ಸೈದ್ಧಾಂತಿಕ ಭೌತವಿಜ್ಞಾನ ಹಾಗು ಅಂತರ್ಶಿಸ್ತೀಯತೆ

ಅಭಿನವ ಚಾತುರ್ಮಾಸಿಕ "ಸುತ್ತುವ ಗ್ರಹಗಳಿಂದ ಚಲಿಸುವ ವಿಗ್ರಹಗಳವರೆಗೆ"ದಲ್ಲಿ ನನ್ನದೊಂದು ಲೇಖನ ಪ್ರಕಟವಾಗಿತ್ತು. ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.












   

ಕಾವ್ಯ ಹಾಗು ಸೈದ್ಧಾಂತಿಕ ಭೌತ ವಿಜ್ಞಾನ ಎರಡರ ಧ್ಯೇಯವೂ ಒಂದೇ, ಸತ್ಯವನ್ನು ಹುಡುಕುವುದು, ಕಟ್ಟುವುದು. ಎರಡರ ಮಾಧ್ಯಮವೂ ಒಂದೇ ಭಾಷೆ. ಒಂದು ಸಾರ್ವತ್ರಿಕ ಸತ್ಯವನ್ನ ವಸ್ತುನಿಷ್ಟ ದೃಷ್ಟಿಕೋನಕ್ಕೊಳಪಡಿಸಿದರೆ ಮತ್ತೊಂದು ವೈಯುಕ್ತಿಕ ನೆಲೆಯಲ್ಲಿ ರೂಪಗೊಳ್ಳುತ್ತದೆ. ಸೈದ್ಧಾಂತಿಕ ಭೌತ ವಿಜ್ಞಾನ ಭಾಷೆಗೆ ತರ್ಕದ ಮಿತಿಯನ್ನು ಹಾಕಿದರೆ, ಕಾವ್ಯ ಆ ಯಾವುದೇ ಮಿತಿಗಳಿಲ್ಲದೆ ಭಾಷೆಯನ್ನ ಉಪಯೋಗಿಸಿಕೊಳ್ಳುವ ಎಲ್ಲಾ ಸಾದ್ಯತೆಗಳನ್ನೂ ತೆರೆದಿಡುತ್ತದೆ. ಎರಡೂ ತೀವ್ರವಾಗಿ ಚಡಪಡಿಸುವಂತೆ ಮಾಡುವ ಸೃಜನಾತ್ಮಕ ಕ್ರಿಯೆ. ಇವೆರಡರ ನಡುವೆ ಅದೆಷ್ಟೇ ಸಾಮ್ಯ ಗಳಿದ್ದರೂ ದೃಷ್ಟಿಕೋನದಲ್ಲಿ ಇವೆರಡರದು ವಿರುದ್ಢಾರ್ಥಕವಾದ ನೋಟ. ಈ ಲೇಖನದಲ್ಲಿರುವುದು ನನ್ನ ವೈಯುಕ್ತಿಕ ಅಭಿಪ್ರಾಯ. ನನ್ನ ಮಟ್ಟಿಗೆ ಸೈದ್ಧಾಂತಿಕೆ ಭೌತ ವಿಜ್ಞಾನ ಒಂದು ಮಾಧ್ಯಮ. ಕಾವ್ಯಾವೂ ಒಂದು ಮಾಧ್ಯಮ. ಎರಡೂ ಸತ್ಯವನ್ನು ಹುಡುಕುವ ಮಾಧ್ಯಮ. ಈ ಎರಡೂ ಮಾದ್ಯಮಗಳಲ್ಲಿ ಸ್ವಲ್ಪ ಮಟ್ಟಿಗೆ ಕೆಲಸ ಮಾಡಿರುವುದರಿಂದ ಹೇಗೆ ಒಂದು ಮಾಧ್ಯಮ ಮತ್ತೊಂದನ್ನು ಪ್ರಭಾವಿಸುತ್ತದೆ. ಈ ಎರಡೂ ಮಾಧ್ಯಮಗಳಲ್ಲಿನ ಸಾಮ್ಯತೆಗಳೇನು, ಭಿನ್ನತೆಗಳೇನು, ಹಾಗು ಇವೆರೆಡೂ ಅನುಸಂಧಾನಗೊಳ್ಳಬಹುದಾದ ಸಾದ್ಯತೆ ಹಾಗು ಆ ಸಾದ್ಯತೆಯಲ್ಲಿನ ಸೃಜನಾತ್ಮಕ ಸಂತೃಪ್ತಿಯ ಬಗೆಗೆ ಒಂದಿಷ್ಟು ಮಾತು.

ಸೈದ್ಧಾಂತಿಕೆ ಭೌತ ವಿಜ್ಞಾನದ ನಡೆ ಎಂತಹದ್ದು? ವಿಜ್ಞಾನದ ಉದ್ದೇಶವೇ ಕಾಣುವ ಕಾಣಬಲ್ಲ ಭೌತಜಗತ್ತನ್ನು, ಈ ಭೌತ ಜಗತ್ತಿನ ಕ್ರಿಯೆಗಳಿಗೆ ಕಾರ್ಯ ಕಾರಣದ ವಿವರಗಳನ್ನೊದಗಿಸುವುದು. ಇಲ್ಲಿ ಕಾಣುವ ಎಂದುದನ್ನು ವಿಶಾಲವಾದ ವೈಜ್ಞಾನಿಕವಾಗಿ ದೃಷ್ಟಿಕೋನವನ್ನಾಗಿ ಪರಿಗಣಿಸಬೇಕು. ಗಣಿತದ ತಾರ್ಕಿಕ ನಿಯಮಗಳ ಮೇಲೆ ಸಿದ್ಧಾಂತಗಳನ್ನು ಕಟ್ಟಿ ಅದರ ಮುಖೇನ ಇದಮಿತ್ತಂ ಎಂಬ ವಿಶ್ವಾತ್ಮಕ ಸತ್ಯವನ್ನು ಗುರುತಿಸುವುದು. ಹಾಗಾಗಿ ಇಲ್ಲಿ ವೈಯುಕ್ತಿಕ ಸತ್ಯಗಳಿಲ್ಲ. ಒಬ್ಬರಿಗೆ ಒಂದು ರೀತಿ ಅರ್ಥವಾಗಿದೆ ಮತ್ತೊಬ್ಬರಿಗೆ ಮತ್ತೊಂದು ರೀತಿ ಅರ್ಥವಾಗಿದೆ ಎನ್ನುವಂತಿಲ್ಲ. ಇಷ್ಟಕ್ಕೂ natural language , ಅದು ಯಾವುದೇ ಭಾಷೆಯಾಗಿರಲಲಿ , ವಿಜ್ಞಾನದ ಯಾವುದೇ ಸಂಗತಿಯನ್ನೂ ಅದರ ಆಳದ ಸಂಗತಿಗಳನ್ನು ತಿಳಿಸಲು ಸಾದ್ಯವಿಲ್ಲವೆಂದೇ ಹಲವರ ಅಭಿಪ್ರಾಯ. ಇಲ್ಲಿ ಅರ್ಥವಾಯಿತು ಎಂದರೆ ಅದರ ಭಾಷೆಯಾದ ಗಣಿತದ ಸಮೀಕರಣಗಳ ಮುಖೇನವೇ ಅರ್ಥಕ್ಕೆ ದಕ್ಕಬೇಕು. ಅದುವೇ ಅದರೆ ಭಾಷೆ. ಹಾಗೆಂದು ಗಣಿತೀಯ ಭಾಷೆಯಲ್ಲಿ ವ್ಯಕ್ತವಾದದ್ದೆಲ್ಲವೂ ಸೈದ್ಧಾಂತಿಕೆ ಭೌತ ವಿಜ್ಞಾನದ ಪರಿದಿಯೊಳಗೆ ಬರುವುದಿಲ್ಲ. ಸಿದ್ಧಾಂತವು ಪ್ರಯೋಗಕ್ಕೆ ತೆರೆದುಕೊಳ್ಳಬೇಕು. ಕಡೆಗೆ ಪ್ರಯೋಗಾಲಯದಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧಾರವಾಗುವುದು.

