ಒಂದು ವಿದಾಯ

                
ಮುನುಷ್ಯಂಗೆ ಭಾವವನ್ನ ಭಾಷಯಲ್ಲಿ ಹಿಡಿದಿಡುವುದು ಸದಾ ಸವಾಲಿನ ಕೆಲಸವೇ ಸರಿ. ಸದಾ ಸ್ಥಾಪಿತ ಅರ್ಥಗಳಿಂದ ಕೂಡಿದ ಭಾಷೆಯಲ್ಲಿ, ಅರ್ಥಕ್ಕೇ ಧಕ್ಕದ ಭಾವವನ್ನ ಹಿಡಿದಿಟ್ಟು ಅದನ್ನ ಮುಟ್ಟಿಸಬೇಕು. ಒಂದು ವಿದಾಯವನ್ನ ನಾನೀಗ ತಿಳಿಸಬೇಕಿದೆ. ವಿದಾಯದ ನೋವು ಮತ್ಯಾವುದೋ ಸ್ವಾಗತದ ಸಂಭ್ರಮದಲ್ಲಿ ತೆರೆದುಕೊಳ್ಳುತ್ತೆ. ಹೀಗೆ ಒಂದು ಕಡೆ ವಿದಾಯ ಮತ್ತೊಂದು ಕಡೆ ಸ್ವಾಗತ. ಎರೆಡನ್ನೂ ಒಮ್ಮೆಗೇ ಹಿಡಿದಿಡಲು ಭಾಷೆ ಸೋಲಬೊಹುದು, ಆದರೆ ಭಾಷೆಗೂ ಮೀರಿದ ಭಾವದೊಂದಿಗೆ ಅದು ತಮ್ಮನ್ನ ತಲುಪಬೊಹುದೆಂದು ಆಶಿಸುತ್ತೇನೆ. ಹಾಗೆ ನೋಡಿದರೆ ಪ್ರತೀ ಕ್ಷಣವೂ ಹಿಂದಿನ ಕ್ಷಣದ ವಿದಾಯವನ್ನ ಹೊತ್ತೂ ಮುಂದಿನ ಕ್ಷಣದ ಸ್ವಾಗತಕ್ಕೆ ತೆರೆದುಕೊಂಡೇ ಇರುತ್ತದೆ.

ಸುಮಾರು ಒಂದು ವರ್ಷಗಳ ಕಾಲ ನನಗೆ ಆಶ್ರಯ ಕೊಟ್ಟ, ಬಂಟ್ವಾಳವನ್ನ, ಧಕ್ಷಿಣ ಕನ್ನಡವನ್ನ ಬೌತಿಕವಾಗಿ ತೊರೆದು ದೂರ ಹೊರಡುತ್ತಿದ್ದೇನೆ. ಹಾಗೆ ನೋಡಿದರೆ ನನಗೆ ಈ ರೀತಿಯ ವಿಧಾಯ ಏನೂ ಹೊಸದಲ್ಲ, ನಾನೊಬ್ಬ ಅಲೆಮಾರಿಯೆ. ಆದರೆ ಈ ಅಲೆಮಾರಿಗೂ ಒಂದು ನೆಲೆಯನ್ನ ಈ ಸ್ಥಳ, ಈ ಸಂಸ್ಥೆ(SVS College, ಬಂಟ್ವಾಳ), ಇಲ್ಲಿನ ಜನ ನೀಡಿದ್ದರು. ಆದ್ದರಿಂದ ಈಗ ಈ ಸ್ಥಳವನ್ನ ಬಿಟ್ಟು ಹೋಗುವಾಗ ಏನೋ ಬೇಸರ. ಏನನ್ನೋ ಕಳೆದುಕೊಳ್ಳುತ್ತಿರುವ ಬೇಸರ. ಆದರೆ ಹೊರಡಲೇ ಬೇಕು, ಒಳಗಿನ ಧ್ವನಿಗೆ ಗೌರವ ನೀಡಿ, ಕೂಗುತ್ತಿರುವ ಹಾದಿಗೆ ಕಿವಿಗೊಟ್ಟು ನಡೆಯಬೇಕು. ಆದ್ದರಿಂದ ಮುಂದಿನ ಪಯಣಕ್ಕೆ ಇಲ್ಲಿಂದ ಹೊರಟಿದ್ದೇನೆ.

