ಬಾಂಗ್ಲಾ ದಿನಗಳು : ಅಲೆಮಾರಿಯ ಆರಂಭ


ಅಮ್ಮನಿಗೆ ಕರೆ ಮಾಡಿದಾಗ ಹೇಳಿದ್ದು ಮತ್ತೆ ನಿಮ್ಮ ಪ್ರಯಾಣವ, ಎಲ್ಲಾ ಸಿದ್ದವಾಯ್ತ, ಇರೋ ಮನೇ ಬಿಡಲಿಕ್ಕೆ, ಹೊಸ ಮನೆ ಹುಡುಕಲಿಕ್ಕೆ, ಹೊಸ ಊರಿಗೆ ಹೋಗಲಿಕ್ಕೆ, ಒಳ್ಳೇ ಅಲೆಮಾರಿ ಬದುಕು ನಿಂದು ಅಂತ. ಕೇಳಿದಾಗ ನಮ್ಮೂರಲ್ಲಿ ಹಿಂದೆ ನಡೆಯುತ್ತಿದ್ದ ಒಂದು ಸಂಗತಿ ನೆನಪಾಯಿತು. ನಮ್ಮೂರಲ್ಲಿ ಮುಂಚೆ ನಾನು ಚಿಕ್ಕವನಾಗಿದ್ದಾಗ ಹೀಗೆ ಊರಿಗೆ ಅಲೆಮಾರಿಗಳು ಬರುತ್ತಿದ್ದರು. ಏನೋ ಕೆಲಸ ಇಟ್ಟುಕೊಂಡು. ಉದಾಹರಣೆ, ಪಾತ್ರೆ ಮಾರುವುದು, ಸರಿ ಮಾಡುವುದು, ಬಡಗಿಗಳು, ಇಲ್ಲಾ ದೇವರ ವಿಗ್ರಹ ಮಾಡುವವರು. ಇವರಲ್ಲದೆ ಡ್ಯಾನ್ಸ್ ಮಾಡೋರೂ ಹೀಗೆ ಬೇರೆ ಬೇರೆ ಕೆಲಸದ ನಿಮಿತ್ತವಾಗಿ ಹಳ್ಳಿಗೆ ಬರುತ್ತಿದ್ದರು. ಒಂದು ಮೂರು ದಿನದಿಂದ ಒಂದು ವಾರಗಳ ಕಾಲ ಇಡೀ ಕುಟುಂಬ, ಒಂದು ಹತ್ತು ಜನ ಇರುತ್ತಿದ್ದರು. ಬಂದ ಊರಲ್ಲಿ ಕೆಲಸ ಎಲ್ಲಾ ಆಯಿತು, ಇನ್ನೇನೂ ಇಲ್ಲಿ ಗಿಟ್ಟುವುದಿಲ್ಲ ಅಂತ ತಿಳಿದ ನಂತರ ಊರು ಬಿಟ್ಟು ಹೋಗುತ್ತಿದ್ದರು. ಪಕ್ಕಾ ಅಲೆಮಾರಿ ಬದುಕು. ಆಗ ನನಗೆ ತಿಳಿಯುತ್ತಿರಲಿಲ್ಲ. ಈಗ ಅನ್ನಿಸುತ್ತೆ, ಅವರಿಗೆ ಅವರದು ಅಂತ ಒಂದು ಊರು, ಮನೆ ಎಲ್ಲಾ ಇರುತ್ತದ ಅಂತ. ಈ ಎಲ್ಲಾ ಆಲೋಚನೆಗಳು ಬಂದದ್ದು ಅಮ್ಮ ನನ್ನನ್ನೂ ಒಬ್ಬ ಅಲೆಮಾರಿ ಎಂದು ಕರೆದಾಗ. ನನಗೆ ಯಾವುದೇ ಸ್ವಂತ ಮನೆ ಊರು ಇಲ್ಲವಾದರೂ, ಹೇಳಿಕೊಳ್ಳಲಿಕ್ಕೆ , ಅರ್ಜಿಗಳಲ್ಲಿ ಬರೆಯಲಿಕ್ಕೆ ಖಾಯಂ ವಿಳಾಸ ಅಂತೂ ಒಂದಿದೆಯಲ್ಲ ಎಂದೆನ್ನಿಸಿ, ಅಮ್ಮ ಅಲೆಮಾರಿಯೆಂದು ಕರೆದದ್ದು ಹಿತವೆನಿಸಿ ಈ ಅಲೆಮಾರಿತನದ ಆಯ್ಕಯಲ್ಲಿ ಕಂಡ, ಕಾಣುವ ಅನುಭವಗಳನ್ನ ಧಾಖಲಿಸಬೇಕೆನಿಸಿತು.

ನನ್ನ ಈ ಅನುಭವಗಳನ್ನು ಬರೆಯ ಹೊರಟಾಗ ಯಾವಾಗಲೂ ಕಾಡುವಂತೆ, ನನ್ನ ಅನುಭವಗಳನ್ನ ಯಾಕೆ ಹಂಚಿಕೋಬೇಕು, ಯಾಕೆ ಬರೆಯಬೇಕು ಎಂದು ಮತ್ತೇ ಮತ್ತೇ ಕಾಡಿದ್ದಿದೆ. ಈ ಊರಿಂದ ಊರಿಗೆ ತಿರುಗಬೇಕಾದ ಸಂದರ್ಭದಲ್ಲಿ ಬದುಕಿನ ಕುರಿತಾದ ಒಂದಿಷ್ಟು ದ್ವಂದ್ವಗಳು ಕಾಡಿದಾಗ, ಅವುಗಳಿಗೆ ಉತ್ತರಗಳನ್ನ ಕಂಡುಕೊಳ್ಳುವ ಸಾಧ್ಯತೆಯಲ್ಲಿ ಈ ಬರಹ ರೂಪಗೊಂಡಿತು.
 