ಇನ್ನು ಸೈದ್ಧಾಂತಿಕೆ ಭೌತ ವಿಜ್ಞಾನದಲ್ಲಿನ ಸಂಶೋಧನೆಗೆ ಬಹಳಷ್ಟು ಪ್ರಯತ್ನಪೂರ್ವಕವಾಗಿ ತೊಡಗಿಸಿಕೊಳ್ಳಬೇಕು. ಸುಮಾರು ವರ್ಷಗಳ ಕ್ರಮ ಬದ್ಧ ಅಧ್ಯಯನ ಅಭ್ಯಾಸ ಸಾಗಬೇಕು. ಕಲಿತ ನಂತರ ಸಂಶೋಧನೆಗಿಳಿಯಲು ಸಾಕಷ್ಟು ಪ್ರಯತ್ನ ಬೇಕು. ನೂರಾರು ವರ್ಷಗಳಲ್ಲಿ ನಡೆದ ಸಂಶೋದನೆಗಳನ್ನು ಅಭ್ಯಸಿಸಿ, ಹಾಗೆ ಅಧ್ಯಯನ ಮಾಡುವಾಗ ಇಲ್ಲಿ ಏನೋ ಸರಿ ಇಲ್ಲ, ಏನೋ ಅಪೂರ್ಣವಾಗಿದೆ ಎಂದೆನಿಸಿ ಅದನ್ನ ಸರಿಯಾಗಿಸೋಣ ಎಂದು ಹೊರಟಾಗ ಅದೊಂದು ಸಂಶೋಧನಾ ಕೃತಿಯಾಗುತ್ತೆ. ಇದು ವಿಜ್ಞಾನದ ಕ್ರಮ.

ಕಾವ್ಯದ್ದಾದರೆ, ಅದಕ್ಕೆ ಜಗತ್ತಿನ ಮಿತಿಯಿಲ್ಲ. ಯಾವುದರ ಮಿತಿಯೂ ಇಲ್ಲ. ಸರ್ವ ತಂತ್ರ ಸ್ವತಂತ್ರ. ಏನನ್ನು ಬೇಕಾದರೂ ಕಾಣಬಲ್ಲದು. ನಿಂತ ನೆಲೆಯಲ್ಲೆ ಬ್ರಹ್ಮಾಂಡವನ್ನೆಲ್ಲಾ ಅಲೆಯಬಲ್ಲದು. ಮನುಷ್ಯ ಪ್ರಜ್ಞೆ ಏರಬಲ್ಲ ಎಲ್ಲಾ ಸಾಧ್ಯತೆಗಳನ್ನೂ ಒಂದೇ ನೆಗೆತಕ್ಕೆ ಏರಿ ಕಂಡು ಇಳಿಯಬಲ್ಲದು. ಕಾವ್ಯದ ಭಾಷೆಗೆ ತರ್ಕದ ಹಂಗಿಲ್ಲ. ಇಡೀ ಜಗತ್ತಿನಲ್ಲಿ ಇದೇ ಕಾವ್ಯ, ಇದು ಮಾತ್ರ ಕಾವ್ಯ ಎಂದು ಯಾರಿಂದಲೂ ಹೇಳಲು ಸಾಧ್ಯವಾಗಿಲ್ಲ. ಹೀಗೇ ಇರಬೇಕೆಂದು ಹೇಳಿದಾಗೆಲ್ಲಾ ಅದನ್ನ ಮುರಿದು ಕಟ್ಟಿದ್ದು ಕಾವ್ಯ. ಯಾವ ಕಾರ್ಯ ಕಾರಣದ ಹಂಗೂ ಇಲ್ಲ. ಇಲ್ಲಿ ಎಲ್ಲವೂ ಸಾಧ್ಯ. ಸಾರ್ವತ್ರಿಕ ಅರ್ಥ ಎಂಬುದೇ ಕಾವ್ಯದ ಮೊದಲ ಸೋಲು. ಓದಿದ ವ್ಯಕ್ತಿಗೆ ಓದಿದ ಕ್ಷಣಕ್ಕೆ ದಕ್ಕಿದ್ದೇ ಅದರ ಅರ್ಥ. ಕಾವ್ಯಕ್ಕೆ ಪ್ರತಿಯೊಂದು ಓದಿನಲ್ಲು ಹುಟ್ಟು. ಪ್ರತೀ ಓದಿನಲ್ಲೂ ವಿಸ್ತಾರಗೊಳ್ಳುವ, ಹಾಗೆ ವಿಸ್ತಾರಗೊಳ್ಳುತ್ತಲೇ ಅರ್ಥ ವೈವಧ್ಯವನ್ನು ಕಾಣಬಲ್ಲ ಶಕ್ತಿ ಕಾವ್ಯದ್ದು. ಹೀಗೆ ತೀರ ವೈಯುಕ್ತಿಕ ವೆಂದೆನಿಸುತ್ತಲೇ ಅದೆಷ್ಟೋ ವಿಶ್ವಾತ್ಮಕ ಸತ್ಯಗಳನ್ನ ತೆರೆದಿಡಬಲ್ಲದ್ದು. ಮನುಷ್ಯ ಭಾಷೆಯ ಎಲ್ಲಾ ಮಿತಿಗಳನ್ನು ದಾಟಬಲ್ಲ ಶಕ್ತ ಮಾದ್ಯಮ ಕಾವ್ಯ.