ಇಲ್ಲಿನ ಪರಿಸರದಲ್ಲಿ ನಾನು ಕಂಡ ಪ್ರತೀ ವ್ಯಕ್ತಿಯಿಂದಲೂ ಏನನ್ನಾದರೂ ಕಲಿತಿದ್ದೇನೆ. ಆದ್ದರಿಂದ ಎಲ್ಲರಿಗೂ ನನ್ನ ವಂದನೆಗಳನ್ನ ಸಲ್ಲಿಸಲೇ ಬೇಕು. ಬದುಕಿನ ಈ ಪಯಣದಲ್ಲಿ, ಆಕಸ್ಮಿಕವೋ ಅಥವಾ ಪೂರ್ವ ನಿಶ್ಚಿಥವೋ, ಒಟ್ಟಿನಲ್ಲಿ ನನ್ನ ಬದುಕಿನ ಪಯಣದಲ್ಲಿ ತಾವೆಲ್ಲಾ ಜೊತೆಯಾದಿರಿ. ಒಂದು ಅದ್ಭುತ ಜೀವನಾನುಭವವನ್ನು ಹೊತ್ತು ನಡೆವಂತೆ ಮಾಡಿದಿರಿ. ತಮ್ಮ ಎಲ್ಲಾ ಸ್ನೇಹ-ಪ್ರೀತಿಗೆ  ವಂದನೆಗಳು.

ಯಾವುದೋ ಒಂದು ಸ್ಥಳ ಕೇವಲ ಬೌತಿಕ ವಸ್ತುವಾಗಿ ಮಾತ್ರ ಉಳಿಯುವುದಿಲ್ಲ. ಅದು ಭಾವನಾತ್ಮಕವಾಗಿ ಬೆಸೆದುಕೊಂಡುಬಿಡುತ್ತದೆ. ಎಲ್ಲೋ ಕರ್ನಾಟಕ-ಆಂದ್ರ ಪ್ರದೇಶದ ಗಡಿ ಬಾಗದಿಂದ ಬಂದ ನನ್ನನ್ನು ಈ ಪ್ರದೇಶ ಸ್ವೀಕರಿಸಿದ ಪರಿ ನಿಜಕ್ಕೂ ಅದ್ಭುತ. ಬದುಕಿನ ಒಂದು ಪ್ರಮುಖ ಘಟ್ಟದಲ್ಲಿ ನನ್ನ ಜೊತೆಗಿದ್ದು, ಮನುಷ್ಯ ಸಂಬಂಧದ ಪ್ರಾಮುಖ್ಯವನ್ನ, ಪ್ರೀತಿ ವಿಶ್ವಾಸಗಳೆಂಬ ಮನುಷ್ಯ ಸಹಜ ಗುಣಗಳಿಂದ ನನ್ನನ್ನ ಆಧರಿಸಿ, ಮಾನವತ್ವದ ಮೇಲೆ ಜೀವನ ಪೂರ್ತಿ ನಂಬಿಕೆ ಇಡುವಂತೆ ಮಾಡಿದ ತಮ್ಮೆಲ್ಲರಿಗೂ ನನ್ನ ವಂದನೆಗಳು. ನನ್ನ ಜೊತೆಗಿದ್ದವರಿಗೆ, ನನ್ನ ಪರಿಚಿತರಿಗೆ, ನನ್ನ ಸಂಸ್ಥೆಯಲ್ಲಿ ಜೊತೆಗಿದ್ದವರಿಗೆ, ಎಲ್ಲಕ್ಕೂ ಮುಖ್ಯವಾಗಿ ನನ್ನ ವಿದ್ಯಾರ್ಥಿ ಮಿತ್ರರಿಗೆ ನನ್ನ ವಂದನೆಗಳು.