ಈ ರೀತಿಯ ಅಲೆಮಾರಿ ಬದುಕು , ನಮ್ಮದೇ ನಿರ್ಧಾರವಾಗಿತ್ತು. ಮೇಲೆ ಹೇಳಿದಷ್ಟು ನಾವು ಅಲೆಮಾರಿಗಳಲ್ಲದಿದ್ದರೂ, ಒಂದು ಊರಲ್ಲಿ ಈಗ ಆರು ತಿಂಗಳಿಂದ ಒಂದು ವರ್ಷ ಇರುವುದು ಎಂದು ತೀರ್ಮಾನವಾಗಿತ್ತು. ಮದ್ರಾಸಿನಲ್ಲೆ ಎರೆಡು ವರ್ಷವಿದ್ದದ್ದು. ಅಲೆಮಾರಿತನದ ಆಯ್ಕೆ ಅಂತಿಮ ತೀರ್ಮಾನವಲ್ಲದಿದ್ದರೂ, ಸದ್ಯದ ತೀರ್ಮಾನವಷ್ಟೆ. ಈ ಅಲೆಮಾರಿತನವು ಅದರದೇ ಆದ ಹೊಸ ಅನುಭವಗಳಿಗೆ ನಮ್ಮನ್ನು ತೆರೆದಿಡುವುದು ಒಂದೆಡೆಯಾದರೆ, ತೀರ ಅನಿಶ್ಚಿತ ಅಪರಿಚಿತ ಪ್ರಪಂಚಕ್ಕೆ ಒಮ್ಮೆಗೇ ನೂಕಿಬಿಡುವಾಗ ಭೀಕರವೆನಿಸುವುದೂ ಉಂಟು. ಈ ಎಲ್ಲವನ್ನೂ ಎದುರಿಸಬೇಕಾದ ಅನಿವಾರ್ಯವೂ ಉಂಟು. ಈ ಘಟ್ಟದಲ್ಲಿ ನಮ್ಮ ಪಯಣ ಸಾಗಿದ್ದು ಮದ್ರಾಸಿನಿಂದ ಕೋಲ್ಕತ್ತಾ ಕಡೆಗೆ.
 
ನನ್ನ ಸಹಚರರೆಲ್ಲಿ ಬಹಳಷ್ಟು ಮಂದಿ ಬೆಂಗಾಲಿಗಳು. ಭಾರತದಲ್ಲಿ ಭೌತಶಾಸ್ತ್ರದಲ್ಲಿ ಸಂಶೋಧನೆಯಲ್ಲಿರುವವರ ಪೈಕಿ ಬೆಂಗಾಲಿಗಳ ಸಂಖ್ಯೆ ಬಹಳ ದೊಡ್ಡದಿದೆ. ಅದಕ್ಕೆ ಅಲ್ಲಿನ ಸಾಂಸ್ಕೃತಿಕ ಕಾರಣಗಳು ಬಹಳಷ್ಟಿವೆ. ಹಾಗಾಗಿ ನನ್ನ ಜೊತೆಗೆ ನನ್ನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರೆಲ್ಲರೂ ಬೆಂಗಾಲಿಗಳು.. ಅವರು ಕೋಲ್ಕತ್ತಾವನ್ನು, ಅಲ್ಲಿನ ಭೌದ್ಧಿಕ ಪ್ರಪಂಚವನ್ನು ಹೊಗಳುವುದನ್ನು ಕಂಡಾಗ ಒಮ್ಮೆಯಾದರೂ ಅಲ್ಲಿ ಇರಬೇಕೆಂದೆನಿಸಿದ್ದು ಸತ್ಯ. ಅದೊಂದೇ ಅಲ್ಲದೆ ನನ್ನ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆಯೂ ಇಲ್ಲ ಬಹಳಷ್ಟು ಮಂದಿಯಿದ್ದಿದ್ದರಿಂದ ಇಲ್ಲಿಗೆ ಹೋಗುವುದೆಂದು ತೀರ್ಮಾನಿಸಿದ್ದು. ನಿರ್ಧರಿಸಿದ ನಂತರ ನನಗೆ ಉದ್ಯೋಗದ ಆಯ್ಕೆ ಪತ್ರ ಬಂದ ನಂತರ ಕೇವಲ ಹತ್ತು ದಿನಗಳು ಮಾತ್ರ ಉಳಿದಿತ್ತು.. ಈ ಹತ್ತು ದಿನಗಳಲ್ಲಿ ಮದ್ರಾಸಿನಿಂದ ಹೊರಟು ಕೋಲ್ಕತ್ತಾ ಸೇರಿ ಅಲ್ಲಿ ಮನೆ ಮಾಡಿ ಎಲ್ಲವನ್ನೂ ಹೊಂದಿಸಬೇಕಿತ್ತು.
 