ಮೊದಲ ಓದಿಗೆಲ್ಲ ಸ್ಪಷ್ಟವಾಗಿರುತ್ತೆ, ಈ ಎರಡೂ ಮಾದ್ಯಮಗಳು ವಿರುದ್ಧ ಧೃವಗಳಲ್ಲಿ ನಿಲ್ಲುವವು. ಯಾವುದೇ ಕಾರಣಕ್ಕೂ ಒಂದು ಮಾದ್ಯಮ ಮತ್ತೊಂದು ಮಾದ್ಯಮಕ್ಕಿಂತ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ. ಎರಡೂ ಜಗದ ಸತ್ಯವನ್ನೂ ಕಾಣಿಸಬಲ್ಲ ಸೃಜನಾತ್ಮಕವಾದ ಬಹು ಶಕ್ತ ಮಾಧ್ಯಮಗಳು. ಭಾಷೆಯ ತಾರ್ಕಿಕ ನೆಲೆಯಲ್ಲಿ ಕಾಣಲು ಸಾದ್ಯವಾಗುವುದೆಲ್ಲವನ್ನೂ ವಿಜ್ಞಾನ ತೆರೆದು ತೋರಿಸುತ್ತದೆ. ಹಾಗೆ ತೋರಿಸುತ್ತಲೇ ಅದು ಭಾಷೆಯ ಮಿತಿಯನ್ನೂ ತಿಳಿಸುತ್ತದೆ. ಹಾಗೆ ಭಾಷೆಯ ಮಿತಿ ಕಂಡ ಹಂತದಲ್ಲಿ ಅಲ್ಲಿಂದ ಮುಂದೆ ಸಾಗಲಿಕ್ಕೆ ಕಾವ್ಯ ದಾರಿ ಮಾಡಿಕೊಡುತ್ತದೆ. ಭಾಷೆಯ ಮಿತಿ ಕಾಣಲಿಕ್ಕೆ, ತರ್ಕದ ಮಿತಿ ಕಾಣಲಿಕ್ಕೆ ವಿಜ್ಞಾನ ಅನುವು ಮಾಡಿಕೊಡುತ್ತೆ. ಅಲ್ಲಿಂದ ಕಾವ್ಯದ ಕ್ರಿಯೆ ಆರಂಭವಾಗುತ್ತೆ. ಹಾಗೆ ಆರಂಭವಾದ ಕಾವ್ಯ ಅತಾರ್ಕಿಕ ಭಾಷೆಯ ನೆಲೆಗಳಲ್ಲಿ ಅಲೆಯುತ್ತಿರಬೇಕಾದರೆ ಕಳೆದು ಹೋಗುವ ಸಂಭವವೆದುರಾದಾಗ ಮತ್ತೆ ತರ್ಕದ ನೆಲೆಗೆ ಹಿಂತಿರುಗುತ್ತದೆ. ಹೀಗೆ ಹೀಗೆ ಕಾವ್ಯ ಹಾಗು ವಿಜ್ಞಾನ, ತಾರ್ಕಿಕ ಭಾಷೆ ಹಾಗು ಅತಾರ್ಕಿಕ ಭಾಷೆ ಎರಡೂ dialectical ಆಗಿ ಸಂವಾದ ನಡೆಸುತ್ತಾ ಸಾಗಿ ಅನುಸಂಧಾನಗೊಳ್ಳುತ್ತೆ.

ಸೈದ್ಧಾಂತಿಕೆ ಭೌತ ವಿಜ್ಞಾನ ಹಾಗು ಕಾವ್ಯದಲ್ಲಿನ ಸೃಜನಾತ್ಮಕ ಕ್ರಿಯಲ್ಲಿನ ಸಾಮ್ಯತೆ ಹಾಗು ಪ್ರಭಾವ ಹೇಗಿರುತ್ತೆ. ಓದುವ ಕ್ರಮವನ್ನ ಗಮನಿಸೋಣ. ಸೈದ್ಧಾಂತಿಕೆ ಭೌತ ವಿಜ್ಞಾನದ ಓದು ಹೇಗಿರುತ್ತೆ. ಮೊಟ್ಟ ಮೊದಲನೆಯದಾಗಿ ಉತ್ತಮವಾದ ಓದು ಯಾವುದೇ ಪೂರ್ವಾಗ್ರಹಗಳಿಲ್ಲದೆ ನಾವೇ ಸ್ವತಃ ಕೂತು ಒಂದೊಂದೇ ಸಮೀಕರಣಗಳನ್ನು ಅದರ ಪ್ರತೀ ತಾರ್ಕಿಕ ಹಂತಗಳನ್ನೂ ಬಹಳ ಎಚ್ಚರಿಕೆಯಿಂದ ಬಿಡಿಸಬೇಕು ಆಗಲೇ ಆ ಸಮೀಕರಣ, ಸಿದ್ಧಾಂತ ನಮಗೆ ದಕ್ಕುವುದು. ಹಾಗೆ ದಕ್ಕುವುದೆಂದರೆ, ಹಾಗೆ ಓದುವಾಗ ಒಂದು ಹೊಳಹು ದಕ್ಕುತ್ತೆ. ಆಹಾ ಎನ್ನುವ ಸಂದರ್ಭ. ಮೈ ರೋಮಾಂಚನಗಳ್ಳುವ ಸಂದರ್ಭ. ಹಾಗಾಗಿ ಒಂದು ವಿಷಯದ ಬಗೆಗೆ ಯಾರು ಏನೇ ಹೇಳಿದರೂ ಅವರು ಅದೆಷ್ಟೇ ದೊಡ್ಡವರಾಗಿರಲಿ ಅವರ ಹೇಳಿಕೆಗಳನ್ನ ನಂಬುವುದಿಲ್ಲ. ಅಪನಂಬಿಕೆಯಿಂದಲೇ ಇಲ್ಲಿನ ಓದು ಆರಂಭವಾಗುವುದು. ತೀವ್ರವಾದ ವಿಮರ್ಷಾತ್ಮಕ ನೋಟದಲ್ಲೇ ಎಲ್ಲವನ್ನೂ ನೋಡುವುದು. ಅಂದರೆ, ಇಲ್ಲಿ ಸ್ವತಃ ನಾವೇ ಕೂತು ಓದಿ ಬಿಡಿಸಿದಾಗ ದಕ್ಕುವುದಿದೆಯಲ್ಲ ಅದಕ್ಕಾಗಿಯೇ ಎಲ್ಲ ಪ್ರಯತ್ನಗಳು.