ಮನುಷ್ಯ ಸಂಬಂಧಗಳ ಸಂಕೀರ್ಣತೆಗಳನ್ನ ಅರಿತುಕೊಳ್ಳಬೇಕು ಎಂಬೋ ಆಶಯದೊಂದಿಗೆ ಇಲ್ಲಿಗೆ ಬಂದೆ. ಆದರೆ ಒಂದು ಸಂಬಂಧ, ನನ್ನನ್ನು ಆ ಸಂಬಂಧಗಳ ಸಂಕೀರ್ಣತೆಗಳ ಹೊರತಾಗಿ, ಎಲ್ಲಕ್ಕೂ ಮೀರಿ ನನ್ನನ್ನು ಆವರಿಸಿಬಿಟ್ಟಿತು. ಆ ಒಂದು ಸಂಬಂಧಕ್ಕೆ ಯಾವುದೋ ಹೆಸರಿಡಲು ನನಗೆ ಇಷ್ಟವೂ ಇಲ್ಲ, ಅವಶ್ವವೂ ಇಲ್ಲ. ಸಂಬಂಧಗಳಿಗೆ ಭಾವ ಮಾತ್ರಾ ಮುಖ್ಯ, ಹೆಸರುಗಳಲ್ಲ. ಆ ಭಾವಕ್ಕೆ ಎಂದಿಗೂ ವಿದಾಯ ಹೇಳಲಿಕ್ಕೆ ಸಾದ್ಯವೇ ಇಲ್ಲ. ಆ ಭಾವವನ್ನ ಹಾಗೆ ಹೊತ್ತು ಸಾಗುತ್ತೇನೆ.

ಬದುಕಿನ ಧ್ವನಿಗ್ರಹಿಕೆಯ ಮಾರ್ಗದಲ್ಲಿ, ಮತ್ಯಾವುದೋ ಕಾರಣ ಹಿಡಿದು ಹೊರಟಿದ್ದೇನೆ. ದಾರಿ ಬಿಟ್ಟವನಿಗೂ, ನಡೆದ ಒಂದು ದಾರಿ ಇರುತ್ತೆದೆ ಹಾಗು ಗೊತ್ತಿಲ್ಲದೆ ಉಳಿದು ಬಿಡುತ್ತೆ. ನನ್ನ ಮುಂದಿನ ಹಾದಿಯಲ್ಲಿ, ತಮ್ಮಗಳ ಆಶೀರ್ವಾದ, ಮಾರ್ಗದರ್ಶನ, ತಪ್ಪಾದಾಗ ಕಿವಿ ಹಿಂಡಿ ಸರಿ ಮಾಡುವ ಹಿರಿತನ, ಒಂಟಿಯಾದಾಗ ಜೊತೆಯಾಗುವ ಸ್ನಾಹಗುಣ, ಎಲ್ಲವನ್ನೂ ಅಪೇಕ್ಷಿಸುತ್ತಾ, ದಕ್ಷಿಣ ಕನ್ನಡಕ್ಕೆ, ಬಂಟ್ವಾಳಕ್ಕೆ, ಇಲ್ಲಿನವರಿಗೆ ವಂದನೆಗಳನ್ನ ತಿಳಿಸುತ್ತಿದ್ದೇನೆ.
[ಶನಿವಾರ ೩೧/೦೩/೨೦೧೨ ರಂದು ಬಂಟ್ವಾಳದಿಂದ ಹೊರಡುತ್ತಿದ್ದೇನೆ]

ಇಂತಿ
ಅರವಿಂದ


ತಿರುಬೋಕಿಯ ಸ್ವಗತ ೩



ಪರಸ್ಪರ ವಿರೋಧಾತ್ಮಕವಾಗಬಲ್ಲ ಪ್ರತೀ ರಚನೆಯೂ ಸ್ವ-ಸ್ಥಿರವಾಗಿರುತ್ತದೆ.
ಅಥವಾ
ಪ್ರತೀ ಅಸಂಗತ ರಚನೆಯೂ ಸ್ವ-ಸ್ಥಿರವಾಗಿರುತ್ತದೆ.
ಅಥವಾ
ಯಾವುದೇ ಶಬ್ದಕ್ಕೂ ಅರ್ಥಗಳಿರುವುದಿಲ್ಲ.
ಅಥವಾ
ಪ್ರತೀ ಶಬ್ದಕ್ಕೂ ಜೀವವಿರುತ್ತದೆ.