ಅಲೆಮಾರಿತನದ ಸಾದ್ಯತೆಗೆ ತೆರೆದುಕೊಳ್ಳಬೇಕೆಂದುಕೊಂಡಾಗ ಮೊದಲು ಎದುರಿಸಿದ ಸಂದಿಗ್ಧತೆಯೆಂದರೆ ನಮ್ಮ ಬದುಕಿಗೆ ಅವಶ್ಯವಾದ ವಸ್ತುಗಳೇನು ? ಬೆಂಗಳೂರಿನಿಂದ ಚೆನ್ನೈಗೆ ಬಂದಾಗ, ಅಪ್ಪಟ ಸಂಸಾರಿಯ ಬದುಕಿಗೆ ಸಿದ್ದಗೊಂಡಿದ್ದೆ. ಅಪ್ಪಟ ಸಂಸಾರಿಯ ಎಲ್ಲಾ ಸಾಮಗ್ರಿಗಳೂ ಬೆಂಗಳೂರಿನಿಂದಲೇ ಇಲ್ಲಿಗೆ ಬಂದಿದ್ದವು. ಅಲ್ಲದೆ ಚೈನ್ನೈಗೆ ಬಂದ ಒಂದೇ ದಿನದಲ್ಲಿ ಹೋಗಿ ಟಿ.ವಿ, ಬಟ್ಟೆ ಒಗೆಯೋ ಯಂತ್ರ, ಮಂಚ, ದಿವಾನ ಎಂದು ಮನೆಯಲ್ಲಿ ಜಾಗ ಎಲ್ಲಿದೆ ಎಂದು ಹುಡುಕಬೇಕು ಎನ್ನುವಷ್ಟು ಸಾಮಗ್ರಿಗಳನ್ನ ಜೋಡಿಸಿಟ್ಟುಕೊಂಡದ್ದು. ಸಂಸಾರಿಯೆಂದರೆ ಅಷ್ಟೇ ಅಲ್ಲವ. ಎಲ್ಲರಿಗೂ ತೋರಿಸಬೇಕಲ್ಲವ. ಮನೆಯಲ್ಲಿ ಸಾಮಾನು ಸೇರಿದಷ್ಟೂ ನಾವು ಸುಖೀ ಜೀವಿಗಳಲ್ಲವೆ. ಇದು ಸಮಾಜ ಬರೆದದ್ದು ಅಲ್ಲವ. ಹಾಗಾಗಿ ಮನೆ ತುಂಬಾ ಸಾಮಾನುಗಳೇ, ಸಾಮಾನುಗಳು. ಯಾರೋ ಎಂದೋ ಬರುತ್ತಾರೆಂದು ನಾಲ್ಕು ಹಾಸಿಗೆ, ಒಂದಿಷ್ಟು ಜಮಖಾನ, ಇರುವ ಇಬ್ಬರಿಗೆ ಮತ್ತೇ ಎರಡು ಖುರ್ಚಿ. ಹೀಗೆ ವಿವರಿಸುತ್ತಾ ಹೋದರೆ ಹೋಗುತ್ತಲೇ ಇರುತ್ತದೆ. ಇಷ್ಟ ಪಟ್ಟು, ದುಡ್ಡು ಕೊಟ್ಟು ತಂದಿದ್ದೇನೋ ಆಯಿತು. ಆದರೆ…. ಸ್ವಲ್ಪೇ ದಿನಕ್ಕೆ ಈ ಸಂಸಾರಿಯ ಜೀವನ ಹೊಂದುವುದಿಲ್ಲವೆಂದು ತಿಳಿದು ಹೋಯಿತು. ಟಿ. ವಿ ನಮ್ಮ ಮನೆಗೆ ಮೊದಲ ಶತ್ರುವಾಗಿದ್ದು. ನಾನು ಮನೆಗೆ ಬರುತ್ತಿದ್ದದ್ದೆ, ರಾತ್ರಿ ಏಳು ಗಂಟೆಗೆ. ಬಂದ ನಂತರ ಆಯಾಸವಾಗಿರುತ್ತಿತ್ತು, ತಗೋ ಟಿ. ವಿ. ಮುಂದೆ ಕೂತರೆ ಆಯಿತು. ಬೇಕೋ ಬೇಡವೋ ಸುಮ್ಮನೆ ನೋಡುತ್ತ ಕೂರುವುದು. ಒಂದಾದರೂ ಉಪಯೋಗಕ್ಕೆ ಬರುವ ಕಾರ್ಯಕ್ರಮಗಳಿದ್ದವ, ಇಲ್ಲ. ಟಿ ವಿ ನೋಡುವ ಖುಷಿಯಲ್ಲಿ ಮೃಣನ್ಮಯಿಯೊಂದಿಗೆ ಮಾತನಾಡುವುದೇ ತಪ್ಪಿ ಹೋಯಿತು, ಹಾ ಇದೆ, ಇಲ್ಲ ಅಷ್ಟೆ. ಅವಳೂ ಟಿ ವಿ ನಾನೂ ಟಿ ವಿ. ಇನ್ನು ನಿತ್ಯವೂ ನಾನು ರಾತ್ರಿ ಮಲಗುವ ಮುಂಚೆ ಪುಸ್ತಕ ಓದುತ್ತಿದ್ದ ಹವ್ಯಾಸಕ್ಕೂ ಸ್ಪಷ್ಟವಾಗಿ ಎಳ್ಳು ನೀರು ಬಿಟ್ಟದ್ದಾಯಿತು. ಯಾರಾದರೂ ಏನನ್ನಾದರೂ ಓದಿದೆಯ ಎಂದು ಕೇಳಿದರೆ ಸಿದ್ಧ ಉತ್ತರ. “ಅಯ್ಯೋ ಸಮಯಾನೆ ಇಲ್ಲಪ್ಪ, ಕೆಲಸಾನೇ ಸಾಕಾಗಿ ಹೋಗುತ್ತೆ". ನಿಜ ಹೇಳಬೇಕೆಂದರೆ, ಕೆಲಸ ಅಷ್ಟೋಂದು ಇರುತ್ತಿರಲಿಲ್ಲ. ನಾನೋ post-doctoral fellow ಆಗಿದ್ದದ್ದು. ಮನೆ ಪಕ್ಕವೇ ಸಂಶೋದನಾ ಸಂಸ್ಥೆಯಿದ್ದದ್ದು. ಯಾವುದೇ ಒತ್ತಡಗಳಿರಲಿಲ್ಲ. ಬಿಂದಾಸ್ ಕೆಲಸ. ಆದರೂ ಮನೆಗೆ ಬಂದರೆ ಮಾಡುತ್ತಿದ್ದದ್ದೇನಪ್ಪಾ ಎಂದರೆ ನಯಾ ಪೈಸೆ ಉಪಯೋಗವಿಲ್ಲದ ಕಿತ್ತು ಹೋದ ಧಾರವಾಹಿಗಳನ್ನೋ, ವಾರ್ತೆಗಳನ್ನೋ ನೋಡುತ್ತಿದ್ದದ್ದು. ಅದು ಇಷ್ಟಕ್ಕೇ ನಿಲ್ಲಲಿಲ್ಲ, ತಿಳಿದೋ ತಿಳಿಯದೆಯೊ ನಮ್ಮ ಆಲೋಚನೆಗಳನ್ನ ಈ ಧಾರವಾಹಿಗಳು ನಿಯಂತ್ರಿಸಹೊರಟಿದ್ದವು. ಮಯಿಯೂ ನಾನು ಯಾವ ಕಾರಣಕ್ಕೆ ಕೋಪಿಸಿಕೊಳ್ಳುತ್ತಿದ್ದೇವೆ ಎಂಬ ಅರಿವೇ ಇರುತ್ತಿರಲಿಲ್ಲ. ಊಟ ತಿಂಡಿ ಮಾಡುವಾಗ ಎದುರಿಗೆ ಟಿ ವಿ, ತಿನ್ನುತ್ತಿದ್ದುದರ ಬಗೆಗೆ ಸ್ವಲ್ಪವೂ ಗಮನವಿಲ್ಲ. ಅದೂ ಒಂದು ತಿನ್ನುವ ವಿಧಾನವ? ಈಗ ನೆನೆದರೆ ಹೇಸಿಗೆಯೆನಿಸುತ್ತೆ. ಇಬ್ಬರ ಮನಸ್ಥಿತಿಗಳು ಪೂರ ಕೆಡುತ್ತಿದೆ ಎಂದು ಅರಿವಾದಾಗ, ಈ ಟಿ ವಿ ಅನ್ನು ಬಂದ್ ಮಾಡುವುದೆಂದು ನಿರ್ದರಿದೆವು. ಸಂಸಾರಿಯ ಮೊದಲ ಸರಂಜಾಮು ಹೀಗೆ ಮೂಲೆ ಸೇರಿತು. ನಂತರ ಅದು ಹೇಗೋ ಏನೋ ಅದನ್ನ ಹಳ್ಳಿ ಮನೆಗೆ ಸೇರಿಸಿದ್ದಾಯಿತು. ಹಳ್ಳಿಯಲ್ಲಿ ನಮ್ಮ ಮನೆಯಲ್ಲಿ ಹೊಸ ಟಿ ವಿ ಎಲ್ಲರಿಗೂ ಖುಶಿಯೋ ಖುಶಿ. ಹಳೇ ಟಿ ವಿ ಯನ್ನೂ ಇಟ್ಟುಕೊಂಡು ಎರೆಡರಲ್ಲೂ ಈಗ ನೋಡುವುದು ಸಾದ್ಯವಾದದ್ದಕ್ಕೆ.
 