ಕಾವ್ಯದ ಓದೂ ಇದೇ ರೀತಿ. ಒಂದು ಕಾವ್ಯವನ್ನು ಯಾರಾದರೂ ವಿವರಿಸಿದರೆ ತೃಪ್ತಿಯಿಲ್ಲ. ಅದನ್ನೂ ನಾವೇ ಓದಬೇಕು. ಒಂದೊಂದೇ ಪದ, ಒಂದೊಂದೇ ಸಾಲು ಬಿಡಿಸಿ ಬಿಡಿಸಿ ಓದಬೇಕು. ಹಾಗೆ ಓದುತ್ತಲೇ ಕಟ್ಟಬೇಕು. ಇಲ್ಲಿ ಇಡಿಯಾಗಿ ಹಾಗು ಬಿಡಿಯಾಗಿ ಒದುವ ಕ್ರಮದ ಬಗೆ ಮುಖ್ಯವಾದದ್ದು. ಮೊದಲಿಗೆ ಒಂದೇ ವೇಗದಲ್ಲಿ ಒಂದು ಕವನವನ್ನ ಓದುತ್ತೇವೆ. ಆಗ ಅದರಲ್ಲಿ ಆ ಕವನದಲ್ಲಿ ಏನೋ ಅಡಗಿದೆ ಎಂದೆನಿಸುತ್ತೆ. ನಂತರ ಒಂದೊಂದೇ ಪ್ಯಾರ, ಒಂದೊಂದೇ ಸಾಲು, ಪದ ಹೀಗೆ ಬಿಡಿಸಿ ಬಿಡಿಸಿ ಒದುತ್ತೇವೆ. ಈ ಪದವು ಇಲ್ಲೇಕೆ, ಇದರ ಅರ್ಥ ಈ ಸಾಲಿನಲ್ಲಿ ಏನು? ಈ ಸಾಲಿನಿಂದ ಮತ್ತೊಂದು ಸಾಲಿಗೆ ಹೋದಾಗ ಆಗುವ ಅರ್ಥಪಲ್ಲಟಗಳೇನು, ಹೀಗೆ ಬಿಡಿ ಬಿಡಿ ಒದು ಸಾಗುತ್ತೆ. ಮತ್ತೆ ಇಡಿಯಾಗಿ ಓದುತ್ತೇವೆ. ಅದಾದ ನಂತರ ಕವನ ಕಟ್ಟಿಕೊಡುವ ಅರ್ಥದ ವಿಚಾರ. ಕವನ ಇಂದಿನ ವಿಚಾರಗಳ ಮಟ್ಟಿಗೆ, ಅದರ ವಸ್ತುವಿನ ಮಟ್ಟಿಗೆ ಎಲ್ಲಿ ಸಲ್ಲುತ್ತೆ, ನಂತರ ಹಾಗೆ ಅದು ವಸ್ತುವಿನ ಬಗೆಗೆ ಧ್ವನಿಸಿದ ಧ್ವನಿ ವೈಯುಕ್ತಿಕ ಅನುಭವದ ನೆಲೆಯಲ್ಲಿ ಇಟ್ಟು ನೋಡಿದಾಗ ಎಲ್ಲಿ ಸಲ್ಲುತ್ತೆ, ಒಟ್ಟೂ ಮನುಷ್ಯ ಇತಿಹಾಸದ ಅನುಭವದ ಹಿನ್ನಲೆಯಲ್ಲಿ ವಿಶ್ಲೇಷಿಸಿದಾಗ ಇದರ ನೆಲೆಯೇನು ಎನ್ನುವ ವಿಶ್ಲೇಷಣೆ ನಡೆಯುತ್ತದೆ. ಈ ಎರಡೂ ಓದಿನಲ್ಲಿ ನಿರಂತರವಾಗಿ ಅರ್ಥ ಕಟ್ಟುತ್ತಾ ಸಾಗಿರುತ್ತೆ.

ಈ ಇಡಿಯಾದ ಹಾಗು ಬಿಡಿಯಾದ ನೋಟ ಸೈದ್ಧಾಂತಿಕೆ ಭೌತ ವಿಜ್ಞಾನದ ಮಟ್ಟಿಗೆ ಬಹುವಾಗಿ ಸಹಾಯ ಮಾಡುತ್ತದೆ. ಸೈದ್ಧಾಂತಿಕೆ ಭೌತ ವಿಜ್ಞಾನ ಬಹು ವಿಶಾಲವಾದ ಕಾರ್ಯ ಕ್ಷೇತ್ರ. ಹಾಗಾಗಿ ಇಲ್ಲಿನ ಒಂದು ಕ್ಷೇತ್ರದಲ್ಲಿ ಪರಿಣಿತನಾಗುವುದಕ್ಕೆ ಇಡೀ ಜೀವಮಾನವೇ ಬೇಕು. ಹಾಗೆ ಒಂದು ಕ್ಷೇತ್ರದ ಪ್ರಾವೀಣ್ಯತೆಯನ್ನು ಸಾಧಿಸುವುದು, ಆ ಕ್ಷೇತ್ರಕ್ಕೆ ಸಂಬಂಧಿಸಿದ ಒಂದು ಪ್ರಶ್ನೆಯ ಬಗೆಗೆ ಸಂಶೋಧಿಸುವುದು ಬಿಡಿಯಾದ ಓದಿನಂತಾದರೆ, ಈ ಕ್ಷೇತ್ರ, ಈ ಪ್ರಶ್ನೆ ಒಟ್ಟು ಸೈದ್ಧಾಂತಿಕೆ ಭೌತ ವಿಜ್ಞಾನ ಜ್ಞಾನ ಶಾಖೆಯಲ್ಲಿ ಇದರ ನೆಲೆಯೇನು ಎಂಬುದೂ, ಇಡೀ ಸೈದ್ಧಾಂತಿಕೆ ಭೌತ ವಿಜ್ಞಾನವದ ಮೇಲ್ಪದರದ ಓದು ಇಡಿಯಾದ ಓದಿಗೆ ಸಂಬಂಧಿಸಿದ್ದು. ಈ ಸಂಶೋಧನಾ ಕ್ಷೇತ್ರ ಪ್ರಕೃತಿಯ ಬಗೆಗೆ ಏನನ್ನು ಹೇಳುತ್ತಿದೆ ಎಂಬುದು ಇಡಿಯಾದ ಸಂಗತಿಯಾದರೆ, ಅದರಲ್ಲಿನ ಒಂದೊಂದು ಪ್ರಶ್ನೆಯೂ ಬಿಡಿಯಾದ ನೋಟಕ್ಕೆ ಸಂಬಂಧಿಸಿದ್ದು. ಒಟ್ಟು ಸತ್ಯದ ಅನಾವರಣಕ್ಕೆ ಇಡಿಯಾದ ಹಾಗು ಬಿಡಿಯಾದ ಎರಡೂ ನೋಟಗಳೂ ಬಹು ಮುಖ್ಯ.