ಕತ್ತಲ ರಾತ್ರಿಗಳು ಒಂಟಿಯಾಗಿದ್ದಾಗ ಭೀಕವೆನಿಸುತ್ತದೆ. ಎಷ್ಟೇ ಪ್ರಯತ್ನಿಸಿದರೂ ನಿದ್ರೆ ಹತ್ತುವುದಿಲ್ಲ. ಏನೋ ದಿಗಿಲು, ಭಯ. ಶಬ್ದವೇ ಇಲ್ಲದ ಕಡೆ ಏನೋ ಶಬ್ದವನ್ನ ಭಾವಿಸೋದು. ಶೂನ್ಯದಿಂದ ಏನೋ ರೂಪಗೊಳ್ಳುತ್ತಾ ಇದೆ ಅಂತ ಅಂದು ಕೊಳ್ಳುವುದು. ಹಗಲಿನಲ್ಲಿ ಇದನ್ನೇ ಏಕಾಂತ ಅಂತ ತಬ್ಬಿಕೊಂಡದ್ದು. ಈಗ ರಾತ್ರಿಯಾದಾಗ ತಬ್ಬಿಕೊಂಡದ್ದು ಶರೀರವನ್ನೇ ಸುಡುತ್ತಿದೆ. ಭಯ ಯಾಕೆ ಅಂತ ಚಿಂತಿಸತೊಡಗಿ, ಆ ಚಿಂತನೆಯೇ ಭಯದ ಮೂಲವಾಗಿ ಹೋದಾಗ ತೀವ್ರ ಭಯದಿಂದ ನರಳುತ್ತೇನೆ. ಒಮ್ಮೆ ಮನೆಯ ಬಾಗಿಲುಗಳನ್ನೆಲ್ಲಾ ಗಟ್ಟಿಯಾಗಿ ಭದ್ರಪಡಿಸಿ ಬರುತ್ತೇನೆ. ಸಾದ್ಯವಾಗುವುದಿಲ್ಲ, ಮತ್ತೇ ಹೋಗಿ ಎಲ್ಲಾ ಬಾಗಿಲುಗಳನ್ನ ಹಾಕಿದ್ದೀನ ಅಂತ ಪರೀಕ್ಷಿಸುತ್ತೇನೆ. ಎಷ್ಟೇ ಬಾರಿ ಪರೀಕ್ಷಿಸಿದರೂ ಭಯವೇನು ಹೋಗಲಿಲ್ಲ. ಕಡೆಗೆ ಬಚ್ಚಲಿಗೋಗಿ ಬಂದು ಎಲ್ಲಾ ಬಾಗಿಲುಗಳನ್ನ ಹಾಕಿದ್ದೀನಿ ಎಂಬೋ ನಂಬಿಕೆಯಲ್ಲಿ ಮಲಗುತ್ತೇನೆ. ನಿದ್ರೆ ಬಾರದಾದಾಗ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಎಲ್ಲೋ ದೂರದಲ್ಲಿ ನಾಯಿಯೊಂದು ಬೊಗಳುತ್ತಿರುತ್ತದೆ. ಗಾಳಿಗೆ ಕ್ಯಾಲೆಂಡರಿನ ಹಾಳೆಗಳು ಪಟ ಪಟ ಅಂತ ಸದ್ದುಮಾಡಿದಾಗ ಬೆದರಿ ಕಾಲದ ಪರಿವೆಯೆ ಭೀಕರತೆಯನ್ನ ತೆಗಳಿ ,ಇಡೀ ಕ್ಯಾಲೆಂಡರನ್ನೇ ಹೊರಗೆಸೆದು ಬಂದ ನಂತರವೂ, ಮತ್ತೇನೋ ಭಯವಾಗ ತೊಡಗುತ್ತೆ. ಕತ್ತಲಲ್ಲಿ ಯಾವುದೋ ನೆರಳಿನ ರೂಪವೊಂದು ಕೂತಂತೆ ಕಾಣುತ್ತದೆ. ಬೆಚ್ಚಿ ದೀಪವಾಕಿದಾಗ ಏನೂ ಕಾಣುವುದೇ ಇಲ್ಲ. ಭಯಕ್ಕೆ, ದೀಪವಾಕಿಯೇ ಮಲಗುತ್ತೇನೆ. ನಿದ್ರೆಯೇ ಬರುವುದಿಲ್ಲ. ಹೀಗೆ ರಾತ್ರಿಗಳಹೊತ್ತು ನಿದ್ರೆ ಹೋಗುವುದನ್ನೇ ಮರೆತುಬಿಟ್ಟೆ.