ಹೀಗೆ ಸಂಸಾರಿಯಾಗಲಿಕ್ಕೆ ತಂದ ಒಂದೊಂದು ವಸ್ತುವಿಗೂ ಒಂದೊಂದು ಕತೆಗಳಿವೆ. ತಾಳ್ಮೆಯಿಂದಿರಿ. ಹೇಳುತ್ತಿರುತ್ತೇನೆ. ಇನ್ನು ಕಬ್ಬಿಣದ ಮಂಚ. ಅದನ್ನ ಹೇಗೆ ಕೊಂಡೆವೋ ದೇವರಿಗೇ ಗೊತ್ತು. ಬರೀ ತಗಡು. ಹೇಗೇ ಮಲಗಿದರೂ ಬೆನ್ನು ನೋವು. ಅದನ್ನೂ ಮೂಲೆಗೆ ಸೇರಿಸುವುದೆಂದು ನಿರ್ದಾರವಾಯಿತು. ಸುಮ್ಮನೆ ಮೂಲೆಯಲ್ಲಿಡಲಿಕ್ಕೆ ಸಾದ್ಯವಿಲ್ಲವಲ್ಲ. ಅದಕ್ಕೊಂದಿಷ್ಟು ಜಾಗ ದಂಡ. ಏನು ಮಾಡುವುದು. ಯಾರಿಗಾದರೂ ಮಾರುವುದ?. ಏನಂತ ಹೇಳಿ ಮಾರುವುದು, ಇದು ಡಬ್ಬ ತಗಡು, ರಾತ್ರಿ ಮಲಗಿದರೆ ಸರಿಯಾಗಿ ಬೆನ್ನು ನೋವು ಬರುತ್ತೆ ಎಂದೇ. ಇಲ್ಲ ಹೇಳದೆ ಮಾರಿದೆವು ಎಂದಿಟ್ಟುಕ್ಕೊಳ್ಳೋಣ, ಮಂಚ ಮುರಿದೋ ಇನ್ನೇನೋ ಆದರೆ, ಕೊಂಡವ ಸುಮ್ಮನಿದ್ದಾನೆಯೆ, ಅದೂ ಮದ್ರಾಸಿನಲ್ಲಿ, ಭಾಷೆ ಗೊತ್ತಿಲ್ಲದ ನಮ್ಮನ್ನ ಸುಮ್ಮನೆ ಬಿಟ್ಟಾರೆಯೆ. ಹೀಗೆಲ್ಲ ಆಲೋಚನೆಗಳು ಸಾಗುತ್ತಿರಬೇಕಾದರೆ, ನನ್ನ ಶ್ರೀಮತಿಗೆ ಅದೆಲ್ಲಿಂದ ಅದೇನು ಆಲೋಚನೆ ಹೊಳೆಯಿತೋ ಏನೋ ಸೀದ ತೆಗೆದುಕೊಂಡು ಹೋಗಿ ಮನೆಯ ಮುಂದೆ ಇಟ್ಟು ಬೇಕಿದ್ದವರು ಉಚಿತವಾಗಿ ತೆಗೆದುಕೊಂಡು ಹೋಗಬಹುದು ಎಂದು ತಮಿಳು ಬಾರದಿದ್ದರೂ, ಅದ್ಯಾವ ಭಾಷೆಯಲ್ಲಿ ಹೇಳಿದಳೋ, ಅವರಿಗೇನರ್ಥವಾಯಿತೋ ಒಟ್ಟಿನಲ್ಲಿ ಮಂಚವನ್ನು ಉಚಿತವಾಗಿ ತೆಗೆದುಕೊಂಡುಹೋಗಿದ್ದರು. ಹೀಗೆ ಮತ್ತೊಂದು ವಸ್ತುವು ಉಚ್ಚಾಟಿಸಲ್ಪಟ್ಟಿತು. ಅಜ್ಜಿ ಮಲಗಲಿಕ್ಕೆ ಅಂತ ಸಣ್ಣ ಮಂಚೆ, ದಿವಾನ ತಂದಿದ್ದದ್ದು. ಅಜ್ಜಿ ಯೇನೋ ಇದ್ದಷ್ಟೂ ದಿವಸ ಮಲಗಿದ್ದರು. ಅಜ್ಜಿ ಹೋದ ಮೇಲೆ ಆ ಒಂದು ಸಣ್ಣ ಮಂಚವೂ ಅನಾಥವಾಗಿಹೋಯಿತು. ಚೆನ್ನೈ ಅಲ್ಲಿ ಬಟ್ಟೆ ಒಗೆಯುವ ಯಂತ್ರ ತೆಗೆದುಕೊಂಡದ್ದು ಬೇಸಿಗೆ ಬಂದ ತಕ್ಷಣ ಅದರ ನಿರುಪಯುಕ್ತತೆ ತಿಳಿದುಹೋಯಿತು. ಎಲ್ಲಿದೆ ನೀರು ಅಷ್ಟೊಂದು. ಯಂತ್ರವೇನೋ ಉಂಟು। ಸ್ವಲ್ಪ ಬಟ್ಟೆ ಒಗೆಯಲಿಕ್ಕೆ ಬಕೀಟುಗಳ ಗಟ್ಟಲೆ ನೀರನ್ನ ತೆಗೆದುಕೊಳ್ಳುತ್ತೆ. ನಮ್ಮ ಮನೆಯಲ್ಲೋ ನಾಲ್ಕು ಸಾರಿ ಮೋಟರ್ ಹಾಕಿದರೂ ನೀರು ಬರುವುದು ಅಷ್ಟೆಕ್ಕಷ್ಟೆ ಒಮ್ಮೆ ಕಾಲು ತೊಳೆದರೆ ಮುಖ ತೊಳೆಯಲ್ಲಿಕ್ಕೆ ಇರುತ್ತಿರಲಿಲ್ಲ. ಹಾಗಾಗಿ ಬಟ್ಟೆ ಒಗೆಯುವ ಯಂತ್ರವೂ ಉಪಯೋಗವಿಲ್ಲದೆ ಹೋಯಿತು.
 