ಒಂದು ಉತ್ತಮ ಕವಿತೆಯನ್ನು ಓದಿದಾಗ ಅದಕ್ಕೆ ಪ್ರತಿಕ್ರಿಯಿಸುವುದು ಹೇಗೆ. ಕೆಲವರು ವಿಮರ್ಶಿಸುತ್ತಾರೆ. ಮತ್ತೊಂದು ಬಗೆಯೆಂದರೆ, ಓದಿದ ಕವನ ಒಂದು ತಲ್ಲಣವನ್ನು ಸೃಷ್ಟಿಸುತ್ತೆ. ಏಳಲಾರದೇ ಕೂರಲಾರದಂತೆ ಮಾಡುವ ತಲ್ಲಣವದು. ಈ ಕಾವ್ಯಲೋಕದ ದೃಷ್ಟಿಯಲ್ಲಿ ಏನೋ ಪೂರ್ಣವಾಗಿಲ್ಲ. ಮತ್ತೇನೊ ಇರಬೇಕಿತ್ತು. ಈ ನೋಟಕ್ಕೆ ಭಿನ್ನವಾದೊಂದು ನೋಟ ಸಾದ್ಯ. ಆ ತಲ್ಲಣದಲ್ಲಿ ಓದಿದ ಕಾವ್ಯದಿಂದ ಪ್ರೇರೇಪಿತವಾಗಿ ಜೀವನಾನುಭವವು ಸೇರಿ ಮತ್ತೊಂದು ಕಾವ್ಯ ರೂಪಗೊಳ್ಳುತ್ತೆ. ಕವಿತೆಯ ಓದಿಗೆ ಪ್ರತಿಕ್ರಿಯೆಯಾಗಿ ಮತ್ತೊಂದು ಕವನವೇ ರೂಪಗೊಳ್ಳುತ್ತೆ. ನಮ್ಮ ಕಾವ್ಯದ ಓದು ಒಳಗಿಳಿದಂತೆಲ್ಲ ಅದಕ್ಕೆ ಪ್ರತಿಕ್ರಿಯೆಯಾಗಿ, ಅದರ ದೃಷ್ಟಿಕೋನಕ್ಕೆ ಪ್ರತಿಕ್ರಿಯಿಸುವ ರೀತಿಯಲ್ಲಿ ಮಗದೊಂದು ಸೃಷ್ಟಿಕ್ರಿಯೆ ನಡೆದಿರುತ್ತೆ. ಸೈದ್ಧಾಂತಿಕೆ ಭೌತ ವಿಜ್ಞಾನದಲ್ಲೂ ಇದೇ ರೀತಿಯಲ್ಲಿ ಸೃಜನಾತ್ಮಕ ಪ್ರತಿಕ್ರಿಯೆ ರೂಪಗೊಳ್ಳುವುದು. ಒಂದು ಸಂಶೋಧನಾ ಲೇಖನವನ್ನೂ ಓದಿದಾಗ ಅದರಲ್ಲಿ ಏನೋ ಸರಿ ಇಲ್ಲ ಅಥವಾ ಇದನ್ನು ಮುಂದುವರಿಸಲು ಮಾರ್ಗಗಳಿವೆ. ಇದು ಹೀಗಲ್ಲ ಎಂತಲೂ, ಅಥವಾ ಆ ಲೇಖನದಲ್ಲಿನ ಪ್ರಶ್ನೆ ಮಗದೊಂದು ಪ್ರಶ್ನೆಯನ್ನೇ ಕೇಳುವಂತೆ ಪ್ರೇರೇಪಿಸುತ್ತದೆ. ಉತ್ತರ ಕಾಣಲು ಹೊರಟಾಗ ಅದು ಸಂಶೋಧನಾ ಕೃತಿಯಾಗಿರುತ್ತದೆ. ಕಾವ್ಯ ಹಾಗು ಸೈದ್ಧಾಂತಿಕೆ ಭೌತ ವಿಜ್ಞಾನ ಎರಡರಲ್ಲೂ ನಾವು ಆರಂಭಿಸಿದ ಪ್ರಶ್ನೆಗೇ ಉತ್ತರ ಕಂಡುಕೊಂಡೆವು ಎನ್ನುವ ಹಾಗಿಲ್ಲ. ಎರಡರಲ್ಲೂ ಅದೆಷ್ಟೋ ಬಾರಿ ಬೇರೇನೋ ಉತ್ತರ ಹೊಳೆದು ಅದಕ್ಕೆ ಪೂರಕ ಪ್ರಶ್ನೆಯನ್ನು ನಿರ್ಮಿಸುವಂತೆ ಮಾಡುತ್ತದೆ. ಪ್ರಾಮಾಣಿಕ ಅನ್ವೇಷಣೆಯಲ್ಲಿ ಕೇಳಿದ ಪ್ರಶ್ನೆಗಿಂತ ಉತ್ತಮವಾದ ಉತ್ತರಗಳು ದೊರಕುವುದೇ ಹೆಚ್ಚು. ಈ ಮಾತು ಕಾವ್ಯಕ್ಕೂ ಸಲ್ಲುತ್ತೆ, ಸೈದ್ಧಾಂತಿಕೆ ಭೌತ ವಿಜ್ಞಾನಕ್ಕೂ ಸಲ್ಲುತ್ತೆ. ಸೃಷ್ಟಿಕ್ರಿಯಯ, ಸೃಜನಾತ್ಮಕತೆಯ ಎಲ್ಲಾ ಸ್ಥಿತಿಗಳನ್ನು ಈ ಎರಡೂ ಮಾಧ್ಯಮಗಳಲ್ಲಿ ಅನುಭವಿಸಲು ಸಾದ್ಯವಿದೆ.


