ಕತೆ ಸಂಖ್ಯೆ ೩

{ಇಲ್ಲಿನ ಪಾತ್ರಗಳು ಕತೆ ಸಂಖ್ಯೆ ೧ ಹಾಗು ಸಂಖ್ಯೆ ೨ ಇಂದ ಮುಂದುವರೆದದ್ದು. ಈ ಕತೆಗೆ ಆ ಪಾತ್ರಗಳ ನೆನಪು ಅವಶ್ಯ.  ಮೂರೂ ಕತೆಯೂ ಸೇರಿ ಒಂದು ಕತೆಯಾಗಿ, ಅಥವಾ ಮುರೂ ಬೇರೆ ಬೇರೆಯಾಗಿ, ನನ ಬದುಕನ್ನ ಪ್ರವೇಶಿಸಿ ನನ್ನ ಬದುಕಲ್ಲಿ ಲೀನವಾಗಿದೆ. ಈ ಕತೆಯೊಂದಿಗೆ ಈ ಪಾತ್ರಗಳನ್ನ ಅಂತ್ಯಗೊಳಿಸುತ್ತಿದ್ದೇನೆ. ವಂದನೆಗಳು. }



ಅಪ್ಪ ಬೆಳಗ್ಗೇನೆ ಫೋನ್ ಮಾಡಿದ್ರು, ರಘು ಮಾಮ ತೀರ್ಕೊಂಡ್ರು ಅಂತ. ಒಮ್ಮೆಗೆ ತೀವ್ರ ಬೇಸರ ಆಯ್ತು. ಕಡೇ ಸಾರಿ ನೋಡೋಕ್ಕೆ ಅಂತ ಹೋಗಿದ್ದೆ. ಆಗ ಅಪ್ಪ ಹೇಳ್ತಾ ಇದ್ರು, ಸಾಯೋವಾಗ ಅಪ್ಪಾನೆ ಜೊತೆಗಿದ್ರಂತೆ, ಅತ್ತೆ ಅಂತು "ಲೋ ಸೀನ, ಸತ್ತಿದ್ದಾನೆ ಬಿಡೊ" ಅಂತ ಅಂದೇ ಬಿಟ್ರಂತೆ. ಮತ್ತೆ ಮತ್ತೆ ಬೇಸರ ಆಗ್ತಿತ್ತು.
***
"ಯಾವ ವ್ಯಕ್ತೀಗೂ ಆತನದೇ ಆದ ನೆಲೆ ಅನ್ನೋದು ಇಲ್ಲವೇ ಇಲ್ಲ. ಅದು ಬರೀ ಕಲ್ಪನೆ. ಇದೆ ಅನ್ನೋ ಭ್ರಮೆಯಲ್ಲಿ ಬದುಕೋದು ಅಷ್ಟೆ."
"ಗುರುಗಳೇ(ನನ್ನ ಮಿತ್ರನಿಗೆ ನಾವು ಪ್ರೀತಿಯಿಂದ ಹೀಗೆ ಗುರುಗಳೆ ಅಂತ ಕರಿತೀವಿ) ಅದೇಗೆ ಸಾದ್ಯ? ಅದನ್ನ ನಾವು ಪ್ರಶ್ನಿಸೋಕ್ಕೂ ಆಗೋಲ್ಲ."
"ಅರವಿಂದ, ನೆಲೆ ಅನ್ನೋದು, ಅರ್ಥ ಅನ್ನೋದು, ಎಲ್ಲವೂ ಒಂದೆ ಎಂಬಂತೆ ಕಾಣ್ತಾ ಇದೆ. ಬದುಕಿಗೆ ಒಂದು ಅರ್ಥ ಇದೆ, ಆ ಅರ್ಥಕ್ಕಾಗಿ ಈ ಹೋರಾಟ ಎಲ್ಲಾ ಎನ್ನೋದು ಸಿದ್ದಾಂತ. ಮಾರ್ಗ ಏನೇ ಇರಲಿ, ಆದರೆ ಅರ್ಥ ಅನ್ನೋದೊಂದಿದೆ ಅನ್ನೋದು ಎಲ್ಲರೂ ಒಪ್ಪುವ ಸಂಗತಿ. ಈಗ ಆ Axiom ಅನ್ನ ಪ್ರಶ್ನಿಸೋದು ಹೇಗೆ? ಅರ್ಥ ಅನ್ನೋದೊಂದಿದೆ, ಆ ನೆಲೆಯ ಮೇಲೆ ನಾನು ನಿಂತಿದ್ದೇನೆ ಅನ್ನೋ ಭ್ರಮೆಯ ಮೇಲೆ ನಿಂತು ಸತ್ಯಕ್ಕೆ ಹಂಬಲಿಸ್ತಾ ಇದ್ದೇವೆ. ನಂಗೆ ಅನ್ನಿಸೋ ಮಟ್ಟಕ್ಕೆ ಎಂತದೂ ಇಲ್ಲ"