ಎಲ್ಲೋ ಅಡುಗೇಮನೆಯಲ್ಲಿ ನಲ್ಲಿಯಲ್ಲಿ ನೀರು ತೊಟ್ಟಿಕ್ಕುವ ಸದ್ದು ಕೇಳಿ ಒಮ್ಮೆಲೇ ಬೆಚ್ಚಿಬಿದ್ದು, ಅಡುಗೇ ಮನೆಗೋಗಿ ನಲ್ಲಿಯನ್ನ ಭದ್ರಪಡಿಸುವಾಗ ನಲ್ಲಿಯೇ ಕಿತ್ತು ನೀರು ಹರಿಯುತ್ತದೆ. ನನ್ನ ಕೈಚೆಲ್ಲಿ ಹೋಗುತ್ತಾ ನಿಂತ ನೀರನ್ನ ನೋಡುತ್ತಾ ಕೂರುತ್ತೇನೆ. ನೀರು ಮನೆಯನ್ನ ತುಂಬುತ್ತದೆ, ನಾನು ನೋಡುತ್ತಾ ನೋಡುತ್ತಾ ಕೂರುತ್ತೇನೆ. ಮನೆಯಿಂದ ನೀರು ಹೊರನುಗ್ಗಿತು, ಇಡೀ ಊರನ್ನ ಆಕ್ರಮಿಸಿದೆ. ಎಲ್ಲವೂ ನೀರಿನಲ್ಲಿ ತುಂಬಿಹೋಗಿದೆ. ನಾನು ನೋಡುತ್ತಾ ನಿಂತಿದ್ದೀನಿ. ಊರು, ರಾಜ್ಯ, ದೇಶ, ಎಲ್ಲವೂ ನೀರು ನೀರು. ಸರ್ವವೂ ಜಲ ರಾಶಿಯಲ್ಲಿ ಸಮಾದಿಯಾಗಿದೆ. ನನ್ನ ಭಯದಿಂದ ಕಿತ್ತ ನಲ್ಲಿಯಿಂದ ಹೊರಟ ನೀರು, ಜಗತ್ತನ್ನ ಜೀರ್ಣಿಸಿಕೊಳ್ಳತೊಡಗಿದೆ. ಆದರೂ, ನಾನಿನ್ನೂ ನೀರಿನಲ್ಲಿ ಮುಳುಗಿಲ್ಲ. ಪಾಪ ಪ್ರಜ್ಞೆಯೊಂದು ಕಾಡುತ್ತಿದೆ. ಹೊರಗೆ ನೋಡುತ್ತಿದ್ದೇನೆ, ಯಾವುದಾದರೂ ಚೀತ್ಕಾರಕ್ಕೆ, ಕೂಗಾಟಕ್ಕೆ. ಎಲ್ಲಿಯೂ ಯಾವ ಶಬ್ದವೂ ಕಾಣದ್ದನ್ನ ಕಂಡು ನಾನೂ ನೀರಿಗೆ ದುಮುಕಿದೆ. ಉಸಿರು ಕಟ್ಟುತ್ತೆ, ನರ ನರಗಳು ಬಿಗಿಸುತ್ತೆ. ಶರೀರದ ಪ್ರತೀ ಬಾಗವೂ ನೋಯುತ್ತೆ. ಸಾವು ಎದುರಿಗೆ ಬಂದು ನಿಂತಿದೆ. ಮೆಲ್ಲಗೆ ಹೋಗಿ ಮುಟ್ಟಿನೋಡಿದೆ. ಏನೋ ರೋಮಾಂಚನ! ಅರೆ ಸಾವು! ತುಂಬಾ ಮುದ್ದಾಗಿತ್ತು. ಹೋಗಿ ಅಪ್ಪಿಕೊಂಡೆ, ನಾ ಸಾವಾಗಿದ್ದೆ. ಯಾವ ಪ್ರಯತ್ನವೂ ಇಲ್ಲದೆ ನೀರಿನ ಮೇಲೆ ತೇಲುತ್ತಿದ್ದೆ. ಜಗದ ಜಲರಾಶಿಯಲ್ಲಿ ತೇಲುತ್ತಿದ್ದೆ.