ಸೈದ್ಧಾಂತಿಕೆ ಭೌತ ವಿಜ್ಞಾನದಲ್ಲಿನ ಸಂಶೋಧನೆ ಕಾವ್ಯ ವಸ್ತುಗಳಾಗಬಲ್ಲವೆ, ಕಾವ್ಯಕ್ಕೆ ಪ್ರಭಾವಿಸಬಲ್ಲವೆ ಎಂದರೆ ಹೌದು ಬಹುವಾಗಿ ಪ್ರಭಾವಿಸಬಲ್ಲದು ಎನ್ನುವುದು ನನ್ನ ಉತ್ತರ. ನನ್ನ ಸಂಶೋಧನಾ ಕಾರ್ಯಕ್ಷೇತ್ರ ಕ್ವಾಂಟಂ ಸಿದ್ಧಾಂತದ ಮೂಲಭೂತ ಪ್ರಶ್ನೆಗಳ ಕುರಿತಾದದ್ದು. ಹಾಗಾಗಿ ಅಲ್ಲಿ ನಾನು ಕೇಳುವ ಪ್ರಶ್ನೆಗಳನ್ನು ಕವನದಲ್ಲೂ ಕೇಳಬಹುದಾಗಿರುವವುಗಳು. ಅದೆಷ್ಟೋ ವೇಳೆ ಅದೆಷ್ಟೇ ಪ್ರಶ್ನೆಗಳನ್ನು ಏಕಕಾಲದಲ್ಲಿ ಕಾವ್ಯದ ಮಾಧ್ಯಮದಲ್ಲೂ, ಸೈದ್ಧಾಂತಿಕೆ ಭೌತ ವಿಜ್ಞಾನದ ಮಾಧ್ಯಮದಲ್ಲೂ ಚಿಂತಿಸುತ್ತಿರುವುದು ಸಾದ್ಯವಿದೆ. ಕ್ವಾಂಟಂ ಸಿದ್ಧಾಂತವು ಜಗತ್ತಿನ ಬಾಗಶಃ ಎಲ್ಲಾ ಸಂಗತಿಗಳನ್ನೂ ವಿವರಿಸುವಷ್ಟು ಶಕ್ತವಾದ ಸಿದ್ಧಾಂತವಾದರೂ, ಇಲ್ಲಿನವರೆಗೂ ಇದರ ನಿಯಮಗಳ ವಿರುದ್ಧ ಯಾವುದೇ ಪ್ರಯೋಗವೂ ಸಿದ್ಧವಾಗಿಲ್ಲವಾದರೂ, ಇದರ ಮುಖೇನ ಜಗತ್ತನ್ನ ಕಂಡಾಗ ಇದು ಜಗತ್ತಿನ ಬಗೆಗೆ, ಅದರ ಸತ್ಯತೆ( Reality)ಯ ಬಗೆಗೆ ಎಲ್ಲರಿಗೂ ಸಮ್ಮತವಾಗುವಂತಹ ಉತ್ತರ ಇಲ್ಲಿಯವರೆಗೂ ದಕ್ಕಿಲ್ಲ. ಹಾಗಾಗಿ ಅಲ್ಲಿ ನಾವು ಕೇಳುವ ಪ್ರಶ್ನೆಗಳಾದರೋ ಎಂತಹದ್ದು? ಯಾವುದನ್ನು ನಾವು ಸತ್ಯ ಎಂದು ಕರೆಯಬೇಕು? ಈ ಸಿದ್ಧಾಂತದ ಮುಖೇನ ಕಂಡ ನೋಟಗಳು ಸತ್ಯವೆ ಅಥವಾ ಅದಕ್ಕೂ ಮೀರಿದ ಆಳದ ಸತ್ಯಗಳಿವೆಯೆ? ಅವು ಇದ್ದರೆ ಅದು ಹೇಗಿರುತ್ತದೆ? ಹೇಗಿರಬಲ್ಲದು, ನೋಡುವುದಕ್ಕೂ ನೋಡಲ್ಪಟ್ಟಿದ್ದಕ್ಕೂ ಏನಾದರೂ ಸಂಬಂಧವಿದೆಯೆ? ನೋಡಲ್ಪಟ್ಟಿದ್ದು ನೋಟದಿಂದ ಸ್ವತಂತ್ರ್ಯವೆ? ಕಾರ್ಯ ಕಾರಣವೆಂದರೇನು? ಕ್ವಾಂಟಂ ಸಿದ್ಧಾಂತವನ್ನು ಒಂದು ಭಾಷೆಯೆಂದು ಪರಿಗಣಿಸಿದಾಗ ಈ ಭಾಷೆಯ ಮುಖೇನ ಕಂಡ ಸತ್ಯಗಳು ಜಗದ ಸತ್ಯಗಳೇ ಅಥವಾ ಭಾಷೆ ನಿರ್ಮಿಸಿದ ಸತ್ಯಗಳೆ. ಈ ಎಲ್ಲಾ ಪ್ರಶ್ನೆಗಳನ್ನೂ ಬಹಳ ತಾರ್ಕಿಕವಾಗಿ, ಗಣಿತೀಯ ಕ್ರಮಗಳನುಸರಿಸಿ, ಹಲವೊಮ್ಮೆ ಸಾವಿರಾರು ಕೋಟಿ ವೆಚ್ಚದ ಪ್ರಯೋಗಗಳನ್ನು ಮಾಡಿ ಉತ್ತರ ಕಾಣಲು ಪ್ರಯತ್ನಿಸುತ್ತಾರೆ. ಇನ್ನು ಕಾಲದ ಪ್ರಶ್ನೆಯನ್ನೂ ತಂದರಂತೂ ಮುಗಿದೇ ಹೋಯಿತು. ಉತ್ತರಗಳಿಲ್ಲದ ಸಾವಿರ ಪ್ರಶ್ನೆಗಳು. ಇದೆಲ್ಲದರ ಒಟ್ಟೂ ದೃಷ್ಟಿಕೋನವೆಂದರೆ ಜಗತ್ತು ಆಳದಲ್ಲಿ ನಮಗೆ ನಮ್ಮ ಇಂದ್ರಿಯಗಳಿಗೆ ಕಾಣುವ ಪ್ರಪಂಚಕ್ಕಿಂತ ತೀರಾ ಭಿನ್ನವಿದೆ ಎಂಬುದು. ಇದರ ಜೊತೆ ಜೊತೆಯಲ್ಲಿಯೇ ಕ್ವಾಂಟಂ ಸಿದ್ಧಾಂತದಲ್ಲಿ ಅನಿಶ್ಚಿತತೆಯೆಂಬುದು ಮೂಲಭೂತವಾದದ್ದು. ಇದರ ಜೊತೆಯಲ್ಲೇ ನನಗೆ ಹಲವು ಬಾರಿ ಬೆಚ್ಚಿಬೀಳುವಂತೆ ಮಾಡುವುದು ಇಲ್ಲಿನ ಸಂಕೀರ್ಣತೆ ಹಾಗು ಸರಳತೆಗಳ ಸಮ್ಮಿಲನ. ಒಮ್ಮೊಮ್ಮೆ ಬಹಳ ಸರಳವೆನ್ನಿಸುವ ಕೆಲವೇ ಕೆಲವು ನಿಯಮಗಳಿಂದ ಇಡೀ ಸಿದ್ಧಾಂತ ರೂಪಗೊಂಡು ಹಲವು ಸ್ಥರಗಳಲ್ಲಿ ಜಗತ್ತನ್ನು ವಿವರಿಸಲು ಶಕ್ತವಾದರೆ ಅದೇ ಕೆಲವೊಮ್ಮೆ ಬಹು ಸ್ಥರದ ಸಂಕೀರ್ಣ ಸಿದ್ಧಾಂತದ ಅವಶ್ಯವಾಗುತ್ತದೆ.

ಇತ್ತೀಚೆಗೆ ನಮ್ಮ ಕ್ಷೇತ್ರದಲ್ಲಿನ ಖ್ಯಾತ ಸಂಶೋದಕರಾದ "N D Mermin" ಎಂಬುವವರು "Making Better Sense of Quantum Mechanics" ಎಂಬ ಒಂದು ಲೇಖನದಲ್ಲಿನ ಈ ಮಾತುಗಳನ್ನು ಗಮನಿಸಿದರೆ ಸೈದ್ಧಾಂತಿಕ ಭೌತ ವಿಜ್ಞಾನಕ್ಕೂ ಕಾವ್ಯದ ಸಂದರ್ಭದಲ್ಲಿ ಕೇಳುವ ಪ್ರಶ್ನೆಗಳಿಗೂ ಇರುವ ಸಾಮ್ಯ ಕಾಣುತ್ತೆ. "There is mind and there is a world. Quantum mechanics has taught us that we cannot understand what we are talking about without paying attention to both. What links the contents of my mind to the world that induces them is the meaning I construct for my experience. If I had to design a coat of arms for QBism, it would display three words:“Mind, meaning, world” has no poetry in it. And what physicists’ understanding of quantum mechanics has lacked for ninety years is any hint of poetry."

ಈ ಪ್ತ್ರಶ್ನೆಗಳ ಬಗೆಗೆ ಇನ್ನೂ ಸ್ಪಷ್ಟ ರೂಪ ನೀಡಲಿಕ್ಕಾಗಿ ಕೆಳಗೆ ಮುಖ್ಯ ಸಂಶೋಧಕರ ಮಾತುಗಳನ್ನು ಉಲ್ಲೇಖಿಸುತ್ತಿದ್ದೇನೆ.

* " Physics is to be regarded not so much as the study of something a priori given,but as the development of methods for ordering and surveying human experience" --- Niels Bohr

* "Einstein said that the problem of the Now worried him seriously. He explained that the experience of the Now means something special for man, something essentially different from the past and the future, but that this important difference does not and cannot occur within physics. That this experience cannot be grasped by science seemed to him a matter of painful but inevitable resignation." - - - Rudolf Carnap

* " Space and time are modes in which we think and not conditions in which we live" --- Einstein

* "The conception of the objective reality of the elementary particles has thus evaporated in a curious way, not into the fog of some new, obscure, or not yet understood reality concept, but into the transparent clarity of a mathematics that represents no longer the behavior of the elementary particles but rather our knowledge of this behavior" - - - Werner Heisenberg

* " Quantum mechanics forbids statements about what really exists — statements about the object. It deals only with the object-subject relation. Although this holds,after all, for any description of nature, it appears to hold in a much more radical and far-reaching sense in quantum mechanics"--- Erwin Schrodinger

ಈ ಎಲ್ಲಾ ಪ್ರಶ್ನೆಗಳೂ ಹಲವು ವೇಳೆ ಬದುಕಿನ ಮೂಲಭೂತ ಪ್ರಶ್ನೆಗಳೆಂದೇ ಅನ್ನಿಸುತ್ತವೆ. ಮನುಷ್ಯ ಸಂದರ್ಭದಲ್ಲಿ ಇದೇ ಪ್ರಶ್ನೆಗಳು ಎದುರಾಗುತ್ತೆ ಹಾಗು ಉತ್ತರ ಕಾಣಲು ಹೊರಟಾಗ ಕಾವ್ಯ ಹಾಗು ಸೈದ್ಧಾಂತಿಕೆ ಭೌತ ವಿಜ್ಞಾನ ಎಂಬ ಎರಡೂ ಮಾದ್ಯಮಗಳು ಒಂದಕ್ಕೊಂದು ಪೂರಕವಾಗಿ ಉತ್ತರಗಳೆಡೆಗೆ ಸಾಗುತ್ತವೆ.