"ಅಯ್ಯೋ ಬಿಡಿ, ಅದಕ್ಕೆ ನಿಮ್ಮನ್ನ ಗುರುಗಳು ಅಂತ ಅನ್ನೋದು ನೋಡಿ."
***
ಸಂಗತಿಗಳನ್ನ ನಿರ್ಧರಿಸುವುದು ಅಷ್ಟು ಸುಲಭವಾಗಿರಲಿಲ್ಲ ನಂಗೆ. ವೈಶಾಖಿ ಅನ್ನೋದು ಬರೀ ಹೆಸರಾಗಿರಲಿಲ್ಲ, ಅಥವಾ ಬರೀ ಹುಡುಗಿಯೂ ಆಗಿರಲಿಲ್ಲ.
"ಅರು ಮದುವೇ ಆಗಬೇಕು ಅಂತ ಅನ್ನಿಸ್ತಾ ಇದೆ, ಯಾರೋ ಒಬ್ಬರನ್ನ. ಹುಡುಕಿ ಸದ್ಯ ಮದುವೆ ಆಗಬೇಕು. ಮನೇಲಿ ಒತ್ತಡ. ಜೊತೆಗೆ ನಂಗೂ ಅನ್ನಿಸ್ತಾ ಇದೆ, ಬೇರೆ ಏನಿದೆ ಮಾಡಲಿಕ್ಕೆ ಅಂತ?"
ಬೇರೆ ಏನೂ ಇರಲಿಲ್ಲವೆ? ಇರುವುದೇ ಇಲ್ಲವೆ? ಅಂದು ಅರ್ಥದ ಪ್ರಶ್ನೆ ನಂಗೆ ಹುಡುಗಿಯ ರೂಪವಾಗಿ ಎದುರು ಕಾಡಿತ್ತು.
"ಹೇ ಅರು, ನಂದು ಮದುವೆ ಕಣೋ. ಮುಂದಿನ ತಿಂಗಳು ಜುಲೈ ೧೩ ನೇ ತಾರೀಖು. ಕಂಡೀತ ಬರಬೇಕು."
ಒಂದು ರೂಪಕ ಉರಿಯುತ್ತಿರುವುದು ಕಂಡಿತು. ಅದು ಬೆಳಕ, ಬೆಂಕಿಯ ತಿಳಿಯಲಿಲ್ಲ. ನಾನು ಸುಮ್ಮನಾಗಿ ಹೋದೆ.
***
"ಗುರುಗಳೆ ನೀವು ಹೇಳ್ತೀರ, ಅರ್ಥವಿಲ್ಲ ಏನೂ ಇಲ್ಲ ಅಂತ. ಆ ಒಂದು ಅರ್ಥಕ್ಕಾಗಿ, ನೆಲೆಗಾಗಿ ನಾನು ಒಂದು ಸಂಬಂಧಾನೆ ಕಳ್ದುಕೊಂಡು ಬಿಟ್ಟೆ.
ಅವತ್ತು ವೈಶಾಖಿ ಕೇಳಿದ್ಲು
"ಹೇ ನಿಂಗೆ ಬದುಕಿನ ಅರ್ಥ ಗೊತ್ತೇನೊ? ಅಂತ ಅಂದ್ರೆ, ನೀನು ಯಾಕೆ ಬದುಕಬೇಕು ಅಂತ ಇದ್ದೀಯ?"
"ಸೃಷ್ಠಿಯನ್ನ ಅರೀಬೇಕು. ಪ್ರಕೃತೀನ ಅದರ ಆಳದಲ್ಲಿ ತಿಳೀಬೇಕು. ಒಬ್ಬ ವಿಜ್ನಾನಿಯಾಗಿ ಕಾರಣಗಳಿಂದ, ತರ್ಕದಿಂದ ತಿಳಿಯಬೇಕು. ಒಬ್ಬ ಕವಿಯಾಗಿ ಅದನ್ನ ಅನುಭವಿಸಬೇಕು. ಈಗ ಸದ್ಯ PhDಗೆ ಹೋಗಬೇಕು. ನಿಂದೇನು ಕತೆ?"
"ನಂಗೆ ಹುಟ್ಟಿಸಬೇಕು. ನಂಗೆ ಮಗೂನ ಹುಟ್ಟಿಸಬೇಕು ಅಂತ ಆಸೆ. ಅದು ಬರೀ ಆಸೆಯಲ್ಲ. ಅದೇ ನನ್ನ ಬದುಕಿನ ಅರ್ಥ ಕೂಡ. ನಿಂಗೆ ತಾಕತ್ತಿದೆಯ, ನನ್ನಲ್ಲಿ ಮಕ್ಕಳನ್ನುಟ್ಟಿಸೋಕೆ? ಹಾಗಾದರೆ ಬಾ, ಈಗಲೆ ಮದುವೆಯಾಗು."