ಯಾಕೆ ಹೀಗಾಯಿತು.......? ಸತ್ತ ನಂತರ ಕೇಳಿಕೊಂಡ ಮೊದಲ ಪ್ರಶ್ನೆ......!!!

ನನ್ನ ಎದುರಿಗೆ ನಿಂತ ಒಂದು ಹೆಣ್ಣು ಶರೀರದ ಮುಂದೆ ಪೂರ್ಣ ಶರಣಾಗಬೇಕು ಅಂತ ಅನ್ನಿಸಿದ್ದು ಈ ಹುಡುಗಿಯ ಮುಂದೆ ಮಾತ್ರಾ. ಪ್ರೀತಿ ಶರಣಾಗತಿಯ ಮಹೋನ್ನತ ತತ್ವವಾಗಿ ಕಂಡಾಗ ನನ್ನಹಂಕಾರಕ್ಕೆ ಸರಿ ಬಾರಲಿಲ್ಲ. ನನ್ನಂತರಂಗದ ದ್ವನಿ ಹೇಳಿತು, ಬೆತ್ತಲೆಯಾಗಿ ನಿಂತುಬಿಡು ಅವಳ ಮುಂದೆ, ಪ್ರೀತಿ ಅದ್ವೈತದ ಪರಮೋಚ್ಚ ಸ್ಥಿತಿ ಎಂದು. ಆದರೆ ನನ್ನಹಂಕಾರಕ್ಕೆ ಅದು ಸರಿಬಾರಲಿಲ್ಲ. ನನ್ನತನವನ್ನ ಕಳೆದುಕೊಳ್ಳಲು ನಾ ಸಿದ್ದನಾಗಲಿಲ್ಲ. ನಾ ಗೆಲ್ಲಲು ಹೊರಟೆ, ಪ್ರೀತಿ ನನ್ನಿಂದ ದೂರ ಸಾಗತೊಡಗಿತು. ನಾ ಗೆಲ್ಲುತ್ತಿದ್ದೇನೆ ಎಂಬೋ ಭ್ರಮೆಯಲ್ಲೇ ಇದ್ದೆ. ಬೆತ್ತಲೆ, ಬಯಲು, ಅದ್ವೈತ ಎಲ್ಲವೂ ಕೇವಲ ಪದಗಳಾಗಿ ಮಾತ್ರ ಉಳಿದುಬಿಟ್ಟಿತ್ತು. ಮತ್ತೇ ಮತ್ತೇ ಎಷ್ಟೇ ಸಾರೀ ಪ್ರಶ್ನಿಸಿಕೊಂಡರೂ ಉತ್ತರವೇ ಸಾದ್ಯವಾಗದ ಪ್ರಶ್ನೆಗಳ ಗೊಂದಲಕ್ಕೆ ತಲೆಕೊಟ್ಟುಬಿಟ್ಟಿದ್ದೇನೆ. ಅವಳಿಗೆ ಶರಣಾಗದೆ, ರೂಪಾಂತರ ನಿರಂತರವೇ? ನಿರಂತರವಾಗಿ ರೂಪಾಂತರಕ್ಕೊಳಗಾಗುವುದು ಸ್ಥಾವರವೆ? ಅಥವಾ ಜಂಗಮವೇ? ನಾನೇ? ಅವಳೇ?, ಎಂಬೋ ಪ್ರಶ್ನೆಗಳಿಗೆ ಎಂದಿಗೂ ಉತ್ತರ ದಕ್ಕದು. ಆದರೆ, ಆ ನನ್ನನ್ನ ತಡೆದುಕೊಳ್ಳುವ ತಾಕತ್ತು ಅವಳಿಗಿದೆಯೇ ಎಂಬೋ ಪ್ರಶ್ನೆಯೂ ಕಾಡಿದೆ.