ನನ್ನ ಕ್ವಾಂಟಂ ಸಿದ್ಧಾಂತದ ಸಂಶೋದನೆಯಲ್ಲಿ ಕಾಡಿದ ಹಲವು ಪ್ರಶ್ನೆಗಳು ಕೆಲವೊಮ್ಮೆ ನನ್ನ ಕವನಗಳಲ್ಲಿ ನುಸುಳಿವೆ. ಇಲ್ಲಿ ಕೆಲವು ಆ ರೀತಿ ಪ್ರಭಾವಿಸಿದ ಕವನಗಳನ್ನ ನೀಡುತ್ತಿದ್ದೇನೆ. ಇವುಗಳು ಹಿಂದೆ ನನ್ನ ಬ್ಲಾಗಿನಲ್ಲಿ ಪ್ರಕಟಗೊಂಡವುಗಳು. ---

೦೧. ****** 
ಅದೊಂದು ಜ್ಯಾಮಿತೀಯ ಆಕಾರ
ಹಿಗ್ಗಿಸಿ ಕುಗ್ಗಿಸಿ ತುಳಿಯಲೂ ಬಹುದು
ಉಳಿಯುವುದಿದೆಯಲ್ಲ
ಅದು ಮತ್ತೆ ಒಂದು ಜ್ಯಾಮಿತೀಯ ಆಕಾರ


ಸ್ವರೂಪ ಬಹಳ ಮುಖ್ಯ
ಇಲ್ಲದಿದ್ದಾಗ ಉಳಿಯುವುದೇನು ಬರೀ ಲೆಕ್ಕಾಚಾರ
ಅದೂ ಸಹ ಹಲವೊಮ್ಮೆ ರಚನೆಯ ಒಳಗೇ ಬರತಕ್ಕದ್ದು
ಹಾಗಾಗಿ ಆಕಾರ ಮುಖ್ಯ
ಇದ್ದರೆ, ತಂದು ಕೂರಿಸುವುದೆಲ್ಲವನ್ನು
ಅದಕ್ಕೊಂದು ಜಾಗ ಬೇಕೇ ಬೇಕು
ಆಕಾರ ನಿರ್ಧಾರವಾದಾಗ ಉಳಿದದ್ದೆಲ್ಲವೂ ಜುಜುಬಿ
ಯಾವ ಅಬ್ಬೇಪಾರಿ ಸಹ ಬಣ್ಣ ಹಚ್ಚಬಲ್ಲ
ರಂಗವನ್ನು ನಿರ್ಮಿಸಬಲ್ಲ ನಾಟಕವಾಡಬಲ್ಲ
ಎರಡು ವಾಕ್ಯಗಳ ನಡುವಿನ ಬಿಡುವಲ್ಲಿ
ರಂಗಮಂದಿರದಲ್ಲದೆಷ್ಟು ನಿಶ್ಯಬ್ದವಡಗಿರುತ್ತೆ
ಅದು ಬೇಕಾದದ್ದು

ಕಡಿದ ಮೀನಿನ ಪ್ಲಾಸ್ಟಿಕ್ ಬಲೆಯ ದಾರಗಳು
ಅದೆಷ್ಟೋ ಬಾರಿ ಕಡಲ ತಡಿಯಲ್ಲಿ ಬಂದು ಬಿದ್ದಿರುತ್ತದಲ್ಲ
ಹಾಗೇ ಇದೂ ಸಹ
ಬಲೆ ನೇಯುವುದು ಅವನ ಹೊಟ್ಟೆ ಪಾಡಾದರೆ
ಮೀನಿಡಿಯುವುದು ಇವನದು
ತಿನ್ನುವುದು ನನ್ನದು

ಸ್ವರೂಪ ಹರಿಯುವುದಿಲ್ಲವೆಂದೇನೂ ಅಲ್ಲ
ರೂಪಾಂತರವನ್ನು ಸಹಿಸುವ ತಂತಿಜಾಲ
ಉಳಿದಿರುತ್ತದೆಯಲ್ಲ ಅದು ಸಲಹಿಬಿಡುತ್ತೆ
ಹಾಗಾಗಿ ನಾನು ಬದುಕಿದ್ದೇನೆ.


ಶಬ್ದವನ್ನ ಕೂಗಿ ಕರೆದೆ
ಬಂದಾಗ
ಗುರುತು ಸಿಕ್ಕಲಿಲ್ಲ.

ಪದಗಳೆಂಬೊ ಚಿಹ್ನೆಗಳ ರಾಶಿಯೊಳಗೆ ಹುದುಗಿ
ಮುಟ್ಟಿನೋಡಿದರೆ
ಸ್ಪರ್ಶಕ್ಕೆ ಸಿಕ್ಕಿದೆಯೆಂದೆನಿಸುತ್ತೆ
ಸ್ಪರ್ಶವೂ ಶಬ್ದದ ರೂಪವಾಗಿದ್ದರೆ?
ಪ್ರಶ್ನೆ ಭಯ ಹುಟ್ಟಿಸುತ್ತೆ
ಪ್ರಶ್ನೆ-ಭಯ ಎರೆಡೂ ಶಬ್ದಗಳೇ ಅಲ್ಲವ
ಅಂದುಕೊಂಡಾಗ
ಉತ್ತರವೂ ಶಬ್ದವಾಗಿ ಬಿಟ್ಟೀತಲ್ಲಾ
ಎಂದು ಗೊಂದಲವಾಗುತ್ತೆ.

ಯಾಕೋ
ಅಕ್ಷರವನ್ನು ಬರೆದುಬಿಟ್ಟೆ
ಹಲವೊಮ್ಮೆ ತಿದ್ದಿದೆ ಕೂಡ
ನನ್ನ ನೆನಪಿನಲ್ಲೀಗ ಬರೀ ಅಕ್ಷರಗಳೇ ಕೂತಿವೆ.