ಈಗ ಒಂದೂರಿಂದ ಮತ್ತೊಂದೂರಿಗೆ ಪಯಣ. ಇಲ್ಲಿಂದ ಅಲ್ಲಿಗೋಗಿ ಮತ್ತೆ ಬದುಕನ್ನ ಕಟ್ಟಿಕೋಬೇಕು. ಹೊಸ ಜಗತ್ತು. ಹೊಸ ಜನ. ಹೊಸ ರೀತಿ ನೀತಿಗಳು. ಒಮ್ಮೆಗೇ ಹೊಂದುವುದಿಲ್ಲ. ಬಹಳಷ್ಟು ಬಾರಿ ಭಯವಾಗುತ್ತಿರುತ್ತದೆ. ಆದರೂ ಆಯ್ಕೆಯಿದು. ಆ ಹೊಸ ಅವತಾರಗಳೇ ಹೊಸ ಅನುಭವಗಳಾಗುವುದು. ಅದೇ ನಂಬಿಕೆ. ಹಾಗಾಗಿಯೆ ಹೊಸದಕ್ಕೆ ಹಾರೈಕೆ. ಮೊದಲನೆಯದಾಗಿ, ಕೋಲ್ಕತ್ತಾಗೆ ಹೋಗಲಿಕ್ಕಿರುವುದೇ ಇನ್ನು ಹತ್ತು ದಿನಗಳು. ಅಲ್ಲಿ ಎಷ್ಟು ಕಾಲ ಇರುತ್ತೇವೆಯೋ ಗೊತ್ತಿಲ್ಲ. ಬಹಳ ಅನಿಶ್ಚಿತತೆಯಿದೆ. ಅಲ್ಲದೆ ಮದ್ರಾಸಿನಿಂದ ಕೋಲ್ಕತ್ತ ಬಹಳ ದೂರ. ಇಲ್ಲಿಂದ ಸಾಮಾನುಗಳನ್ನು ಸಾಗಿಸಲಿಕ್ಕೆ ಆಗುವುದಿಲ್ಲ. ಅದಕ್ಕೆ ಕೊಡುವ ಹಣದಲ್ಲಿ ನಾವದನ್ನು ಕೊಳ್ಳಲೇ ಬಹುದು. ಹೀಗೆ ಅನಿವಾರ್ಯವಾದ ಪ್ರಾಯೋಗಿಕ ಕಷ್ಟಗಳೊಂದಿಗೆ ಸೈದ್ಧಾಂತಿಕವಾಗಿಯು ಹಲವು ಪ್ರಶ್ನೆಗಳಿದ್ದವು. ನಮ್ಮಿಬ್ಬರಿಗೆ ಬೇಕಿರುವುದೆಷ್ಟು? ನಮ್ಮ ಕೈಯಲ್ಲಿ ಕೊಂಡೊಯ್ಯಲಿಕ್ಕೆ ಆಗುವುದೆಷ್ಟೋ ಬಹುಷಃ ಅಷ್ಟು ಮಾತ್ರ ನಮಗೆ ಬೇಕಿರುವುದು. ಉಳಿದದ್ದು ವ್ಯರ್ಥ. ಬೇಕಿಲ್ಲ. ಅನವಶ್ಯ. ಎರಡೇ ಮುಖ್ಯ ಅವಶ್ಯ ವಸ್ತುಗಳು. ಬಟ್ಟೆ,, ಹಾಕಿಕೊಳ್ಳುವ ಹಾಗು ಹೊದೆಯುವವು ಮತ್ತು ಅಡುಗೆ ಮಾಡಿಕೊಳ್ಳಲು ಬೇಕಿರುವ ಕನಿಷ್ಟ ಪಾತ್ರೆ ಸಾಮಾನುಗಳು. ಉಳಿದಂತೆ ಲ್ಯಾಪ್ ಟಾಪ್ ಮತ್ತಿತರೆ ಸಣ್ಣ ಪುಟ್ಟ ಸಾಮಾನುಗಳು. ಮಾನಸಿಕವಾಗಿ ನಿರ್ದರಿಸಿದೆವು. ನಮ್ಮ ಬಳಿ ಎರೆಡು ಟ್ರಾಲಿ ಸೂಟ್ ಕೇಸ್ ಗಳಿದ್ದವು, ಒಂದು ಕೈ ಸೂಟ್ ಕೇಸ್, ಮಿಕ್ಸಿ ಬೇಕೇ ಬೇಕಿದ್ದುದರಿಂದ ಅದರದೊಂದು ಡಬ್ಬ. ಎರಡು ಬ್ಯಾಕ್ ಪ್ಯಾಕ್. ಇಷ್ಟರಲ್ಲಿ ನಮ್ಮ ಮನೆಯ ಸಾಮಾನುಗಳಿಡಿಸಬೇಕು ಎಂದು ನಿರ್ದರಿಸಿಯಾಗಿತ್ತು.
 