ಅವಳು ಹೇಳಿದ್ದು ಇಷ್ಟೇ ಮಾತು,

"ಮಾಂಸದ ಮುದ್ದೆ ಕಣೋ ನೀನು. ಈಗ ತಾನೆ ಹುಟ್ಟಿದ ಮಗುವಿನ ದೇಹ ಉಂಟಲ್ಲ, ಅದೇ ನೀನು. ನಿನ್ನ ದೇಹದ ಗಂಧ ಗೊತ್ತ ನಿನಗೆ, ಆ ದೇಹದ ಗಂಧಕ್ಕೆ ನಾ ಹುಚ್ಚಿಡಿಸಿಕೊಂಡಿದ್ದೇನೆ. ನಿನ್ನ ಕಂಡಾಗ, ಆ ನಿನ್ನ ದೇಹಗಂಧಕ್ಕೆ ಮೂರ್ಚೆ ಹೋಗಿ ಒಂದು ಮಾತು ಆಡದೆ ನಿಂತುಬಿಡುತ್ತಿದ್ದೆ. ಆ ಗಂಧಕ್ಕೆ ನರ ನರಗಳು ಬಿಗಿಯುತ್ತೆ, ಉಸಿರು ಕಟ್ಟಿದಂತ ಬಾಸವಾಗುತ್ತೆ. ಉಸಿರೂ ಆಡದಂತೆ ನಿನ್ನ ಅಪ್ಪಿಕೊಂಡು ಸತ್ತು ಹೋಗಿಬಿಡಬೇಕು ಅಂತ ಅನ್ನಿಸುತ್ತೆ. ನಿನ್ನ ಶಾರೀರದ ಪ್ರತೀ ಕಣವನ್ನೂ ನಾನು ಬಯಸುತ್ತಿದ್ದೀನಿ ಕಣೋ! ಶವದ ಕಣ್ಣುಗಳಲ್ಲಿ ನಿನ್ನ ಮುಖವನ್ನ ನೋಡಿಕೊಳ್ಳೋ ನೀನು, ನನ್ನ ಕಣ್ಣುಗಳನ್ನು ನೋಡಲಿಲ್ಲ, ನನ್ನ ಶರೀರವನ್ನೂ ನೋಡಲಿಲ್ಲ"

ಆ ಕಣ್ಣುಗಳನ್ನ ನೋಡುತ್ತಾ ಇದ್ದೆ. ಮೃತ್ಯು ನನ್ನೆದುರಿಗೆ ನಿಂತಿತ್ತು. ಮೃತ್ಯುವಿಗೆ ಮಾತು ಬರುವುದಿಲ್ಲ. ನಾ ಕುಸಿದು ಹೋದೆ. ತಲೆಯನ್ನ ಅವಳ ಕಾಲಡಿಯಲ್ಲಿ ಇಟ್ಟು ನಮಸ್ಕರಿಸತೊಡಗಿದೆ, ನನ್ನ ಕಣ್ಣ ಹನಿಯೊಂದು ಅವಳ ಗೋರಂಟಿ ಹಾಕಿದ ಉಗುರಿಗೆ ತಾಕಿತು. ಅವಳ ಕಣ್ಣೀರು ಅವಳ ಬೆಂಕಿಯಲ್ಲಿ ಶಾಂತವಾಯಿತೆಂದು ನಾ ಭಾವಿಸಿದೆ. ಎಲ್ಲಿಂದಲೋ ಪುರುಷಸೂಕ್ತ ಕೇಳುತ್ತಲ್ಲಿತ್ತು. ಕಡೆಗೆ, ಶಾಂತಿ ಮಂತ್ರ, ಓಂ ಶಾಂತಿ ಶಾಂತಿ ಶಾಂತಿಃ.