸ್ಕೊಳ್ಳಲಿಲ್ಲ. ಊರೊಳ್ಗಡೆ ಇರೋ ದೇವಸ್ಥಾನದಲ್ಲಿ ಮಲಗೋಳು. ಏನೂ ಕೆಲ್ಸ ಇಲ್ಲದ ದಿನ ಸುಮ್ನೆ ಕೂತಿರೋಳು. ಯಾವ್ದೋ ಮರಾನ ನೋಡ್ತಾ ಸುಮ್ನೆ ಕೂತಿರ್ತಾ ಇದ್ಲು. ಒಂದು ದಿನ ಕಾಣೆಯಾಗಿಹೋದಳು. ಅವ್ಳು ಹೋದ್ಲು ಅಂತ ಬೇಸ್ರ ಪಟ್ಕೊಳ್ಳೊಕೆ ಯಾರೂ ಇರ್ಲಿಲ್ಲ. ಎಲ್ಲಿಗೋದಳು ಅಂತ ಯಾರೂ ವಿಚಾರಿಸ್ಲೇ ಇಲ್ಲ. ಯಾರಿಗೂ ಬೇಕೂ ಇರ್ಲಿಲ್ಲ. ಹುಚ್ಚಿ ಶಾಂತಿ ಎಂಬೋಳು ನಮ್ಮೂರಲ್ಲಿ ಇದ್ದಳು ಅನ್ನೋ ಒಂದು ನೆನಪನ್ನ ಮಾತ್ರ ಇಟ್ಟು ಹೊರಟು ಹೋಗಿದ್ದಳು.
ಆಕೀನ ಯಾಕೆ ಮಾಮ ನೆನೆಪಿಸ್ಕೊಳ್ತಾ ಇದ್ದಾರೆ ಅಂತಾ ತಿಳೀಲಿಲ್ಲ.

"ಒಂದಿನ ರಘೋತ್ತಮ ಶಾಂತೀನ ನೋಡ್ದ. ಅವ್ನಿಗೆ ಅವ್ಳು ಬಾಳಾ ಬಾಳಾ ಸುಂದರ್ವಾಗಿ ಕಾಣಿಸಿದ್ಲು. ಅಷ್ಟೆ, ಅವ್ಳು ಎಲ್ಲಿಗೋ ಹೊರ್ಟೋದ್ಲು. ಇವ್ನು ರಘೋತ್ತಮ ಸತ್ತೋದ"
ಅಯ್ಯೋ ಪಾಪ ಮಾಮ. ಏನೇನೋ ಅಂತಾ ಇರ್ತಾರೆ ಅಂತ ಸುಮ್ನೆ ಆದೆ.
"ಹೋಗ್ಲಿ ಬಿಡು ಮಾಮ. ನೀನು ಸಮಾದಾನ ಮಾಡ್ಕೊ, ರಘೋತ್ತಮ ಸತ್ತೋದ. ಸತ್ಮೇಲೆ ಏನ್ಮಾಡೋಕಾಗುತ್ತೆ. ನೀವು ಮಲ್ಗಿ."
ಅಂತ ಹೇಳಿ ನಾನೂ ಅಕ್ಷತ ನಮ್ಮ ಮುಂದಿನ ಪ್ರಾಜೆಕ್ಟಿನ ಬಗ್ಗೆ ಮಾತಾಡ್ತಾ ಕೂತ್ವಿ.

ಇನ್ನೇನಿರುತ್ತೆ, ನಾ ಹೇಳೋದು ಮುಗೀತ ಬಂತು. ಬೆಂಗಳೂರು ಬಂತು, ರಘು ಮಾಮನ ಮಕ್ಕಳು ಬಂದಿದ್ರು. ಅವರಿಗೆ ಹೇಳಿ ಮಾಮನ್ನ ಅವರ ಜೊತೆಗೆ ಕಳಿಸಿಕೊಟ್ಟು ಬಂದೆ. ಹೋಗುವಾಗ ರಘುಮಾಮನ ಮಗ ಮೋನ ಮಾಮ ಕರ್ದು, ಮುಂದಿನ ತಿಂಗಳು ರಘುಮಾಮನ ಅರವತ್ತನೆ ವರ್ಷದ ಶಾಂತಿ ಇದೆ ಬರ್ಬೇಕು ಅಂತ ಅಂದ್ರು. ನಾನು ರಘು ಮಾಮಾಂಗೆ ಮತ್ತೊಂದ್ಸಾರಿ ಮದ್ವೆನ ಅಂತ ತಮಾಶೆ ಮಾಡಿದ್ದಕ್ಕೆ, ಹೌದು ಎಲ್ಲಾರು ಬರ್ಬೇಕು ಅಂತೇಳಿ ಹೊರ್ಟುಬಿಟ್ರು.

ಇಷ್ಟೆಲ್ಲಾ ಆದಮೇಲೆ, ಸುಮ್ಮನೆ ಇರಲಿಕ್ಕೆ ಆಗಲೇ ಇಲ್ಲ ನೋಡಿ. ಅದಕ್ಕೆ ತಮ್ಮ ಮುಂದೆ ಹೇಳಿಕೊಂಡುಬಿಟ್ಟೆ. ಈ ಕತೆ(ಅಲ್ಲದ) ಕವಿತೆ(ಆಗದ) ಸತ್ಯ(ಗೊತ್ತಿಲ್ಲದ) ಬರಹದಿಂದ ತಮಗೇನಾದರು ಬೇಸ್ರ ಆಗಿದ್ರೆ, ಕ್ಷಮಿಸಿ ಬಿಡಿ.