ಅಲ್ಲಿಗೆ ಎಲ್ಲವೂ ಮುಗಿದಿತ್ತು ಗುರುಗಳೆ. ಮಕ್ಕಳನ್ನ ಹುಟ್ಟಿಸೋದು ಅಷ್ಟು ಸುಲಭ ಅಲ್ಲ. ನನ್ನ ನೆಲೆ ಹುಟ್ಟಿನ ಅರಿವಾಗಿತ್ತು, ಹುಟ್ಟೇ ಅವಳ ನೆಲೆಯಾಗಿತ್ತು. ಅದಕ್ಕೆ ಈಗಲೂ ಅರ್ಥ, ನೆಲೆ ಅಂದರೆ ಭಯವಾಗುತ್ತೆ. ಈ ಪ್ರಶ್ನೆಗಳನ್ನ ಪಕ್ಕಕ್ಕೆ ಇಟ್ಟೂ, ಬದುಕಬೇಕಿದೆ. ಅರಿವು, ಹಾಗು ಅದರ ಅನುಭವ ತುಂಬಾ ಆಳಕ್ಕೆ ನನ್ನನ್ನ ಕರ್ಕೊಂಡು ಹೋಗ್ತಾ ಇದೆ. ಆಳದಲ್ಲಿ ಬದುಕನ್ನ ಅನುಭವಿಸಿಬಿಡಬೇಕು ನೋಡಿ. ಅಷ್ಟೆ."

2 ಕಾಮೆಂಟ್‌ಗಳು:

  1. ಪ್ರಿಯ ಅರವಿಂದ ಅವರಿಗೆ
    ನಮಸ್ಕಾರ.
    ನಿಮ್ಮ ಕತೆ ಓದಿದೆ--ಕವಿತೆಗಳಂತೆಯೇ ಸಾಂದ್ರವಾಗಿದೆ. ನೀವೇನೋ ಹುಡುಕುತ್ತಿದ್ದೀರಿ, ಇದೊಂದು ಹಂತ; ಆಮೇಲೆ ಅವೇ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ; ಇದು ಇನ್ನೊಂದು ಹಂತ. ಹುಡುಕೋದಕ್ಕಾಗಲಿ, ಕಾಣೋದಕ್ಕಾಗಲಿ ಏನೂ ಇಲ್ಲ ಎನ್ನೋ ಹಂತವೂ ಇದೆ. ಹಾಗೂ ಇವು ಯಾವುವೂ ಈ ಕ್ರಮದಲ್ಲೇ ಸಾಗಬೇಕೆಂದೂ ಇಲ್ಲ. ಎಲ್ಲಿ ಸಾಗುವುದು? ಎಲ್ಲಿ ಹೋದರೂ ಮನುಷ್ಯ ಇದ್ದಲ್ಲೆ ಇರುತ್ತಾನೆ.

    ಕೆ. ವಿ. ತಿರುಮಲೇಶ್

    ಪ್ರತ್ಯುತ್ತರಅಳಿಸಿ
  2. "ನನ್ನ ನೆಲೆ ಹುಟ್ಟಿನ ಅರಿವಾಗಿತ್ತು, ಹುಟ್ಟೇ ಅವಳ ನೆಲೆಯಾಗಿತ್ತು" --ಎಂಥಾ ಡೈಲಾಗು ಮಾರ್ರೆ! (ವ್ಯಾಕರಣ ದೋಷ ಬಿಟ್ಹಾಕಿ... :P)

    ಪ್ರತ್ಯುತ್ತರಅಳಿಸಿ