ಇನ್ನು ವಸ್ತುಗಳನ್ನ ಜೋಡಿಸುವುದೆಂದು. ತೆಗೆದುಕೊಂಡು ಹೋಗಬೇಕಾದ ವಸ್ತುಗಳೇನು ಎಂಬುದೇನೋ ಸ್ವಲ್ಪ ಮಟ್ಟಿಗೆ ತಿಳಿದಿತ್ತು. ಆದರೆ, ಉಳಿದವುಗಳನ್ನು ಏನು ಮಾಡುವುದು. ಅಷ್ಟೊಂದು ಸಾಮಾನುಗಳು. ಬೇರ್ಪಡಿಸುವುದು ಸುಲಭವಾಗಿರಲಿಲ್ಲ. ಅದೆಷ್ಟು ವಸ್ತುಗಳು, ಅವುಗಳ ಜೊತೆಗಿದ್ದ ನೆನಪುಗಳೂ, ಹಾಗು ಭಾವಗಳು. ಮಯಿಗೆ ಯಾವ ಯಾವ ಕಾರಣಕ್ಕೋ, ಯಾವುದೋ ದಿನದ ವಿಶೇಷವೆಂದೋ, ಯಾವುದೋ ನೆನಪುಗಳಿಗೋ ಎಂಬಂತೆ ಕೊಂಡುತಂದು ಕೊಟ್ಟ ವಸ್ತುಗಳು. ಎಂದಿಗಾದರೂ ಅವಶ್ಯಕ್ಕೆ ಬಂದೀತು ಎಂದು ಶೇಖರಿಸಿಟ್ಟ ವಸ್ತುಗಳು. ಮನೆಗೆ ಯಾರಾದರೂ ಬಂದರೆ ಅವರುಗಳಿಗೆ ಎಂದು ಎಂದು ತಂದಿಟ್ಟ ವಸ್ತುಗಳು. ಹಲವಕ್ಕೆ ಹಣ ವ್ಯಯಿಸಿ ಕೊಂಡವುಗಳು. ಏನನ್ನು ಮಾಡುವುದು. ಎಲ್ಲಕ್ಕಿಂತಲೂ ಮುಖ್ಯವಾಗಿ ಎಷ್ಟೋ ಪುಸ್ತಕಗಳು. ಈಗ ಬೇಡವೆಂದೆನಿಸಿರುವುದನ್ನು ಏನು ಮಾಡುವುದು, ಒಮ್ಮೆಗೇ ತಿಪ್ಪೆಗೆ ಹಾಕಲಿಕ್ಕೆ ಮನಸ್ಸು ಒಪ್ಪುವುದಿಲ್ಲವಲ್ಲ. ಒಂದಿಷ್ಟು ಬೆಲೆ ಬಾಳುವ, ಮಯಿಯ ಮನೆಯಿಂದ ತಂದಿದ್ದ ಪಾತ್ರೆಗಳನ್ನು, ಹಾಗು ಅತೀ ಮುಖ್ಯವಾಗಿ ಕನ್ನಡ ಪುಸ್ತಕಗಳನ್ನು, ಸುಮಾರು ನೂರರ ಮೇಲ್ಪಟ್ಟು ಪುಸ್ತಕಗಳಿರಬಹುದು, ಎಲ್ಲವನ್ನೂ ಶಿವಮೊಗ್ಗದ ಬಸ್ಸಿಗಾಕಿ ಮಯಿಮನೆಗೆ ಕಳುಹಿಸಿದ್ದಾಯಿತು. ಆದರೂ ಇನ್ನೂ ನೂರಕ್ಕೂ ಹೆಚ್ಚು ಪುಸ್ತಕಗಳಿವೆ. ಹಲವಾರು ಆಂಗ್ಲ ಪುಸ್ತಕಗಳು. ರಷ್ಯಾದ ಮೂಲ ಆವೃತ್ತಿಗಳು, ಭಾರತೀಯ ತತ್ವಶಾಸ್ತ್ರ, ಬೌದ್ಧ ತತ್ವಗಳು, ಮಾದ್ವ ಸಿದ್ಧಾಂತ, ಮಾರ್ಕ್ಸನ, ಲೆನಿನರ ಅಷ್ಟೂ ಪುಸ್ತಕಗಳು, ಹೀಗೆ ಅದೆಷ್ಟೋ ಪುಸ್ತಕಗಳು. ಅವಗಳನ್ನು ಎಲ್ಲಿಗೂ ಕಳುಹಿಸಲಿಕ್ಕೆ ಆಗಲಿಲ್ಲ. ಅಂತರ್ಜಾಲದಲ್ಲಿ ಯಾರಾದರೂ ತೆಗೆದುಕೊಂಡು ಹೋಗುತ್ತಾರ, ಯಾವುದಾದರೂ ಉಪಯೋಗಿಸುವ ಗ್ರಂಥಾಲಯವಿದೆಯ ಎಂದು ಅದೆಷ್ಟೋ ಹುಡುಕಿದೆ, ಸಾದ್ಯವಾಗಲಿಲ್ಲ. ನಮಗೆ ಅವಶ್ಯ ಇಲ್ಲಾ ಎಂದು ತಿಳಿದರೂ ಅದನ್ನು ಉಪಯೋಗಿಸಿದ್ಧಕ್ಕಾಗಿ ಅದನ್ನು ಸೂಕ್ತ ಸ್ಥಳಕ್ಕೆ ತಲುಪಿಸಬೇಕಾದ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಕಡೆಗೆ ಸೋತು, ನಮ್ಮದೇ ಸಂಶೋಧನಾ ಸಂಸ್ಥೆಗೇ ಕೊಟ್ಟು ಬಿಡುವುದೆಂದು ತೀರ್ಮಾನಿಸಿದ್ದೆ. ಅದೃಷ್ಟವಷಾತ್ ಚೆನ್ನೈ ಗಣಿತ ಸಂಸ್ಥೆಯ ಸಹೋದ್ಯೋಗಿಯೊಬ್ಬರು ತಾವು ಕಮ್ಯೂನಿಟಿ ಗ್ರಂಥಾಲಯವನ್ನ ನಡೆಸುತ್ತಿರುವುದಾಗಿ, ಎಲ್ಲಾ ಪುಸ್ತಕಗಳನ್ನ ತೆಗೆದುಕೊಳ್ಳುತ್ತೇನೆಂದು ಹೇಳಿದರು. ಒಂದು ದೊಡ್ಡ ಭಾರ ನೀಗಿತು. ಆ ಎಲ್ಲಾ ಪುಸ್ತಕಗಳನ್ನು ಅವರಿಗೆ ಕೊಟ್ಟು ಬಂದು ನೆಮ್ಮದಿಯಿಂದ ಕೂತೆ.
 
