................ ಅನ್ನೋ ಸಂಕೀರ್ಣ ಪ್ರತಿಮೆ

           
ನಮ್ಮೂರಲ್ಲಿ ಸತ್ತ ನದಿ ಒಂದಿತ್ತು
ಅದರ ಪಕ್ಕ ಸುಡುಗಾಡೂ ಇತ್ತು
ನಾ ಅಂದುಕೊಂಡಿದ್ದೆ
ಗೋರೀಲಿ ಶವ ಬೆಚ್ಚಗೆ ಮಲಗಿರುತ್ತೆ ಅಂತ
ಬಸುರಿ, ಸತ್ತೋಗಿದ್ಲು
ಅವಳ ಹೊಟ್ಟೇಲಿನ ಮಗು
ಹೂಗುಡೊ ಧ್ವನಿ ಕೇಳಿ
ತತ್ತರಿಸಿ ಕುಸಿದುಬಿಟ್ಟೆ

   
ಜಾದುಗಾರ ಜಾದೂನಿಂದ ಮಗು ಹುಟ್ಟಿಸ್ದ
ಶಾಪಕ್ಕೆ ಸಿಕ್ಕು ಅಲೀತಿದ್ದ ದೇವ ಕನ್ಯೆಯ
ದೇಹದಿಂದ ಬರ್ತಿದ್ದ ಗಂಧಕ್ಕೆ
ಮಾರುಹೋಗೊ ಗುಣಾನ
ಆ ಮಗು ಸಹಜವಾಗೆ ದಕ್ಕಿಸಿಕೊಂಡಿತ್ತು

   
ಗರ್ಭಗುಡೀಲಿ ಸಮಾದಿ ಎದ್ದಿದ್ದೆ ಆಗಿದ್ದು
ಈ ದೇವಾಲಯ ದೇವರು ಇತ್ಯಾದಿ
ನದೀನ ಅಗೆದಾಗ ದೊರೆತಿದ್ದು
ಮುಪ್ಪರಿಯದ ತಲೆ ಬುರುಡೆಗಳು

   
ದೇವರ ಸಾವಿಗೆ ಅಳಲೇ ಬೇಕು ಅನ್ನೋ ನಿನ್ನ ಹಠಕ್ಕೆ
ಅಯ್ಯೋ ಅಂತ ಮರುಕ ಪಡೊ ಸ್ಥಿತೀಲಿ ನಾನಿಲ್ಲ
ಇದು ಊರ ಜಾತ್ರೆ
ಜನಗಳು ಜೈ ಜೈ ಅಂತಿರ್ತಾರೆ
ತೇರೆಳೆದಾಗ ಚಕ್ರಕ್ಕೆ ಬಲಿ ಹಾಕ್ತಿರ್ತಾರೆ
ಗರುಡ ತೇರಿನ ಸುತ್ತ ತಿರುಗಿದ್ನ ಅಂತ ನೋಡ್ತಿರ್ತಾರೆ

   
ಅನುಮಾನ ಎದ್ದು ಬಿಟ್ಟಾಗ
ಮಣ್ಣ ವಾಸನೆ ಪ್ರತೀಕಾರ ತೀರಿಸ್ಕೊಳ್ಳುತ್ತೆ
ಕಾರಣ, ನಿರಾಕರಣ, ಸಕಾರಣ ದ ಅಂಚಲ್ಲಿ
ಹೊಂಚು ಹಾಕೋನ ಬಲೆಗೆ
ಹೆಸರೆ, ರೂಪಾನೆ, ಮತ್ತೊಂದೆ ?

 
ಗತಿಗೆ ನಿಯತಿ ಇಲ್ಲ
ಅಹಂಕಾರಾನೆ ಗತಿ

 
ನಿರ್ಲಿಪ್ತತೆ ಅಂತೀವಲ್ಲ
ಅದಕ್ಕೆ ಒಂದು ರೀತಿಯ ಉತ್ಕಟತೆ ಇರುತ್ತೆ
ಕೃತಿ ನಿರ್ಮಾಣದ ಆಕೃತಿಗೆ                  
ದಿಕ್ಕಾರ ಹೇಳ್ತೀವಲ್ಲ, ಅದಕ್ಕೂ

 
ಜಗತ್ತಿನ ಶೀರ್ಷಿಕೇನ ಅಂಗೈಯಲ್ಲಿ ಕಟ್ಟಿಕೊಂಡ ಸುಡುಗಾಡ ಸಿದ್ಧ
ಜೋಳಿಗೇಲಿ ಹಾಕ್ಕೊಂಡು ತಟ್ಟಂತ ಮಾಯವಾಗಿ ಹೋದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