ವ್ಯಾಕರಣವಿಲ್ಲದ ಆಕಾಶ
ಭೂಮಿಯೆಂಬೋ ವಾಕ್ಯವನ್ನ ಕಟ್ಟಿತು
ವ್ಯಾಕರಣವನ್ನೇ ಕಟ್ಟಿ ಹಾಕೋಣವೆಂದಾಗ
ನನ್ನ ಹುಡುಗಿ ಅಡ್ಡ ಬಂದಳು

ಸ್ವ-ಕೇಂದ್ರಿತ ವೃತ್ತಾಂತದ ಗೋಳು
ಕಾಲದ ಮರು ಚರಿತ್ರೆ
ಅರ್ಥದ ಋಣ ಭಾರದ ಶೂಲಕ್ಕೆ
ಕಾರಣಕ್ಕೆ ಮೊರೆಹೋಗಲಾರೆ

ಆತ್ಮಕತೆಯ ಕಡೆಯ ಸಾಲನ್ನ
ಶಬ್ದಕ್ಕೆ ಅಗ್ನಿಸ್ಪರ್ಶಿಸುತ್ತಾ
ಆರಂಭಿಸುತ್ತಿದ್ದೇನೆ

ಸುಟ್ಟ ಶಬ್ದದ ಬೂದಿಯನ್ನ
ವಿಭೂತಿಯನ್ನಾಗಿಸಿ
ಬೆತ್ತಲೆ ಮೈಗೆಲ್ಲ ಬಳಿದುಕೊಂಡು
ದೇವರ ರೂಪವಾಗಿ
ವ್ಯಾಕರಣ ನಿಯಮಗಳ ನಿಯಾಮಕನಾಗಿ
ಸೃಷ್ಟಿಯಾಗಿ, ಸ್ಥಿತಿಯಾಗಿ, ಲಯವಾಗಿ........

೦೩. ಒಂದು Quantum ಕವಿತೆ
ಅಯ್ಯಾ, ಬೆಕ್ಕು
ಕಾಡಿದ್ದು ನಿಮ್ಮನ್ನಷ್ಟೇ ಅಲ್ಲ.
ಒಳಗೆ ಮರಿಗಳನ್ನಿಟ್ಟು
ನಾವಿಲ್ಲದ ವೇಳೆ ನೋಡಿ
ಈಗೇನಾದರು ಮಾಡಬೇಕಲ್ಲ
ಅವಕ್ಕೇನು ತಿಳಿಯುತ್ತೆ
ಪರಚಲಿಕ್ಕೆ ಬರುವುದು
ಎದುರಿಗೋದಾಗ

ಅಯ್ಯಾ, ಬೆಕ್ಕು
ಕಾಡಿದ್ದು ನಿಮ್ಮನ್ನಷ್ಟೇ ಅಲ್ಲ.
ಇಲ್ಲದಿದ್ದಾಗ ಮರಿಗಳಿನ್ನಿಟ್ಟು
ಎಲ್ಲೋ ದೂರದಲ್ಲಿದ್ದೆನೆಂದು
ಮರಿ ಕಿರುಚಿದ್ದು ಕೇಳಲಿಲ್ಲವೆಂಬುದೇನೋ
ನಿಜ
ಗೊತ್ತಿತ್ತೇನು ? ಹಿಂತಿರುಗುವವರೆಗೂ
ಬಂದಾಗ ಆದದ್ದು ಗಾಬರಿ

ಈ ಮರಿಗಳೊಂದು ಆಟಿಕೆ
ಮನೆಯ ಮಾಲಕನ ಮಕ್ಕಳಿಗೆ
ಕೊಟ್ಟು ಬಂದೆವು
ತಪ್ಪಿಸಿಕೊಂಡರೆ ಸಾಕಿತ್ತು
ಊರ ತುಂಬ ನಾಯಿಗಳು
ಬೆಕ್ಕಿನ ಮರಿಗಳು ಕಾಣಲಿಲ್ಲ
ಮಕ್ಕಳು ದಿನಕ್ಕೊಂದು
ಕತೆ ಕಟ್ಟಿ ಹೇಳುತ್ತಿದ್ದವು
ಹೊಸ ಅವತಾರಗಳಲ್ಲಿ



ಅಭಿನವ ಚಾತುರ್ಮಾಸಿಕ:

"ಕನ್ನಡದಲ್ಲಿ ಭಿನ್ನ ಆಶಯ ಮತ್ತು ವಿಭಿನ್ನ ಸರೂಪದ ಪತ್ರಿಕೆ. ಪ್ರತಿ ಸಂಚಿಕೆ: ಯಾರಾದರೊಬ್ಬ ಸಾಹಿತಿ/ಚಿಂತಕ/ಕಲಾವಿದನ ಒಟ್ಟು ಕೆಲಸ ಅಥವಾ ಯಾವುದಾದರೊಂದು ಸಮಸ್ಯೆ/ ಕಲಾ ಪ್ರಕಾರ/ ಮಾಧ್ಯಮವನ್ನು ಕೇಂದ್ರವಾಗಿರಿಸಿಕೊಂಡಿರುತ್ತದೆ. ಪರ್ಯಾಯ ಚಿಂತನೆ, ಸಿನಿಮಾ, ಪರಿಸರ, ದೇವನೂರ ಮಹಾದೇವ, ಪು.ತಿ.ನ, ಷೋಯಿಂಕಾ, ಸಂಗೀತ, ದೇಶೀ ದರ್ಶನಗಳು, ಹಿಂಸೆ, ನೋಮ್ ಚಾಮ್ ಸ್ಕಿ ,ಪಾರ್ಟಿಷನ್, ಕೆ.ಟಿ. ಶಿವಪ್ರಸಾದ್, ಮಲೆಯಾಳಂ ಕವಿತೆ, ಮಹಾರಾಜ ಕಾಲೇಜು, ತಮಿಳು ಕತೆಗಳು, ಜಿ.ಪಿ.ರಾಜರತ್ನಂ, ಕನ್ನಡ ಭಾಷಣಗಳು, ಸಮಗಾರ ಭೀಮವ್ವ, ಕಪ್ಪೆ ಅರಭಟ್ಟನ ಶಾಸನ, ವಿಮುಕ್ತ(ತೆಲುಗು ಕಥಾ ಜಗತ್ತಿನ ಜೊತೆಗೊಂದು ಮಾತುಕಥೆ), ಗುಲಾಬಿ ಟಾಕೀಸ್(ಕಥೆಯಿಂದ ಕಥೆಗೆ), ಅನೇಕ(ತಾಳಮದ್ದಲೆ-ಒಂದು ಶಬ್ಧಚಿತ್ರ),ಸಂಪತ್ತಿನೊಳಗೊಬ್ಬ ಸಂತ(ಎಂ.ವೈ.ಘೋರ್ಪಡೆ ಕುರಿತು),ಚಿತ್ರ ಪಟ ರಾಮಾಯಣ, ಭಕ್ತಿಯ ಬೆರಗು, ಭಕ್ತಿ ಕಂಪಿತ, ಮಾತು ತಲೆ ಎತ್ತಿದ ಬಗೆ, ನನ್ನದೊಂದು ಕನಸಿದೆ ಮುಂತಾದ ಸಂಚಿಕೆಗಳು ಹೊರಬಂದಿವೆ.
(ವಾರ್ಷಿಕ ಚಂದಾ ರೂ.೩೫೦/- ಸಂಸ್ಥೆಗಳಿಗೆ ೫೦೦/-)

ಸಂಪರ್ಕ ವಿಳಾಸ:
ಅಭಿನವ, ೧೭/೧೮-೨, ಮೊದಲನೆ ಮುಖ್ಯರಸ್ತೆ,
ಮಾರೇನಹಳ್ಳಿ, ವಿಜಯನಗರ, ಬೆಂಗಳೂರು
ದೂರವಾಣಿ: ೯೪೪೮೮೦೪೯೦೫
email: abhinavaravi@gmail.com

online shopping: https://store.ruthumana.com/product/abhinava-chaturmasika/ 

                     --------------------------------------------------------------
                     --------------------------------------------------------------