ಇನ್ನು ಉಳಿದ ಸಾಮಾನುಗಳು. ಬೀರುವಿನ ತುಂಬಾ ಬಟ್ಟೆಗಳು. ಯಾಕೆ ಕೊಂಡೆ ಎಂದು ಈಗಲೂ ತಿಳಿದಿಲ್ಲ. ಕೊಂಡವುಗಳನ್ನು ಸುಮ್ಮನೆ ಬೀರುವಿನ ತುಂಬಾ ತುಂಬಿಸಿದ್ದದ್ದು. ಮದುವೆಗೆ ಕೊಂಡ ಬಟ್ಟೆಗಳೂ ಸಹ ಸುಮ್ಮನೆ ಬೀರುವಿನ ತುಂಬ. ಅದೆಷ್ಟು ಲೋಲುಪರು ನಾವು ಎಂದೆನಿಸಿತು. ಬೇಸರವಾಯಿತು. ಈ ಅನವಷ್ಯಕ ದುಂದು ವೆಚ್ಚಕ್ಕೆ. ಎಲ್ಲವನ್ನೂ ತೆಗೆದು ಹತ್ತಿರದಲ್ಲೆ ಇದ್ದ ಗೊತ್ತಿದ್ದವರೊಬ್ಬರ ಮನೆಗೆ ನೀಡಿದೆವು. ಅವರೂ, ಅವರಿಗೆ ಗೊತ್ತಿರುವವರು, ಅವಶ್ಯಕತೆಯಿರುವವರಿಗೆ ಕೊಡುತ್ತಾರೆಯೆಂದು ತೀರ್ಮಾನವಾಗಿತ್ತು. ಅದೇ ರೀತಿ ಪಾತ್ರೆಗಳೂ. ಎಲ್ಲವೂ ಅನವಶ್ಯ. ಎಲ್ಲವನ್ನೂ ಅಲ್ಲೇ ವಿಲೇವಾರಿ ಮಾಡಿಬಿಟ್ಟೆವು. ಸಾಕು ಸಾಕಾಗಿ ಹೋಯಿತು. ನಮ್ಮ ಮನಯ ಮಾಲೀಕರೂ ಸಹ ನಿಮಗೆ ಬೇಡವಾದುದ್ದನೆಲ್ಲ ಇಲ್ಲೇ ಬಿಟ್ಟು ಹೋಗಿ ನಾವದನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದರು. ಹಾಗಾಗಿ ಎಲ್ಲವನ್ನೂ ಚೊಕ್ಕ ಮಾಡಿ ಅಲ್ಲೇ ಬಿಟ್ಟೆವು. ಕಡೆಗೆ ತೀರ್ಮಾನಿಸಿದ್ದಷ್ಟನ್ನ ಮಾತ್ರಾ ಜೋಡಿಸಿಟ್ಟುಕೊಂಡಿದ್ದೆವು. ನಾವಿಬ್ಬರೂ ಜೊತೆಯಾಗಿ ತೆಗೆದು ಕೊಂಡು ಹೋಗುವಷ್ಟು. ನಮ್ಮ ಕೈಯಲ್ಲಿ ಎಲ್ಲಾ ಕಡೆಯೂ ಹೊರುವುದಕ್ಕಾಗುತಿರಲಿಲ್ಲವಾದರೂ, ಕನಿಷ್ಟ ಕಾರಿನಲ್ಲಿ ಇಡುವಷ್ಟಾಗಿತ್ತು. ರೈಲ್ವೇ ನಿಲ್ದಾಣದಲ್ಲಿ ಸಹಾಯಕ್ಕೆ ಕೂಲಿಯವರು ಸಿಗುತ್ತಿದ್ದುದರಿಂದ ಸರಿಹೋಯಿತು.
 
ಈ ಅಲೆಮಾರಿ ಬದುಕಿನ ಆರಂಭದ ಪ್ರಯಾಣ ಮಾನಸಿಕವಾಗಿಯೂ, ಬೌದ್ಧಿಕವಾಗಿಯೂ ಹಲವು ಪ್ರಶ್ನೆಗಳಿಂದ ಕಾಡಿತು. ಪಕ್ಕದ ಊರಿಗೇ ಏನನ್ನೂ ಸಾಗಿಸಲಾಗದ ಪರಿಸ್ತಿತಿ ನಮ್ಮದಾಗಿತ್ತು. ಇಂತಹ ಸಂದರ್ಭದಲ್ಲಿ ಅನ್ನಿಸಿದ್ದು. ಸಾವು ನಿಶ್ಚಿತ ಎಂದು ತಿಳಿದಿರುವಾಗ, ಸತ್ತ ನಂತರ ಏನನ್ನೂ ಕೊಂಡೊಯ್ಯಲಿಕ್ಕ ಸಾದ್ಯವಾಗಲಿಲ್ಲವಲ್ಲ ಎಂಬ ಕೊರಗಿನ ಸಮಾಧಾನಕ್ಕ ಒಂದು ಶಾಶ್ವತದ ಚಿತ್ರಣ ಕಟ್ಟಿದ್ದು? ಏನೋ ಒಂದು ಶಾಶ್ವತವಾದದ್ದುಂಟು. ಮಾಡುವುದೆಲ್ಲವುದಕ್ಕೂ ಅದರಲ್ಲಿ ಲೆಕ್ಕವುಂಟು. ಬದುಕಿನಲ್ಲಿ ಸಂಪಾದಿಸಿದ್ದು, ಅದು ಪುಣ್ಯವಿರಲಿ, ಪಾಪವಿರಲಿ ಕೊಂಡೊಯ್ಯಲಿಕ್ಕುಂಟು. ಕಳೆದುಕೊಳ್ಳಬೇಕಾದ ಭೀಕರವಾದ ಶೂನ್ಯಕ್ಕೆ ಸಂವಾದಿಯಾಗಿ ಶಾಶ್ವತದ ಚಿತ್ರಣ ಮೂಡಿದ್ದಿರಬಹುದ? ಗೊತ್ತಿಲ್ಲ. ನನಗೆ ಶಾಶ್ವತದ ಮೇಲೆ ನಂಬಿಕೆ ಇಲ್ಲ. ಸದ್ಯದ ಮಟ್ಟಿಗೆ ನನ್ನ ಶರೀರದ ಹೊರತಾಗಿ ನನ್ನದು ಎಂದು ಇರಬಹುದಾದುದರ ಚಿತ್ರಣ ನನಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಸಾವು ನಿಶ್ಚಿತ ಎಂದು ತಿಳಿದು, ಏನನ್ನೂ ಎಂದಿಗೂ ಎಲ್ಲಿಗೂ ಕೊಂಡು ಹೋಗುವುದಕ್ಕೆ ಆಗುವುದಿಲ್ಲ ಎಂದು ತಿಳಿದಾಗ, ಸ್ವಲ್ಪ ವಿಚಲಿತನಾದೆ. ಲಕ್ಷ್ಮೀಶ ತೋಳ್ಪಾಡಿಯವರು ಭಾಗವತದ ಕುರಿತಾಗಿ ಮಾತನಾಡುವಾಗ, ಆಡಿದ "ಮನುಷ್ಯ ಸಾವು ನಿಶ್ಚಿತ ಎಂದು ತಿಳಿದಾಗ ಮಾಡಲೇಬೇಕಾಗಿರುವುದೇನು" ಎಂಬಂತಹ ಮಾತು ನೆನಪಾಯಿತು. ಸ್ವಲ್ಪ ಬದಲಾಯಿಸಿದರೆ, ಸಾವು ನಿಶ್ಚಿತ ಎಂದು ತಿಳಿದ ಮನುಷ್ಯ ಬದುಕಬೇಕೇಕೆ ಎಂಬ ಪ್ರಶ್ನೆ ಇನ್ನೂ ಮುಖ್ಯವಾಗಿ ಕಾಡಲಾರಂಭಿಸಿತು.
 
ಆರಂಭದಲ್ಲಿ ನಾನೆ ಕೇಳಿಕೊಂಡ, ಬರೆಯಬೇಕೇಕೆ, ಅನುಭವಗಳನ್ನ ಹಂಚಿಕೊಳ್ಳಬೇಕೇಕೆ ಎಂಬ ಪ್ರಶ್ನೆಗೆ ಈ ಸಂದರ್ಭದಲ್ಲಿ ಮೂಡಿದ ಪ್ರಶ್ನೆಗಳ ಜೊತೆಯಲ್ಲೆ ಉತ್ತರ ಕಾಣ ಬಯಸಿದೆ. ಅನುಭವಕ್ಕಿಂತ ಮಿಗಿಲಾದದ್ದು ಏನುಂಟು? ಕಾಣುವುದಕ್ಕಿಂತ ಉಳಿದದ್ದು ಏನಿದೆ? ಹೊತ್ತಯ್ಯೊಲಿಕ್ಕೆ ಆಗದಾದಾಗ ಇರುವುದಲ್ಲದೆ ಇನ್ನೇನುಂಟು. ಇರುವುದರಲ್ಲೆ ಕಾಣಬೇಕಿದೆ. ಈ ಕಾಣುವುದು ಎನ್ನುವ ಪದ ವಿಶೇಷವಾದದ್ದು. ನಾನು ಒಂದು ಬಗೆಯಲ್ಲಿ ಎದುರಿಗಿರುವುದನ್ನು ಕಾಣಬಹುದು, ಮತ್ತೊಬ್ಬರಿಗೆ ಅದು ಬೇರೆಯದೇ ರೀತಿಯಲ್ಲಿ ಕಾಣಬಹುದು. ಈ ಕಾಣುವುದು ಎನ್ನುವ ಪದವನ್ನ ನಾನು ಬಹಳ ಎಚ್ಚರಿಕೆಯಿಂದ ಬಳಸುತ್ತಿದ್ದೇನೆ. ಹೆಚ್ಚಿನ ವಿವರಣೆ ಸಾದ್ಯವಾಗುತಿಲ್ಲ. ಎದುರಿಗಿರುವ ವಸ್ತುವಿನಲ್ಲೆ, ದಕ್ಕಿದ ಅನುಭವದಲ್ಲೆ ನಮಗೆ ಕಾಣುವುದಕ್ಕೊಂದಿದೆ. ಅನುಭವಗಳನ್ನು ಪುನಃ ನಿರ್ಮಿಸಿ ಬರೆಯಹೊರಟಾಗ ಕಾಣುವುದು ಬೇರೆಯದೇ ಹಂತ ತಲುಪಲಿಕ್ಕುಂಟು. ನೋಟ ಸೂಕ್ಷ್ಮವಾದಷ್ಟೂ ಇರುವಿಕೆಯು ಹಲವು ಪದರಗಳಲ್ಲಿ ತೆರೆದುಕೊಳ್ಳತೊಡಗುತ್ತವೆ. ಹೀಗೆ ಕಾಣುವುದೇ ಈ ಅಲೆಮಾರಿತನದ ಉದ್ದೇಶವೋ ಏನೋ ಎಂದು ಆಲೋಚಿಸುತ್ತಾ ಕೋರಮಂಡಲ್ ರೈಲು ಹತ್ತಿ ಕೋಲ್ಕತ್ತಾ ಕಡೆಗೆ ಹೊರಟೆವು.


4 ಕಾಮೆಂಟ್‌ಗಳು:

  1. ಬರಹ ತುಂಬ ಚೆನ್ನಾಗಿದೆ. ಆರ್ದ್ರವಾಗಿದೆ. ಬೆಕೋ ಬೇಡವೋ .. ನಮಗರಿವಿಲ್ಲದಂತೆ ಯಾವ್ಯಾವುದೋ ವಸ್ತುಗಳನ್ನು ಮನೆ ತುಂಬ ತುಂಬಿಸಿಕೊಳ್ಳುತ್ತವೆ - ವಿಚಾರಗಳನ್ನು ಮನದ ತುಂಬ ಕೂಡ ! ಚೆನ್ನೈಯಿಂದ ಕೊಲ್ಕತ್ತಕ್ಕೆ - ಯಾವ ಕಡೆ ಕೆಲಸ? ಎಲ್ಲೇ ಹೋದರೂ ನೀವು ಗೆಲ್ಲುತ್ತೀರಿ - ಯಾಕೆಂದರೆ ನಿಮ್ಮ ಅಸ್ಮಿತಯೇ ಹಾಗೆ. ಒಂದು ಕೊರಗು ನನಗೆ - ನಮ್ಮ ಕಾಲೇಜಿನಲ್ಲಿ ಮಕ್ಕೊಳಡನೆ ನೀವು ಸಂಭಾಷಿಸುವ ಅವಕಾಶ ಸಿಗಲಿಲ್ಲ. ಕೊಲ್ಕತ್ತಾದಿಂದ ಈ ಕಡೆ ಬರುತ್ತೀರೆಂದು ಭಾವಿಸಲೇ?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ರಾಧಾಕೃಷ್ಣ ಸಾರ್. ನಮಸ್ಕಾರಗಳು. ತಮ್ಮ ಕಮೆಂಟು ಓದಿ ಬಹಳ ಖುಶಿಯಾಯಿತು. ಕೋಲ್ಕತ್ತದಲ್ಲಿ Indian Statistical Institute ಅಲ್ಲಿ ಸದ್ಯ ಕೆಲಸ. ಕ್ಷಮಿಸಿ ನನಗೂ ಆ ಬೇಸರವಿದೆ. ಬರಲಿಲ್ಲವಲ್ಲ ಎಂದು. ಖಂಡೀತವಾಗಿಯೂ ಬರುತ್ತೇನೆ.

      ಧನ್ಯವಾದಗಳೊಂದಿಗೆ
      ಅರವಿಂದ

      ಅಳಿಸಿ